ತುಮಕೂರು

ತುಮಕೂರು ನಗರ `ಸ್ಮಾರ್ಟ್ ಸಿಟಿ’ ಆಗುತ್ತಿರುವ ಹಿನ್ನೆಲೆಯಲ್ಲಿ ಅದರ ಭಾಗವಾಗಿ ತುಮಕೂರು ನಗರದ ಡಾ.ಎಸ್.ರಾಧಾಕೃಷ್ಣನ್ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆಯ ಕೆಳಭಾಗದಲ್ಲಿ ತುಮಕೂರು ಸ್ಮಾರ್ಟ್ಸಿಟಿ ಕಂಪನಿಯು ನಿರ್ಮಿಸಿರುವ `ಸ್ಮಾರ್ಟ್ ಮಳಿಗೆ’ಗಳನ್ನು ಶುಕ್ರವಾರ ಹರಾಜು ಮೂಲಕ ವಿಲೇವಾರಿ ಮಾಡಲಾಯಿತು.
ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಹರಾಜು ಪ್ರಕ್ರಿಯೆಯನ್ನು ಸ್ಮಾರ್ಟ್ಸಿಟಿ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್, ಪಾಲಿಕೆಯ ಕಂದಾಯಾಧಿಕಾರಿ ಯೋಗಾನಂದ್ ಮತ್ತು ಸಿಬ್ಬಂದಿ ವರ್ಗದವರು ನಡೆಸಿದರು.
ಈ ಸಂದರ್ಭದಲ್ಲಿ ಮೇಯರ್ ಲಲಿತಾ ರವೀಶ್ (21 ನೇ ವಾರ್ಡ್), ತೆರಿಗೆ ನಿರ್ಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್), ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಎಸ್.ಗಿರಿಜಾ (15 ನೇ ವಾರ್ಡ್), ವಿರೋಧ ಪಕ್ಷ (ಬಿಜೆಪಿ)ದ ನಾಯಕ ಸಿ.ಎನ್.ರಮೇಶ್ (31 ನೇ ವಾರ್ಡ್) ಹಾಗೂ ಕಾರ್ಪೋರೇಟರ್ಗಳಾದ ಜೆ.ಕುಮಾರ್ (7 ನೇ ವಾರ್ಡ್), ಬಿ.ಎಸ್.ಮಂಜುನಾಥ್ (17ನೇ ವಾರ್ಡ್), ಶಿವರಾಂ (24 ನೇ ವಾರ್ಡ್), ಎಚ್.ಮಲ್ಲಿಕಾರ್ಜುನಯ್ಯ (26 ನೇ ವಾರ್ಡ್), ವಿಷ್ಣುವರ್ಧನ್ (30 ನೇ ವಾರ್ಡ್), ಶ್ರೀನಿವಾಸ್ (20 ನೇ ವಾರ್ಡ್), ಇನಾಯತ್ ಉಲ್ಲಾ ಖಾನ್ (16 ನೇ ವಾರ್ಡ್), ಮಹೇಶ್ (5ನೇ ವಾರ್ಡ್), ಎಂ.ಕೆ.ಮನು (11ನೇ ವಾರ್ಡ್) ಮೊದಲಾದವರು ಉಪಸ್ಥಿತರಿದ್ದು ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಿದರು.
7 ಮಳಿಗೆಗಳ ಹರಾಜು
ಮೇಲ್ಸೇತುವೆ ಕೆಳಭಾಗ ಒಟ್ಟು 10 `ಸ್ಮಾರ್ಟ್ ಮಳಿಗೆ`ಗಳಿವೆ. ಇವುಗಳ ಪೈಕಿ 3 ಮಳಿಗೆಗಳನ್ನು ಹಾಪ್ಕಾಮ್ಸ್, ನಂದಿನಿ ಪಾರ್ಲರ್ ಮೊದಲಾದ ಸರ್ಕಾರಿ ಸಂಸ್ಥೆಗಳಿಗೆಂದು ಮೀಸಲಿರಿಸಲಾಗಿದೆ. ಮಿಕ್ಕ 7 ಮಳಿಗೆಗಳನ್ನು ವಿಕಲಚೇತನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ಎಂದು ವಿಂಗಡಿಸಿ ಮಾಸಿಕ ಬಾಡಿಗೆಗೆ ಹರಾಜು ನಡೆಸಲಾಗಿದೆ.
ಉತ್ತರದ ಕಡೆಯಿಂದ 1 ನೇ ಸಂಖ್ಯೆಯ ಮಳಿಗೆ ಬ್ಯಾಟಪ್ಪ ಎಂಬುವವರಿಗೆ ಮಾಸಿಕ 5300 ರೂ.ಗಳಿಗೆ, 2 ನೇ ಸಂಖ್ಯೆಯ ಮಳಿಗೆಯು ಲಿಂಗಣ್ಣ ಎಂಬುವವರಿಗೆ 6300 ರೂ.ಗಳಿಗೆ, 3 ನೇ ಸಂಖ್ಯೆಯ ಮಳಿಗೆಯು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ವರದರಾಜು ಎಂಬುವವರಿಗೆ 1500 ರೂ.ಗಳಿಗೆ, 5 ನೇ ಸಂಖ್ಯೆಯ ಮಳಿಗೆಯು ರಾಮಕ್ಕ ಎಂಬುವವರಿಗೆ 4000 ರೂ.ಗಳಿಗೆ, 7 ನೇ ಸಂಖ್ಯೆಯ ಮಳಿಗೆಯು ರಾಮಕೃಷ್ಣ ಎಂಬುವವರಿಗೆ 4000 ರೂ.ಗಳಿಗೆ, 8 ನೇ ಸಂಖ್ಯೆಯ ಮಳಿಗೆಯು ವಿಕಲಚೇತನರಿಗೆ ಮೀಸಲಿದ್ದು ವಿನಯ್ ಎಂಬುವವರಿಗೆ 1250 ರೂ.ಗಳಿಗೆ, 10 ನೇ ಸಂಖ್ಯೆಯ ಮಳಿಗೆಯು ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ನಟರಾಜ್ ಎಂಬುವವರಿಗೆ 1650 ರೂ. ಮಾಸಿಕ ಬಾಡಿಗೆಗೆ ಹರಾಜು ಆದವು.
ಈ 10 ಮಳಿಗೆಗಳಲ್ಲಿ 4, 6 ಮತ್ತು 9 ನೇ ಸಂಖ್ಯೆಯ ಮಳಿಗೆಗಳನ್ನು ಸರ್ಕಾರಿ ಸಂಸ್ಥೆಗಳಿಗಾಗಿ ಮೀಸಲಿಡಲಾಗಿದೆ.
20,000 ರೂ. ಠೇವಣಿ ಹರಾಜಾಗಿರುವ ಸದರಿ `ಸ್ಮಾರ್ಟ್ ಮಳಿಗೆ`ಗೆ ತಲಾ 20,000 ರೂಗಳನ್ನು ಠೇವಣಿಯಾಗಿ ನಿಗದಿಪಡಿಸಲಾಗಿದೆ. ಹರಾಜಿನ ಕಾಲಾವಧಿಯು 2 ವರ್ಷಗಳದ್ದಾಗಿದೆ.
ಈ ಮಳಿಗೆಗಳಲ್ಲಿ ಮಾಂಸಾಹಾರ, ಬೀಡಿ-ಸಿಗರೇಟು ಮೊದಲಾದ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ ಎಂಬುದು ಸಾಮಾನ್ಯ ನಿರ್ಬಂಧಗಳಾಗಿವೆ. ಮುಂದಿನ 2 ವರ್ಷಗಳ ಬಳಿಕ ಮತ್ತೆ ಹರಾಜು ಆಗಲಿದೆ ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
