ಉಪಚುನಾವಣೆ :ಕಡೆಯ ದಿನ ಹಲವು ನಾಮ ಪತ್ರ ವಾಪಸ್

ಬೆಂಗಳೂರು

     ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಇಂದು ಹಲವರು ನಾಮಪತ್ರ ಹಿಂಪಡೆಯುವುರೊಂದಿಗೆ ಮೂರೂ ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

     ಹುಣಸೂರು, ಕೆ.ಆರ್.ಪೇಟೆ,ಯಶವಂತಪುರ,ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರಂ, ಅಥಣಿ, ಗೋಕಾಕ್, ಕಾಗವಾಡ, ಹಿರೇಕೆರೂರು ಸೇರಿದಂತೆ ಒಟ್ಟು ಹದಿನೈದು ಕ್ಷೇತ್ರಗಳಿಗೆ ಡಿಸೆಂಬರ್ ಐದರಂದು ಚುನಾವಣೆ ನಡೆಯಲಿದ್ದು ಮೂರೂ ಪಕ್ಷಗಳಿಗೆ ಇದು ಪ್ರತಿಷ್ಟೆಯ ಪ್ರಶ್ನೆಯಾಗಿ ಪರಿವರ್ತನೆ ಆಗಿದೆ.

    ಆಡಳಿತಾರೂಢ ಬಿಜೆಪಿ ಸರ್ಕಾರ ಸರಳ ಬಹುಮತ ಪಡೆಯಲು ಕನಿಷ್ಟ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದ್ದು ಸರ್ಕಾರವನ್ನು ಮತ್ತಷ್ಟು ಸುಭದ್ರಗೊಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಕನಿಷ್ಟ ಹತ್ತರಿಂದ ಹನ್ನೆರಡು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಗುರಿ ಇರಿಸಿಕೊಂಡಿದೆ.ಹದಿನೈದು ಕ್ಷೇತ್ರಗಳ ಉಪಚುನಾವಣೆ ಪೂರ್ಣಗೊಂಡರೆ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಪ್ರತಿನಿಧಿಗಳು ವಿಧಾನಸಭೆಯಲ್ಲಿ ಉಪಸ್ಥಿತರಿರಲಿದ್ದು ಸರ್ಕಾರ ಸರಳ ಬಹುಮತಕ್ಕೆ 111 ಸ್ಥಾನಗಳನ್ನು ಹೊಂದಲೇಬೇಕಿದೆ.

     ಉಳಿದಂತೆ ರಾಜರಾಜೇಶ್ವರಿ ನಗರ,ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಸರ್ವೊಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಆ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವವರೆಗೆ ಸರ್ಕಾರಕ್ಕೆ ಸರಳ ಬಹುಮತ ಇರಬೇಕು ಎಂದರೆ 111 ಶಾಸಕರು ಅದರ ಪರವಾಗಿರಬೇಕು.ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇರವಾಗಿಯೇ ಸಚಿವರಿಗೆ ಈ ಕುರಿತು

ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು:

    ಉಪಚುನಾವಣೆಯಲ್ಲಿ ನಿಮಗೆ ವಹಿಸಿಕೊಟ್ಟಿರುವ ಕ್ಷೇತ್ರಗಳಲ್ಲಿ ಕ್ಯಾಂಡಿಡೇಟುಗಳನ್ನು ಗೆಲ್ಲಿಸದಿದ್ದರೆ ತಲೆದಂಡ ತೆರಲು ಸಜ್ಜಾಗಿರಿ ಎಂದಿದ್ದರು.ಅದರ ಪ್ರಕಾರ ರಾಜ್ಯ ಸಚಿವ ಸಂಪುಟದ ಬಹುತೇಕ ಸಚಿವರು ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ತೆರಳಿದ್ದು ಇದರ ಪರಿಣಾಮವಾಗಿ ಆಡಳಿತ ಕೇಂದ್ರ ಈಗಾಗಲೇ ಬಿಕೋ ಎನ್ನತೊಡಗಿದೆ.

    ಆಡಳಿತ ಪಕ್ಷದ ಮುಂದಿರುವ ಸವಾಲು ಹೀಗಿದ್ದರೆ ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ಪಕ್ಷ ಕೂಡಾ ಹೆಚ್ಚು ಸೀಟುಗಳನ್ನು ಗೆಲ್ಲಬೇಕಾದ ಅನಿವಾರ್ಯತೆಗೆ ಗುರಿಯಾಗಿದೆ.ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯ ಸಂದರ್ಭದಲ್ಲಿ ಬಿಜೆಪಿ ಕಡೆ ಹೋದ ಹದಿನೇಳು ಶಾಸಕರ ಪೈಕಿ ಹದಿನಾಲ್ಕು ಶಾಸಕರು ಕಾಂಗ್ರೆಸ್ ಪಾಳೆಯದವರೇ ಆಗಿದ್ದು,ಈ ಪೈಕಿ ಹನ್ನೆರಡು ಕ್ಷೇತ್ರಗಳು ಹಿಂದೆ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳೇ ಆಗಿವೆ.

     ಹೀಗಾಗಿ ಆಯಾ ಕ್ಷೇತ್ರಗಳಲ್ಲಿ ಮರಳಿ ಪಕ್ಷದ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿಕೊಳ್ಳುವ ಆ ಮೂಲಕ ಪಕ್ಷದ ಪ್ರಾಬಲ್ಯ ಉಳಿದುಕೊಂಡಿದೆ ಎಂದು ತೋರಿಸಬೇಕಾದ ಅನಿವಾರ್ಯತೆ ಕೈ ಪಾಳೆಯಕ್ಕೆ ಇದೆ.ಈ ಮಧ್ಯೆ ಜೆಡಿಎಸ್‍ನ ಮೂರು ಮಂದಿ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಲ್ಲದೆ ಬಿಜೆಪಿ ಕಡೆ ಹೋಗಿದ್ದರು.

    ಹುಣಸೂರು,ಕೆ.ಆರ್.ಪೇಟೆ ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಜೆಡಿಎಸ್ ಹರಸಾಹಸ ನಡೆಸಿದ್ದು ಅದರ ಸಾಹಸಕ್ಕೆ ಯಾವ ಪ್ರತಿಫಲ ಸಿಗಲಿದೆ ಎಂದು ಕಾದು ನೋಡ ಬೇಕಾಗಿದೆ .ಬೆಳಗಾಂ ಜಿಲ್ಲೆಯ ಅಥಣಿ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದು ಇದರ ಹಿಂದೆ ವಿವಿಧ ಶಕ್ತಿಗಳು ಕೆಲಸ ಮಾಡಿವೆ.

    ಇದರ ಪರಿಣಾಮವಾಗಿ ಜೆಡಿಎಸ್‍ಗೆ ಅಲ್ಪ ಹಿನ್ನಡೆಯಾಗಿದ್ದರೂ ಈ ಹಿಂದೆ ಅದು ಕಳೆದುಕೊಂಡ ಕ್ಷೇತ್ರಗಳ ಪೈಕಿ ಇವೆರಡು ಕ್ಷೇತ್ರಗಳು ಇಲ್ಲ ಎಂಬುದಷ್ಟೇ ಅದರ ಸಮಾಧಾನ.ಒಟ್ಟಿನಲ್ಲಿ ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸಲಿದೆ ಎನ್ನಲಾಗುತ್ತಿರುವ ಹಾಗೆಯೇ ಯಡಿಯೂರಪ್ಪ ಅವರ ಸಿಎಂಗಿರಿಯನ್ನೂ ನಿರ್ಧರಿಸಲಿದೆ ಎನ್ನಲಾಗುತ್ತಿರುವ ಉಪಚುನಾವಣೆಯ ಕಣಕ್ಕೆ ಈಗ ರಂಗೇರಿದ್ದು ದಿನಕಳೆದಂತೆ ಮೂರೂ ರಾಜಕೀಯ ಪಕ್ಷಗಳ ಪೈಪೋಟಿ ತಾರಕಕ್ಕೇರಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link