ದಾವಣಗೆರೆ:
ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿರುವುದು ಪ್ರಸ್ತುತ ಸಂದರ್ಭದ ಅನಿವಾರ್ಯತೆಯಾಗಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಇಲ್ಲಿನ ಶಿವಯೋಗಾಶ್ರಮದಲ್ಲಿ ಗುರುವಾರ ವಿರಕ್ತಮಠ, ಬಸವ ಕೇಂದ್ರ, ಶ್ರೀ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಲಾಕ್ಡೌನ್ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಜಾತಿ, ಜಾತಿಗಳ ನಡುವೆ ಸಾಮಾಜಿಕ ಅಸ್ಪøಶ್ಯತೆಯನ್ನು ತೊಡೆದುಹಾಕಲು ಎಲ್ಲ ದಾರ್ಶನಿಕರು ಶ್ರಮಿಸಿದ್ದರು. ಆದರೆ, ಈಗ ದೇಹ ಆರೋಗ್ಯವಾಗಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.ಕೊರೋನಾ ಮಹಾಮಾರಿಯು ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸಿದೆ. ಜನರಿಗೆ ಜೀವಭಯ ಉಂಟುಮಾಡಿದೆ. ಹಿಂದೆಲ್ಲಾ ಯುದ್ಧಗಳಲ್ಲಿ ಸಾಕಷ್ಟು ಜನ ಸಾವಿಗೀಡಾಡುತ್ತಿದ್ದರು. ಆದರೆ ಇಂದು ಇಂತಹ ವೈರಸ್ ಕಾರಣದಿಂದ ಜನರು ಮರಣ ಹೊಂದುವಂತಾಗಿದೆ. ಪ್ರಾಣಿಗಳಿಗೂ ಇದು ಹರಡುತ್ತಿರುವುದು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಎಂದರು.
ಜನರಿಂದ ಜನರಿಗೆ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಲಾಕ್ಡೌನ್ ಘೋಷಿಸಿರುವುದರಿಂದ ಸಾಕಷ್ಟು ಬಡವರಿಗೆ ತೊಂದರೆಯಾಗಿದೆ. ಅಂತಹ ಸಂತ್ರಸ್ಥರಿಗೆ ನೆರವು ನೀಡುವ ಉದ್ದೇಶದಿಂದ ಶ್ರೀಮಠದಿಂದ 300 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುತ್ತಿದ್ದೇವೆ ಎಂದರು.
ಈ ಕಿಟ್ 5 ಕೆ.ಜಿ. ಅಕ್ಕಿ, ತಲಾ 1 ಕೆ.ಜಿ. ತೊಗರಿಬೇಳೆ, ಗೋಧಿ ಹಿಟ್ಟು, ಉಪ್ಪು, ಅವಲಕ್ಕಿ, 1 ಲೀಟರ್ ಅಡುಗೆ ಎಣ್ಣೆ, ಮೈ ಸೋಪ್ ಒಳಗೊಂಡಿದೆ. ದಿನವೂ ಒಂದೊಂದು ಸಮುದಾಯಕ್ಕೆ ಆಹಾರ ಕಿಟ್ ವಿತರಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ , ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ, ಕಾಂಗ್ರೆಸ್ ಮುಖಂಡ ಡಾ.ನಸೀರ್ ಅಹಮದ್, ಶಿವಯೋಗಾಶ್ರಮ ಟ್ರಸ್ಟ್ನ ಎಂ.ಜಯಕುಮಾರ್, ಎಂ.ಕೆ.ಬಕ್ಕಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/09_dvg_02.gif)