ಸಮರ್ಥ ಸೇವೆಗೆ ಅವಶ್ಯಕವಾದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ : ಆರ್.ಚೇತನ್

ದಾವಣಗೆರೆ 

        ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಯೇ ನಮ್ಮ ಸಮರ್ಥ ಸೇವೆಗೆ ಉತ್ತಮ ಸಾಧನವಾಗಿದ್ದು, ಕ್ರೀಡೆಗಳು ಇಂತಹ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯುವಲ್ಲಿ ಸಹಕಾರಿಯಾಗಿವೆ ಎಂದು ಜಿಲ್ಲಾ ಗೃಹರಕ್ಷಕದಳ ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್. ಚೇತನ್ ಅಭಿಪ್ರಾಯಪಟ್ಟರು.

          ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಇಂದು ಏರ್ಪಡಿಸಲಾಗಿದ್ದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳ ಗೃಹರಕ್ಷಕದಳ ಪೂರ್ವ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು.

          ಕೇಲವ ಗೆಲ್ಲುವುದಕ್ಕಾಗಿ ಮಾತ್ರ ಕ್ರೀಡೆಯನ್ನು ಅಳವಡಿಸಿಕೊಳ್ಳದೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಈ ಕ್ರೀಡೆಯನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು.

           ದಿನನಿತ್ಯದ ಕರ್ತವ್ಯದೊಂದಿಗೆ ನೀವುಗಳು ಕ್ರೀಡಾಕೂಟಕ್ಕೆ ಅಭ್ಯಾಸಗಳನ್ನು ಮಾಡುತ್ತಿದ್ದೀರ. ನಿಮ್ಮ ಕ್ರೀಡಾ ಸಾಮಥ್ರ್ಯವನ್ನು ತೋರಲು ಇದೊಂದು ಉತ್ತಮ ಅವಕಾಶವಾಗಿದೆ. ಕ್ರೀಡೆಗಳನ್ನು ಕೆಲವೇ ದಿನಗಳಲ್ಲಿ ಅಭ್ಯಾಸ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಇದೊಂದು ಹವ್ಯಾಸದ ರೀತಿ ನಿರಂತರವಾಗಿ ಅಭ್ಯಾಸದಲ್ಲಿ ನಿರತರಾಗಬೇಕು ಎಂದರು.

          ನಡಿಗೆ, ಓಟ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಹೀಗೆ ವಿವಿಧ ಕ್ರೀಡೆಗಳು ನಮ್ಮಲ್ಲಿ ಚೈತನ್ಯ ತುಂಬುವುದರೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಕ್ರೀಡೆ ಎಂದ ಮೇಲೆ ಸೋಲು ಮತ್ತು ಗೆಲುವು ಸಾಮಾನ್ಯವಾಗಿದ್ದು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಹೀಗೆಯೇ ಜೀವನದಲ್ಲಿ ಬರುವ ಏಳು-ಬೀಳುಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಗ್ಗಬೇಕು.

           ದಿನನಿತ್ಯವೂ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಬೇಕೆಂದು ಕಿವಿಮಾತು ಹೇಳಿದ ಅವರು ಕೇವಲ ಎರಡೇ ದಿನಗಳಲ್ಲಿ ತರಾತುರಿಯಲ್ಲಿ ಜಿಲ್ಲಾ ಕ್ರೀಡಾಕೂಟಕ್ಕೆ ತಯಾರಿ ನಡೆಸಿದ್ದರೂ ಉತ್ತಮವಾಗಿ ಪೆರೇಡ್‍ನಲ್ಲಿ ಭಾಗವಹಿಸಿದ್ದೀರಿ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮವಾಗಿ ಆಟವಾಡಿ ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ತರಬೇಕೆಂದು ಹಾರೈಸಿದರು.

             ಗೃಹರಕ್ಷಕದಳದ ಕಮಾಂಡೆಂಟ್ ಡಾ. ಬಿ.ಹೆಚ್. ವೀರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳಕ್ಕೆ ಕ್ರೀಡಾ ಮನೋಭಾವ ರಕ್ತಗತವಾಗಿ ಬಂದಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನಕ್ಕೆ ಕ್ರೀಡೆ ಅತ್ಯಂತ ಸಹಕಾರಿಯಾಗಿದೆ.

           ಈ ಕ್ರೀಡಾಕೂಟವನ್ನು ದೇವರಬೆಳೆಕೆರೆಯಲ್ಲಿರುವ ತರಬೇತಿ ಕೇಂದ್ರದ ಆವರಣದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ತರಾತುರಿಯಲ್ಲಿ ನಡೆಯುತ್ತಿರುವ ಕಾರಣ ಈ ಬಾರಿ ಅಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕ್ರೀಡಾಕೂಟ ಅಥವಾ ಮತ್ತ್ಯಾವುದೇ ಗೃಹರಕ್ಷಕ ದಳದ ಕಾರ್ಯಕ್ರಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಸಹಕಾರ ಮತ್ತು ಬೆಂಬಲ ಸ್ಮರಣೀಯವಾದದ್ದು ಎಂದ ಅವರು ಕ್ರೀಡಾಪಟುಗಳು ಸ್ಪರ್ಧಾತ್ಮಕ ಮನೋಭಾವದಿಂದ ಪಾಲ್ಗೊಳ್ಳಬೇಕೆಂದು ಹೇಳಿ, ಎಲ್ಲರನ್ನೂ ವಂದಿಸಿದರು.

           ಶ್ರೀ ಮೈಲಾರಲಿಂಗೇಶ್ವರ ವಿದ್ಯಾಸಂಸ್ಥೆಯ ಉಪನ್ಯಾಸಕರು ಹಾಗೂ ಚಿತ್ರದುರ್ಗದ ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಸಿ.ಕೆ.ಸಿಂದ್ಯಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದಾವಣಗೆರೆ ಗೃಹರಕ್ಷಕ ದಳದ ಸ್ಟಾಫ್ ಆಫೀಸರ್ ಸರಸ್ವತಿ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಗೃಹರಕ್ಷಕದಳದ ಮಾಜಿ ಕಮಾಂಡೆಂಟ್ ಮಹಾಲಿಂಗಪ್ಪ, ಇತರೆ ಅಧಿಕಾರಿ ಸಿಬ್ಬಂದಿಗಳು, ಕ್ರೀಡಾಪಟುಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link