ಬೆಂಗಳೂರು
ಸಿಪಿಎಂ ರಾಜ್ಯ ಕಾರ್ಯದರ್ಶಿ ಹಾಗೂ ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾದ ಜಿ.ವಿ.ಶ್ರೀರಾಮರೆಡ್ಡಿ ಅವರನ್ನು ದುರ್ನಡತೆ ಆರೋಪದ ಮೇಲೆ ಪಕ್ಷದಿಂದ ವಜಾಗೊಳಿಸಲಾಗಿದೆ.
ಈ ತಿಂಗಳ 15 ಮತ್ತು 16ರಂದು ನಡೆದ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಪಿಎಂನ ಪ್ರಕಟಣೆ ತಿಳಿಸಿದೆ.ಯು.ಬಸವರಾಜು ಅವರನ್ನು ಪಕ್ಷದ ರಾಜ್ಯ ಸಮಿತಿ ನೂತನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.
ಈ ತಿಂಗಳ 18ರಂದು ಪಕ್ಷದ ರಾಜ್ಯ ಸಮಿತಿ ಸಭೆ ನಡೆದಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ವರು ಪಾಲಿಟ್ ಬ್ಯೂರೋ ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ಯು.ಬಸವರಾಜು ಅವರನ್ನು ರಾಜ್ಯ ಸಮಿತಿ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.
ಶ್ರೀರಾಮರೆಡ್ಡಿ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಹಣಕಾಸು ಅವ್ಯವಹಾರ ದೂರುಗಳು ಬಂದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಜನನಾಯಕರೆನಿಸಿರುವ ಶ್ರೀರಾಮರೆಡ್ಡಿ ಅವರು, ಬಾಗೇಪಲ್ಲಿ ಕೇತ್ರದಿಂದ 1994 ಹಾಗೂ 2004ರಲ್ಲಿ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸೋತಿದ್ದರು. ಸುಬ್ಬಾರೆಡ್ಡಿ 65,710 ಮತಗಳು, ಶ್ರೀರಾಮರೆಡ್ಡಿ 51,697 ಮತಗಳನ್ನು ಪಡೆದಿದ್ದರು.
2017ರಲ್ಲಿ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ವಿಜೆಕೆ ನಾಯರ್ ನಿರ್ಗಮಿಸಿದ ನಂತರ, ಅವರ ಸ್ಥಾನಕ್ಕೆ ಶ್ರೀರಾಮರೆಡ್ಡಿ ಅವರನ್ನು ನೇಮಿಸಲಾಗಿತ್ತು. ಕೇರಳದ ಶೋರ್ನೂರ್ ಶಾಸಕ ಪಿ.ಕೆ.ಶಸಿ ಅವರನ್ನು ಪಕ್ಷದಿಂದ 6 ತಿಂಗಳು ಅಮಾನತುಗೊಳಿಸುವುದಕ್ಕೂ ಕೇಂದ್ರೀಯ ಸಮಿತಿ ಒಪ್ಪಿಗೆ ನೀಡಿದೆ. ಡಿವೈಎಫ್ಐ ಮಹಿಳಾ ನಾಯಕಿಯೊಬ್ಬರು ಸಲ್ಲಿಸಿದ್ದ ದೂರನ್ನು ಆಧರಿಸಿ ಕೇರಳ ರಾಜ್ಯ ಸಮಿತಿ ಶಸಿ ಅವರನ್ನು ಅಮಾನತು ಮಾಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ