ಸಂಬಳಕ್ಕಾಗಿ ಜಗಳ ಕಾದ ಮುಖ್ಯಾಧಿಕಾರಿ, ಪೌರಕಾರ್ಮಿಕರು

ಹುಳಿಯಾರು

    ಮಾಸಿಕ ಸಂಬಳಕ್ಕಾಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಹಾಗೂ ಪೌರಕಾರ್ಮಿಕರು ಕಚೇರಿ ಎದುರಿಗೆ ಸಾರ್ವಜನಿಕರ ಎದುರಿನಲ್ಲಿ ಜಗಳ ಕಾದ ಘಟನೆ ಹುಳಿಯಾರಿನಲ್ಲಿ ಸೋಮವಾರ ನಡೆದಿದೆ.

     ಕಳೆದ 24 ತಿಂಗಳಿಂದ 17 ಮಂದಿ ಪೌರಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಪರಿಣಾಮ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದ್ದು ಸಾಲ ಸೋಲ ಮಾಡಿ ಬದುಕು ಸಾಗಿಸುತ್ತಿದ್ದೇವೆ. ನೀವು ಕೇಳಿದ ಎಲ್ಲಾ ದಾಖಲೆಗಳನ್ನೂ ಈಗಾಗಲೆ ಕೊಟ್ಟಿದ್ದು, ಸಂಬಳ ಕೊಡದೆ ಏಕೆ ಸತಾಯಿಸುತ್ತಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಕಚೇರಿ ಎದುರಿಗೆ ಪೌರಕಾರ್ಮಿಕರು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಇದರಿಂದ ಆಕ್ರೋಶಗೊಂಡ ಮುಖ್ಯಾಧಿಕಾರಿಗಳು ನನಗೂ ಸಂಬಳವಾಗಿಲ್ಲ.

     ನಿಮಗೆ ಸಂಬಳ ಮಾಡಿದಾಗಲೆ ನನಗೂ ಸಂಬಳ ಆಗೋದು. ನನ್ನ ಎದುರು ಕೂಗಾಡೋದು ಬಿಟ್ಟು ಟ್ರಜರಿಗೆ ಹೋಗಿ ಅಲ್ಲಿನ ಅಧಿಕಾರಿಗಳ ಎದುರು ಕೂಗಾಡಿ. ಪೌರಾಡಳಿತ ನಿರ್ದೇಶನಾಲಯದಿಂದ ಪತ್ರ ಹೋಗಿ 3 ತಿಂಗಳಾಗಿದ್ದರೂ ಪಪಂ ಅಕೌಂಟ್ ತೆರೆದಿಲ್ಲ. ಅವರು ಅಕೌಂಟ್ ತೆರೆದ ನಂತರ ಸರ್ಕಾರದಿಂದ ಸಂಬಳ ಬಂದು ಬೀಳುತ್ತದೆ. ಆಗ ನಾನು ಸಂಬಳ ಮಾಡೋದು ಎಂದು ರೇಗಿದರು.

     ಇದಕ್ಕೆ ಪ್ರತಿಯಾಗಿ ಈಗಾಗಲೇ ಮೂರ್ನಾಲ್ಕು ಬಾರಿ ಜಿಲ್ಲಾಧಿಕಾರಿಗಳು, ಟ್ರಜರಿ ಅಧಿಕಾರಿಗಳು, ಪೌರಾಡಳಿತ ನಿರ್ದೇಶಕರ ಬಳಿ ಅಲೆದಿದ್ದೇವೆ. ನಿಮ್ಮ ಮುಖ್ಯಾಧಿಕಾರಿಗಳು ಬಾರದೆ ನೀವು ಬಂದರೆ ಅಕೌಂಟ್ ಮಾಡೋಕಾ ಗುತ್ತೇನ್ರಿ ಎಂದು ಸಿಟ್ಟಾಗುತ್ತಾರೆ. ಪಪಂ ಸಿಬ್ಬಂದಿಯ ಸಂಬಳ ಮಾಡಿಸುವ ಹೊಣೆ ನಿಮ್ಮದಾಗಿದ್ದು, ನಿಮ್ಮ ನಿರ್ಲಕ್ಷ್ಯದಿಂದ ಸಂಬಳ ಲೇಟಾಗಿದೆ. ಪಪಂ ಆಗಿ ಒಂದೂವರೆ ವರ್ಷ ಆಗಿದ್ದರೂ 3 ತಿಂಗಳ ಹಿಂದೆ ಧರಣಿ ಮಾಡುವುದಾಗಿ ನಾವು ಬೆದರಿಕೆ ಹಾಕಿದಾಗ ಪೌರಾಡಳಿತದಿಂದ ಟ್ರಜರಿಗೆ ಪತ್ರ ಹೋಗಿದೆ. ನಂತರ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.

    ಇದರಿಂದ ಮತ್ತ್ತಷ್ಟು ಸಿಟ್ಟಿಗೆದ್ದ ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರು ಕೆಲಸ ಮಾಡದೆ ಕೆಲಸದ ಸಮಯದಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದಿರುವ ಹಾಗೂ ಕುಡಿದು ಬಂದು ದೌರ್ಜನ್ಯ ಮಾಡುತ್ತಿರುವ ನಿಮ್ಮ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಬೆದರಿಸಿದರು. ಇದಕ್ಕೂ ಬಗ್ಗದ ಪೌರಕಾರ್ಮಿಕರು ಬೆಳಗಿನ ಕರ್ತವ್ಯ ಮುಗಿಸಿಕೊಂಡು ಬಂದಿದ್ದು ಸಂಬಳ ಕೊಡದಿದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಂತಹ ಬಡಪಾಯಿಗಳ ಮೇಲೆ ಆಕ್ರೋಶಗೊಳ್ಳುವ ಬದಲು ಟ್ರಜರಿಗೆ ಹೋಗಿ ಅಕೌಂಟ್ ಮಾಡಿಸಿ, ಸಂಬಳ ಕೊಡಿಸಿ ಎಂದು ತಿರುಗೇಟು ನೀಡಿ ತಮ್ಮತಮ್ಮ ಕೆಲಸಕ್ಕೆ ತೆರಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link