ಹುಳಿಯಾರು
ಹುಳಿಯಾರಿನ ಶಾಲಾ ಆವರಣದಲ್ಲಿ ನಿರ್ಮಿಸಲು ಹೊರಟಿರುವ ನೂತನ ಗೋಡಾನ್ ಕಾಮಗಾರಿ ನಿಲ್ಲಿಸುವಂತೆ ಎಂಪಿಎಸ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ರವಿ ಮನವಿ ಮಾಡಿದ್ದಾರೆ.ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಫಿಶಿಯಲ್ ಕೋ ಆಪರೇಟಿವ್ ಸೊಸೈಟಿ ಅವರು ಗೋಡಾನ್ ನಿರ್ಮಿಸುವ ಸಲುವಾಗಿ ತಳಪಾಯಕ್ಕೆ ಗುಂಡಿ ತೆಗೆದಿದ್ದಾರಲ್ಲದೆ, ಬೇಸ್ಮೆಂಟ್ಗೆ ಕಲ್ಲುಗಳನ್ನು ಸಹ ಹೊಡೆಸಿದ್ದಾರೆ.
ಈ ಬಗ್ಗೆ ಅಫಿಶಿಯಲ್ ಸೊಸ್ಶೆಟಿಯವರನ್ನು ಪ್ರಶ್ನಿಸಿದರೆ, 14 ಜುಲೈ 1965 ರಲ್ಲಿ ಅಂದಿನ ತಹಸೀಲ್ದಾರ್ ಅವರು 60*40 ಅಳತೆಯ ನಿವೇಶನವನ್ನು ಮಂಜೂರು ಮಾಡಿದ್ದಾರೆಂದು, ಅಂದಿನ ಮನೆಗಳ ಮಂಜೂರಿ ಸರ್ಟಿಫಿಕೇಟ್ ಸಹ ತೋರಿಸುತ್ತಾರೆ.
ಆದರೆ ಅಂದಿನ ತಹಸೀಲ್ದಾರ್ ಕೊಟ್ಟಿರುವ ಸರ್ಟಿಫಿಕೇಟ್ನಲ್ಲಿ ಈ ನಿವೇಶನದ ಚೆಕ್ಬಂದಿ ಪೂರ್ವಕ್ಕೆ ಬಾಯ್ಸ್ ಪ್ರೈಮರಿ ಸ್ಕೂಲ್, ಪಶ್ಚಿಮಕ್ಕೆ ಲೈಟ್ ಆಫೀಸಿಗೆ ಕೊಟ್ಟಿರುವ ಜಾಗ, ಉತ್ತರಕ್ಕೆ ಮುಸಾಫರ ಖಾನ ಜಾಗ ಮತ್ತು ಸೊಸೈಟಿ ಗೋಡಾನ್, ದಕ್ಷಿಣಕ್ಕೆ ಸರ್ಕಾರಿ ಜಾಗ ಮತ್ತು ಸ್ಕೂಲ್ ಜಾಗ ಎಂದಿದೆ.
ವಾಸ್ತವವಾಗಿ ಹಾಲಿ ಕಟ್ಟುತ್ತಿರುವ ಜಾಗಕ್ಕೂ ಹಾಗೂ ತಹಸೀಲ್ದಾರ್ ಅವರು ನಮೂದಿಸಿರುವ ಚೆಕ್ಬಂದಿಗೂ ಗೊಂದಲ ಮೂಡಿದೆ. ಅಲ್ಲದೆ ಇವರು ಬಾಲಕಿಯರ ಕಾಲೇಜಿನ ಮುಂಭಾಗದಲ್ಲೆ, ಅದರಲ್ಲೂ ನಿತ್ಯ ಪ್ರಾರ್ಥನೆ ಸಲ್ಲಿಸಲಿರುವ ಏಕೈಕ ಜಾಗದಲ್ಲಿ ತಳಪಾಯ ತೆಗೆದಿದ್ದಾರೆ. ಇದರಿಂದ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತದೆ.
ಹಾಗಾಗಿ ತಹಸೀಲ್ದಾರ್ ಅವರು ಈ ಬಗ್ಗೆ ವಿಶೇಷ ಗಮನಹರಿಸಿ, 1965 ರಲ್ಲಿ ಕೊಟ್ಟ ಪತ್ರ ಇನ್ನೂ ಊರ್ಜಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ, ಊರ್ಜಿತವಾಗಿದ್ದ ಪಕ್ಷದಲ್ಲಿ ಕಾಲೇಜಿಗೆ ತೊಂದರೆಯಾಗುತ್ತಿರುವ ಜಾಗ ಬಿಟ್ಟು, ಬೇರೆಡೆ ಇವರಿಗೆ ಕಟ್ಟಡ ಕಟ್ಟಲು ಸ್ಥಳ ನಿಗದಿ ಮಾಡಿ ಇಬ್ಬರಿಗೂ ಅನುಕೂಲ ಆಗುವಂತೆ ನಿರ್ಧಾರ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
