ಗೂಗಲ್‍ಗೆ ಹೆಚ್ಚು ಅವಲಂಬಿತರಾಗದೆ ಸ್ವಯಂ ಜ್ಞಾನಗ್ರಣಿಗಳಾಗಿ

ತುಮಕೂರು:

     ಇಂದಿನ ವಿದ್ಯಾರ್ಥಿಗಳು, ವಿದ್ಯಾವಂತರೆನಿಸಿಕೊಂಡವರೇ ಹೆಚ್ಚಾಗಿ ಗೂಗಲ್ ಅವಲಂಬಿತರಾಗುತ್ತಿದ್ದು, ಇದರಿಂದ ನಮ್ಮ ಜ್ಞಾನಮಟ್ಟ ಹೆಚ್ಚಾಗುವುದಿಲ್ಲ. ಬದಲಾಗಿ ಪುಸ್ತಕ ಓದಿನ ಅನ್ವೇಷಕರಾಗುವ ಮೂಲಕ ನಾವೇ ಗೂಗಲ್ ಮಾಹಿತಿ ಅಡಕ ಮಾಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಎನ್.ಸಿ.ಸಿ. ಕರ್ನಾಟಕ-ಗೋವಾ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್ ಜನರಲ್ ಏರ್ ಕಮಡೋರ್ ಎಲ್.ಕೆ. ಜೈನ್ ಸಲಹೆ ನೀಡಿದರು.

    ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಅವರಿಗೆ ಮಂಗಳವಾರ ವಿವಿಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನ್ಯಾಶನಲ್ ಕೆಡೆಟ್ ಕೋರ್ (ಎನ್.ಸಿ.ಸಿ.) ವತಿಯಿಂದ ಗೌರವ ಕರ್ನಲ್ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

    ಸಾಧನೆಯೆಂಬುದು ಅನ್ವೇಷಣಾ ಮನೋಭಾವದಿಂದ ಸಾಧ್ಯವಾಗುತ್ತದೆ. ಅನ್ವೇಷಣಾ ಮನೋಭಾವ ಎನ್‍ಸಿಸಿ, ಎನ್‍ಎಸ್‍ಎಸ್‍ನಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಾಗ ವೃದ್ಧಿಯಾಗುತ್ತದೆ. ನೈತಿಕತೆ, ಪ್ರಾಮಾಣಿಕತೆ, ಶಿಸ್ತು, ವರ್ತನೆ ಇವೆಲ್ಲವೂ ನಮ್ಮನ್ನು ನಾಯಕತ್ವದೆಡೆಗೆ ಕೊಂಡೊಯ್ಯುವ ಸಾಧನಗಳು ಎಂದು ಕಿವಿಮಾತು ಹೇಳಿದರು.

   ಎನ್‍ಸಿಸಿ ಬೆಳವಣಿಗೆ ವಿಶ್ವಾಸ: ಕೊರೊನಾ ಕಾರಣಕ್ಕೆ ಬಹಳಷ್ಟು ತಿಂಗಳು ಮನೆಯಲ್ಲಿ ಉಳಿದಿರುವ ಮಕ್ಕಳು ಹೊರಬರಲು ಹಾತೊರೆಯುತ್ತಿದ್ದಾರೆ. ಇನ್ನೂ ಆರೇಳು ತಿಂಗಳಲ್ಲಿ ಲಸಿಕೆಬರಲಿದ್ದು ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿ ಎನ್‍ಸಿಸಿ ಗೌರವ ಕರ್ನಲ್ ಪದವಿಗೆ ಭಾಜನರಾಗಿರುವ ತುಮಕೂರು ವಿವಿ ಕುಲಪತಿ ಪ್ರೊ.ವೈ. ಎಸ್. ಸಿದ್ದೇಗೌಡ ಅವರ ನೇತೃತ್ವದಲ್ಲಿ ಎನ್‍ಸಿಸಿ ಚಟುವಟಿಕೆ ಈ ಭಾಗದಲ್ಲಿ ಅಗಾಧವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವ್ಯಕ್ತಿತ್ವ ಬೆಳವಣಿಗೆ ಕೇವಲ ತರಗತಿಯಿಂದ ಸಾಧ್ಯವಿಲ್ಲ

    ಪದವಿ ಸ್ವೀಕರಿಸಿದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಕೇವಲ ತರಗತಿಯ ನಾಲ್ಕು ಗೋಡೆಯ ಮಧ್ಯೆ ಸಾಧ್ಯವಿಲ್ಲ. ಎನ್‍ಎಸ್‍ಎಸ್, ಎನ್‍ಸಿಸಿ, ಸ್ಕೌಟ್ ಗೈಡ್ಸ್, ರೆಡ್‍ಕ್ರಾಸ್ ಚಟುವಟಿಕೆಗಳನ್ನು ನಮ್ಮಲ್ಲಿ ಶಿಸ್ತು, ಮಾನವೀಯ ಮೌಲ್ಯ, ಗುರಿ ಸಾಧನೆಯ ಛಲವನ್ನು ಬೆಳೆಸುತ್ತದೆ. ಪೊಲೀಸ್ ಅಧಿಕಾರಿ ಆಗಬೇಕೆಂದು ಬಯಸಿದ್ದ ನಾನು ಅಧ್ಯಾಪಕನಾದೆ. ಆದರೆ ಛಲಬಿಡದ ಪ್ರಯತ್ನ ನನಗೆ ಗೌರವ ಕರ್ನಲ್ ಹುದ್ದೆ ಸಿಗುವಂತೆ ಮಾಡಿದೆ. ಹಾಗಾಗಿ ಬದುಕಿನಲ್ಲಿ ಸ್ಪಷ್ಟ ಗುರಿಯೊಂದಿಗೆ ಹೆಜ್ಜೆ ಇಟ್ಟರೆ, ಅವಕಾಶಗಳು ಲಭಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

   ಗೌರವ ಕರ್ನಲ್ ಹುದ್ದೆಯ ಗೌರವ ನನಗೆ ಮಾತ್ರವಲ್ಲ. ಇಡೀ ವಿಶ್ವವಿದ್ಯಾಲಯಕ್ಕೆ ಸಂದ ಗೌರವವೆಂದು ಭಾವಿಸಿ, ಹುದ್ದೆಯ ಘನತೆ ಹೆಚ್ಚಿಸುವಂತೆ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು ಎನ್.ಸಿ.ಸಿ. ಕರ್ನಾಟಕ-ಗೋವಾ ನಿರ್ದೇಶನಾಲಯದ ಡೈರೆಕ್ಟರ್ ಕರ್ನಲ್ ಜೈ ಗೋವಿಂದ್, ಬೆಂಗಳೂರು ಎ ವಿಭಾಗದ ಅಫೀಶಿಯೇಟಿಂಗ್ ಗ್ರೂಪ್ ಕಮಾಂಡರ್ ಜರ್ನಲ್ ಪಂಕಜ್ ಶರ್ಮಾ, ತುಮಕೂರಿನ 4 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಶೈಲೇಶ್ ಶರ್ಮಾ, ವಿವಿ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯ್ಕ ಇತರರು ಉಪಸ್ಥಿತರಿದ್ದರು.

    ಅಭಿನಂದನೆ: ಇದೇ ವೇಳೆ ತುಮಕೂರು ಸಿಟಿಜನ್ ಫೋರಂ ಪರವಾಗಿ ರೆಡ್‍ಕ್ರಾಸ್ ಸಭಾಪತಿ ಎಸ್.ನಾಗಣ್ಣ, ಹೋಂಗೋರ್ಡ್ ನಿವೃತ್ತ ಕಮಾಂಡೆಂಟ್ ರಾಕ್‍ಲೈನ್ ರವಿಕುಮಾರ್, ಪ್ರದೀಪ್ ಸೇರಿದಂತೆ ಅನೇಕ ಗಣ್ಯರು, ವಿವಿ ಅಧ್ಯಾಪಕ ವೃಂದದವರು ಗೌರವ ಕರ್ನಲ್ ಹುದ್ದೆಗೆ ಭಾಜನರಾದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹಾಗೂ ಎನ್.ಸಿ.ಸಿ. ಕರ್ನಾಟಕ-ಗೋವಾ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್ ಜನರಲ್ ಏರ್ ಕಮಡೋರ್ ಎಲ್.ಕೆ. ಜೈನ್ ಅವರನ್ನು ಅಭಿನಂದಿಸಿದರು. ತುಮಕೂರಿನ ಎನ್‍ಸಿಸಿ ಅಧಿಕಾರಿ ವೃಂದದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link