ಕೋಳಿ-ಮಾಂಸದ ಅಂಗಡಿ ತ್ಯಾಜ್ಯದಿಂದ ನಗರದಲ್ಲಿ ಬೀದಿನಾಯಿ ಹಾವಳಿ ಹೆಚ್ಚಳ

ತುಮಕೂರು

     ‘‘ತುಮಕೂರು ನಗರದಲ್ಲಿರುವ ಕೋಳಿ ಅಂಗಡಿಗಳವರು ಮತ್ತು ಮಾಂಸದ ಅಂಗಡಿಗಳವರು ತಮ್ಮ ಮಳಿಗೆಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದೇ ನಗರದಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗಲು ಪ್ರಮುಖ ಕಾರಣವಾಗಿದೆ’’ ಎಂದು ತುಮಕೂರು ಮಹಾನಗರ ಪಾಲಿಕೆಯು ತೀರ್ಮಾನಕ್ಕೆ ಬಂದಿದೆ.

       ‘ನಗರದ ಅನೇಕ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದಾಗ ಈ ಅಂಶ ವೇದ್ಯವಾಗಿದೆ. ಆದ ಕಾರಣ ಇದೀಗ ಪಾಲಿಕೆಯು ಕ್ರಮ ಕೈಗೊಳ್ಳಲು ಮುಂದಾಗಿದೆ. ಕೋಳಿ ಮತ್ತು ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದು ಕಂಡುಬರದಿದ್ದರೆ, ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ, ಅಂಗಡಿಗಳನ್ನು ಮುಚ್ಚಿಸಲಾಗುವುದು’’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‌ಕುಮಾರ್ ಅವರು ‘‘ಪ್ರಜಾಪ್ರಗತಿ’’ಗೆ ತಿಳಿಸಿದರು.

      ‘‘ಈ ಹಿಂದೆ ನಗರದಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಅವರ ಕಡೆಯವರೇ ಒಬ್ಬರು ಪ್ರತಿನಿತ್ಯ ಸಂಗ್ರಹಿಸಿ, ವಿಲೇವಾರಿ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಅಂಗಡಿಗಳವರು ಇದಕ್ಕೆ ನಿಗದಿತ ಶುಲ್ಕ ನೀಡುವ ಪದ್ಧತಿಯನ್ನು ಅವರೇ ರೂಪಿಸಿಕೊಂಡಿದ್ದರು.

        ಆದರೆ ಈಗ ಅದು ಹೇಗೆ ನಡೆಯುತ್ತಿದೆ ಎಂಬುದು ಪರಿಶೀಲನಾರ್ಹ. ಏಕೆಂದರೆ ಇತ್ತೀಚೆಗೆ ತ್ಯಾಜ್ಯ ವಸ್ತುಗಳು ಸರಿಯಾಗಿ ವಿಲೇವಾರಿ ಆಗುತ್ತಿಲ್ಲವೆಂದು ತಿಳಿದುಬಂದಿದೆ. ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಸಮೀಪದಲ್ಲೇ ಎಸೆಯುತ್ತಿರುವುದರಿಂದ ಅಂತಹ ಕಡೆಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ಕಂಡುಬರುತ್ತಿದೆ.

        ಈ ಹಿನ್ನೆಲೆಯಲ್ಲಿ ಪಾಲಿಕೆಯು ಪರಿಶೀಲನೆ ನಡೆಸಲಿದೆ. ವಿವಿಧ ಬಡಾವಣೆಗಳಲ್ಲಿರುವ ಕೋಳಿ ಮತ್ತು ಮಾಂಸದ ಅಂಗಡಿಗಳಿಗೆ ತೆರಳಿ, ಅವರು ಹೊಂದಿರುವ ಲೈಸೆನ್ಸ್ ಬಗ್ಗೆ, ಪ್ರತಿನಿತ್ಯ ಅವರು ತ್ಯಾಜ್ಯವಸ್ತುವನ್ನು ಯಾರಿಗೆ ವಿಲೇವಾರಿ ಮಾಡುತ್ತಿದ್ದಾರೆಂಬ ಬಗ್ಗೆ ಪರಿಶೀಲಿಸಲಾಗುವುದು . ಒಂದು ವೇಳೆ ಅವರು ನಿಗದಿತ ವ್ಯಕ್ತಿಗೆ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲವೆಂಬುದು ದೃಢಪಟ್ಟರೆ,ಅಂಥವರ ಅಂಗಡಿಯ ಲೈಸೆನ್ಸ್ ರದ್ದುಪಡಿಸಿ ಅಂಗಡಿಯನ್ನು ಮುಚ್ಚಿಸಲಾಗುವುದು’’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap