ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆ: ಹಣ– ಮದ್ಯ ಸಾಗಣೆ ತಡೆಗೆ ಕ್ರಮ

ಹುಳಿಯಾರು

       ತುಮಕೂರು ಲೋಕಸಭಾ ಕ್ಷೇತ್ರದ ಗಡಿ ಭಾಗವಾದ ಹುಳಿಯಾರಿನಲ್ಲೂ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣಾ ಕಾವು ಏರುತ್ತಿದ್ದು, ಜಿಲ್ಲಾಡಳಿತವು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

        ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಾದ ಯಳನಾಡು ಮತ್ತು ಕೆಂಕೆರೆ ಬಳಿ ತನಿಖಾ ಠಾಣೆ (ಚೆಕ್‍ಪೋಸ್ಟ್) ತೆರೆಯಲಾಗಿದೆ. ಇಲ್ಲಿ ಕಂದಾಯ, ಅಬಕಾರಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಪ್ರ್ರತಿನಿತ್ಯ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯು ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರಲ್ಲದೆ ವಾಹನ ತಪಾಸಣೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗುತ್ತಿದೆ.

         ಮುಖ್ಯವಾಗಿ ನಾಲ್ಕು ಚಕ್ರದ ವಾಹನಗಳ ನೋಂದಣಿ ಸಂಖ್ಯೆ, ವಾಹನದಲ್ಲಿ ಪ್ರಯಾಣಿಸುವವರ ವೈಯಕ್ತಿಕ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ಕೊಳ್ಳಲಾಗುತ್ತಿದೆ. ವಿಶೇಷವಾಗಿ ಅಂತರ ರಾಜ್ಯ ನೋಂದಣಿ ಸಂಖ್ಯೆಯುಳ್ಳ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಚೆಕ್‍ಪೋಸ್ಟ್ ಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲನೆ ಮಾಡುತ್ತಿದ್ದಾರೆ.

       ಇಲ್ಲಿನ ಪ್ರವಾಸಿ ಮಂದಿರ ಸೇರಿದಂತೆ ಸಹಕಾರಿ ಸಂಘಗಳು, ಸರ್ಕಾರಿ ಕಟ್ಟಡಗಳಲ್ಲಿ ರಾಜಕೀಯ ಪಕ್ಷಗಳ ಅಥವಾ ಮುಖಂಡರ ಚುನಾವಣಾ ಪ್ರಚಾರ ಸಭೆ ನಡೆಸಲು ಅನುಮತಿವಿಲ್ಲವೆಂದು ಸೂಚನ ಫಲಕಗಳನ್ನು ಹಾಕಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿ ಸೇರಿ ದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ಕಟ್ಟಪ್ಪಣೆ ಸಹ ಮಾಡಲಾಗಿದೆ. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಬಾವುಟ, ಮುಖಂಡರ ಫ್ಲೆಕ್ಸ್, ಬ್ಯಾನರ್‍ನಂತಹ ಪ್ರಚಾರ ಸಾಮಗ್ರಿ ಹಾಕುವುದನ್ನು ನಿಷೇಧಿಸಿದ್ದಾರೆ.

         ಅಪರಾಧ ಹಿನ್ನೆಲೆಯುಳ್ಳ ಮತ್ತು ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳ ಚಲನವಲನದ ಮೇಲೆ ಪೊಲೀಸರು ಹೆಚ್ಚು ನಿಗಾವಹಿಸುತ್ತಿದ್ದು ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆಗೆ ಕರೆತಂದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link