ಚಳ್ಳಕೆರೆ
ಯಾವುದೇ ವಿದ್ಯಾರ್ಥಿ ಉತ್ತಮ ಬದುಕನ್ನು ಕಂಡುಕೊಳ್ಳಬೇಕಾದಲ್ಲಿ ಶಿಕ್ಷಣದ ಜೊತೆಗೆ ಶಿಸ್ತನ್ನು ಸಹ ರೂಪಿಸಿಕೊಳ್ಳಬೇಕಿದೆ. ಉತ್ತಮ ಶಿಸ್ತಿನಿಂದ ವರ್ತಿಸಿದರೆ ಅವನು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅದ್ದರಿಂದ ಶಿಕ್ಷಣ ಜೊತೆ ಜೊತೆಯಲ್ಲಿ ಶಿಸ್ತನ್ನು ರೂಪಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಭದ್ರಬುನಾದಿಯನ್ನು ಒದಗಿಸಿದ ಎಲ್ಲರ ವಿಶ್ವಾಸಕ್ಕೂ ಪಾತ್ರರಾದ ದೈಹಿಕ ಶಿಕ್ಷಕ ಎಂ.ವಿ.ತಿಪ್ಪೇಸ್ವಾಮಿ ಅಭಿನಂದನಾರ್ಹರು ಎಂದು ಹಿರೇಹಳ್ಳಿ ಕ್ಲಸ್ಟರ್ ವಿಭಾಗದ ಸಿಆರ್ಪಿ ಎನ್.ಮಾರಣ್ಣ ತಿಳಿಸಿದರು.
ಅವರು, ಶನಿವಾರ ಹಿರೇಹಳ್ಳಿ ಸರ್ಕಾರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಲಸ್ಟರ್ ವಿಭಾಗದ ವತಿಯಿಂದ ದೈಹಿಕ ಶಿಕ್ಷಕರಾಗಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರೇಹಳ್ಳಿ ಶಾಲೆಯ ದೈಹಿಕ ಶಿಕ್ಷಕ ಎಂ.ವಿ.ತಿಪ್ಪೇಸ್ವಾಮಿಯವರ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕಾಲ ಸೇವೆ ಮಾಡುವುದೇ ಅಸಾಧ್ಯವೆಂಬ ಸಂದರ್ಭದಲ್ಲಿ ಹಿರೇಹಳ್ಳಿ ಸರ್ಕಾರಿ ಮಾದರಿ ಶಾಲೆಯ ದೈಹಿಕ ಶಿಕ್ಷಕ ಎಂ.ವಿ.ತಿಪ್ಪೇಸ್ವಾಮಿ 40 ವರ್ಷಗಳಿಂದ ಕ್ಲಸ್ಟರ್ ವಿಭಾಗದ ಶಾಲೆಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಶಿಸ್ತನ್ನು ವ್ಯವಸ್ಥಿತವಾಗಿ ಕಲಿಸಿದ ಧೀಮಂತ ದೈಹಿಕ ಶಿಕ್ಷಕರಾಗಿದ್ಧಾರೆ. ಇಂದು ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು, ಅವರ ಸೇವೆಯನ್ನು ನಾವೆಲ್ಲರೂ ಸದಾಕಾಲ ಸ್ಮರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ದೈಹಿಕ ಶಿಕ್ಷಕ ಎಂ.ವಿ.ತಿಪ್ಪೇಸ್ವಾಮಿ ಮತ್ತು ಪತ್ನಿಯನ್ನು ಸನ್ಮಾನಿಸಲಾಯಿತು. ಬೀಳ್ಕೊಡಿಗೆಯನ್ನು ಸ್ವೀಕರಿಸಿ ಮಾತನಾಡಿದ ಎಂ.ವಿ.ತಿಪ್ಪೇಸ್ವಾಮಿ ಕಳೆದ 40 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ನನಗೆ ದೊರಕಿದ್ದು, ನನ್ನ ಪುಣ್ಯವೆಂದು ಭಾವಿಸುವೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲೇ ಹೆಚ್ಚು ಸೇವೆ ಸಲ್ಲಿಸುವ ಅವಕಾಶವನ್ನು ನನಗೆ ಶಿಕ್ಷಣ ಇಲಾಖೆ ನೀಡಿತು.
ಈ ಸಂದರ್ಭದಲ್ಲಿ ನಾನು ಗ್ರಾಮಾಂತರ ಶಾಲೆಗಳ ಅನೇಕ ಉತ್ತಮ ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದರ ಫಲವಾಗಿ ನೂರಾರು ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದ್ಧಾರೆಂದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ, ವೈ.ನಾಗರಾಜು, ರಾಜಪ್ಪ, ಬಸವರಾಜು, ನಂಜುಡಪ್ಪ, ಸಿದ್ದಪ್ಪ, ಖಾಲಿದ್ಹುಸೇನ್, ಕೆ.ಟಿ.ರುದ್ರೇಶ್, ಡಿ.ಕೆ.ಶ್ರೀನಿವಾಸ್, ಎಸ್ಡಿಎಂಸಿ ಅಧ್ಯಕ್ಷರಾದ ಸಿ.ಬೋರಯ್ಯ, ಉಪಾಧ್ಯಕ್ಷೆ ಮಾರಕ್ಕ, ಸದಸ್ಯರಾದ ರಮೇಶ್, ಗುರುಸ್ವಾಮಿ, ಶಂಕರಮೂರ್ತಿ, ರಮೇಶ್, ವಕೀಲ ರುದ್ರಮುನಿ, ಚಿಟ್ಟಮ್ಮ, ದುರುಗೇಶ್, ಮಂಜುನಾಥ, ಮುತ್ತಪ್ಪ, ಓಬಯ್ಯ, ಪಾಲಯ್ಯ, ಮೋಹನ್, ತಿಪ್ಪೇಸ್ವಾಮಿ, ಬಿ.ಎಸ್.ಬಸವರಾಜು, ಮುಖ್ಯ ಶಿಕ್ಷಕರಾದ ಪಾರ್ವತಮ್ಮ, ಹನುಮಂತಪ್ಪ, ಕರಿಬಸಮ್ಮ, ಎಂ.ರಾಜಪ್ಪ, ಟಿ.ಬಸವರಾಜ, ನಂಜುಡಪ್ಪ, ಸಿದ್ದಪ್ಪ, ಜಿ.ಟಿ.ಬಸವರಾಜು, ಖಾಲಿದ್ಹುಸೇನ್, ಶ್ರುತಿ, ಸ್ಮಿತಾ, ಭಾಗ್ಯಮ್ಮ, ಲತಾ, ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
