ತುಮಕೂರು:
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸ್ಪರ್ಧಾತ್ಮಕ ತರಬೇತಿಗಳಲ್ಲಿಯೂ ಪಾಲ್ಗೊಂಡು ಭವಿಷ್ಯ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಗಣಿತ ಉಪನ್ಯಾಸಕ ಜಿ.ಹನುಮಂತಯ್ಯ ಕರೆ ನೀಡಿದರು.
ನಗರದ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಆರ್.ವಿ. ಟ್ಯೂಟೋರಿಯಲ್ನ ನೂತನ ಕಛೇರಿ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಮಾತನಾಡುತ್ತಿದ್ದ ಅವರು, ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಅತ್ಯುಪಯುಕ್ತವಾದುದು. ಮುಂದಿನ ದಿನಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಾಗಲಿದ್ದು, ಅಂತಹ ಪರೀಕ್ಷೆಗೆ ಒಗ್ಗಿಕೊಳ್ಳುವ ಮನಸ್ಸು ಮಾಡಬೇಕೆಂದು ಕರೆ ನೀಡಿದರು.
ಓದುವ ದಿನಗಳಲ್ಲಿ ಶೈಕ್ಷಣಿಕ ಚಟುಟಿಕೆಗಳ ಜೊತೆಗೆ ಇತರೆ ಚಟುವಟಿಕೆಗಳತ್ತಲೂ ಗಮನ ಹರಿಸಬೇಕು. ಆಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿ ಜೀವನ ಘಟ್ಟ ಅತ್ಯಂತ ಪ್ರಮುಖವಾದುದಾಗಿದ್ದು, ಪೋಷಕರಿಗೆ ಉತ್ತಮ ಹೆಸರು ತರಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಾ.ಚಿ.ರಾಜಕುಮಾರ ಮಾತನಾಡಿ ಆರಂಭಿಕ ದಿನಗಳಲ್ಲಿ ಆರ್.ವಿ. ಟ್ಯೂಟೋರಿಯಲ್ ವತಿಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲತೆಗಳು ಆಗಿದ್ದವು. ಇಲ್ಲಿ ತರಗತಿ ನಡೆಸುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಳ್ಳುವಂತೆ ಮಾಡಲಾಗಿತ್ತು. ಇಲ್ಲಿ ಕಲಿತಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಿದ್ದಾರೆ. ಮುಂದೆಯೂ ಈ ಸಂಸ್ಥೆ ಇದೇ ರೀತಿಯಲ್ಲಿ ಮುಂದುವರೆದು ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಕೃಷ್ಣಮೂರ್ತಿ, ಗಣಿತ ಉಪನ್ಯಾಸಕ ಚಿಕ್ಕಣ್ಣ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ನಾಗರಾಜು, ಭೌತಶಾಸ್ತ್ರ ಉಪನ್ಯಾಸಕ ನರೇಶ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
