ಚಿತ್ರದುರ್ಗ:
ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿ ಲಂಬಾಣಿ ಗ್ರಾಮಕ್ಕೆ ಸೇರಿದ ರುದ್ರಭೂಮಿಯನ್ನು ತೆರವುಗೊಳಿಸಿ ಸೂಕ್ತ ಬಂದೋಬಸ್ತ್ ಮಾಡುವಂತೆ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಗೋಮಾಳವನ್ನು ಕಬಳಿಸುತ್ತಿರುವ ಲ್ಯಾಂಡ್ಮಾಫಿಯಾಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ಕುಮಾರ್ರವರು ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿ ಲಂಬಾಣಿ ತಾಂಡಗಳು ನೂರಾರು ವರ್ಷಗ ಹಿಂದೆಯೇ ನಿರ್ಮಾಣವಾಗಿ ಜನರು ವಾಸಿಸುತ್ತಿದ್ದು, ಆ ಗ್ರಾಮಗಳ ಸಮೀಪದಲ್ಲೇ ಇರುವ ಸರ್ಕಾರಿ ಗೋಮಾಳ ರಿ.ಸ.ನಂ. 44 ರಲ್ಲಿ 13.28 ಎಕರೆ ಗೋಮಾಳ ಭೂಮಿಯಿದ್ದು, ಅದರಲ್ಲಿ 3.20 ಎಕರೆ ಭೂಮಿಯನ್ನು ಸ್ಮಶಾನ ಭೂಮಿಯನ್ನಾಗಿ ಪರಿವರ್ತಿಸಲಾಗಿದ್ದು, ಸದರಿ ಜಾಗದಲ್ಲಿ ರುದ್ರಭೂಮಿಯನ್ನು ಅಭಿವೃದ್ದಿಪಡಿಸಿ ಎರಡು ಊರುಗಳ ಮೃತರ ಅಂತ್ಯಸಂಸ್ಕಾರಕ್ಕಾಗಿ ಬಳಸಿಕೊಳ್ಳುವಂತೆ ಈಗಾಗಲೆ ಪಹಣಿಯಲ್ಲಿ ದಾಖಲಾಗಿದೆ.
ಆದರೆ ಸರ್ಕಾರಿ ಗೋಮಾಳ ಭೂಮಿಯನ್ನು ಸುತ್ತಮುತ್ತ ಸಾಗುವಳಿ ಮಾಡುತ್ತಿರುವವರು ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಹಾಗೆಯೇ ಗೋಮಾಳ ಭೂಮಿಯನ್ನು ಸಹ ಲ್ಯಾಂಡ್ಡೆವಲಪರ್ಗಳು ಒತ್ತುವರಿ ಮಾಡಿಕೊಂಡು ಸೈಟುಗಳನ್ನು ಮಾಡಲು ಸಂಚು ರೂಪಿಸಿದ್ದಾರೆ ಎಂದು ಆಪಾದಿಸಿದರು.
ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿಗಳಲ್ಲಿ ವಾಸಮಾಡುತ್ತಿರುವ ಬಡ ಕೂಲಿ ಕಾರ್ಮಿಕ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಲಂಬಾಣಿ ಸಮುದಾಯಗಳೆ ಹೆಚ್ಚಾಗಿ ವಾಸ ಮಾಡುತ್ತಿದ್ದು, ಅವರಿಗೆ ವಸತಿ ನಿವೇಶನ, ಶಾಲೆ ಕಟ್ಟಡ ನಿರ್ಮಾಣಕ್ಕೆ ಮತ್ತು ಸಮುದಾಯ ಅಭಿವೃದ್ದಿ ಕೇಂದ್ರಗಳ ನಿರ್ಮಾಣಕ್ಕೆ ಗೋಮಾಳ ಭೂಮಿಯ ಜಾಗ ಅಗತ್ಯವಿದ್ದು, ಸರ್ಕಾರ ಜಿಲ್ಲಾಡಳಿತದ ಮೂಲಕ ಈ ಭೂಮಿಯನ್ನು ಲಂಬಾಣಿ ಸಮುದಾಯದವರಿಗೆ ಮೀಸಲಿಟ್ಟಾಗ ಮಾತ್ರ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಸೇವಾಲಾಲ್ ಯುವಕ ಸಂಘದ ಕಾರ್ಯದರ್ಶಿ ಹಾಗೂ ವೀರದಿಮ್ಮನಹಳ್ಳಿ ಗ್ರಾಮದ ಮುಖಂಡ ಎನ್.ಮಹಂತೇಶ್ ಮಾತನಾಡಿ ಸ್ಮಶಾನ ಭೂಮಿಗಾಗಿ ಸರ್ಕಾರ ಜಮೀನು ಕಾಯ್ದಿರಿಸಿದ್ದು, ಈ ಭೂಮಿಯನ್ನು ಕಬಳಿಸಲು ಹಲವರು ಸಂಚು ರೂಪಿಸಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಸಂಚಾಲಕ ಸಿ.ಗಣೇಶ್ನಾಯ್ಕ, ವೀರದಿಮ್ಮನಹಳ್ಳಿ ಮತ್ತು ರಾಂಜೀಹಟ್ಟಿ ಗ್ರಾಮಸ್ಥರಾದ ಜಿ.ವೆಂಕಟೇಶ್ನಾಯ್ಕ, ಗ್ರಾ.ಪಂ.ಸದಸ್ಯ ಅಶೋಕ್ನಾಯ್ಕ, ಕಾರ್ಬಾರಿ ವೆಂಕಟೇಶ್ನಾಯ್ಕ, ಸೇವಾಲಾಲ್ ಯುವ ಸಂಘದ ಅಧ್ಯಕ್ಷ ಶಂಕರ್ನಾಯ್ಕ, ರಾಂಜಿಹಟ್ಟಿಯ ವಿ.ಎನ್.ರಾಮನಾಯ್ಕ, ಗೋಪಾಲನಾಯ್ಕ, ಲಚ್ಮನಾಯ್ಕ, ಯುವ ಮುಖಂಡ ಗೋವಿಂದನಾಯ್ಕ, ಟೈಲರ್ ಲಚ್ಮನಾಯ್ಕ, ಬುಡ್ನಹಟ್ಟಿ ಗ್ರಾ.ಪಂ.ಸದಸ್ಯ ಚಂದ್ರಶೇಖರ್ನಾಯ್ಕ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
