ಹುಳಿಯಾರು
ಹುಳಿಯಾರು ಸಮೀಪದ ಬರಕನಹಾಲ್ ಗ್ರಾಮದಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಹುಳಿಯಾರಿನ ಪಶು ಆಸ್ಪತ್ರೆಯಿಂದ ಸರಿ ಸುಮಾರು 500 ರಕ್ಕೂ ಹೆಚ್ಚು ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಯಿತು.
ಬರಕನಹಾಲ್ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಕುರಿ, ಮೇಕೆ, ಹಸು, ಎಮ್ಮೆ, ಎತ್ತುಗಳನ್ನು ತಾಲೂಕು ಪಶು ವೈದ್ಯ ಡಾ.ರಘುಪತಿ, ಹುಳಿಯಾರು ಪಶು ವೈದ್ಯ ಡಾ.ಮಂಜುನಾಥ್, ಯಳನಾಡು ಪಶು ವೈದ್ಯೆ ಡಾ.ಸಂಧ್ಯಾರಾಣಿ, ಸಹಾಯಕ ಮಹೇಶ್ ಅವರನ್ನೊಳಗೊಂಡ ತಂಡ ತಪಾಸಣೆ ನಡೆಸಿತು.
ಎಫಿಮೂರಲ್ ಫೀವರ್, ಅಜೀರ್ಣತೆ, ಚರ್ಮರೋಗ, ಜಂತು ರೋಗ, ಪೋಷಕಾಂಶಗಳ ಕೊರತೆ ಖಾಯಿಲೆಗಳು ಹೆಚ್ಚಾಗಿ ಕಂಡು ಬಂದವು. ಲವಣ ಮಿಶ್ರಣ, ಆರೋಗ್ಯ ವರ್ಧಕ, ಜಂತುನಾಷಕ, ಜ್ವರ, ಕೆಮ್ಮು, ಬೇದಿ ಸೇರಿದಂತೆ ಅನೇಕ ಸಣ್ಣ-ಪುಟ್ಟ ಖಾಯಿಲೆಗಳಿಗೆ ಸ್ಥಳದಲ್ಲಿಯೇ ಉಚಿತವಾಗಿ ಔಷಧಿ ನೀಡಲಾಯಿತು.
ಕಾರ್ಯಕ್ರಮ ರಘುಪತಿ ಅವರು ಮಾತನಾಡಿ ಹೈನುಗಾರಿಕೆಯಲ್ಲಿ ಲಾಭ ಪಡೆಯಬೇಕಾದರೆ ಹಸುಗಳ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ಕೆಚ್ಚಲುಬಾವು ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೆಚ್ಚಲುಬಾವು ಬಂದಿರುವ ಲಕ್ಷಣ ಕಂಡರೆ ಪೊಟಾಷಿಯಂ ಪರಮಾಗ್ನೆಟ್ ಅಥವಾ ಬೇವಿನ ಎಣ್ಣೆ ಹಚ್ಚಬೇಕು. ಕಾಲಾಕಾಲಕ್ಕೆ ಲಸಿಕೆಗಳನ್ನು ಕೊಡಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಎನ್ಎಸ್ಎಸ್ ಶಿಬಿರಾಧಿಕಾರಿ ಎಂ.ಜೆ.ಮೋಹನ್ ಕುಮಾರ್, ಫರ್ನಾಜ್, ಸಹ ಶಿಬಿರಾಧಿಕಾರಿಗಳಾದ ಕೆ.ಸಿ.ಕುಮಾರಸ್ವಾಮಿ, ಎನ್.ಎ.ಮಂಜುನಾಥ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
