ಬೆಂಗಳೂರು

ನಗರದಲ್ಲಿನ ಕಸವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸುರಿಯುತ್ತಿರುವುದರಿಂದ ಅಲ್ಲಿನ ಜನರು ಬದುಕು ಸಂಕಷ್ಟಕ್ಕೆ ಸಿಲುಕಿಸಲಿದ್ದು ಅದನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದರು.
ನಗರದ ಕಂದಾಯ ಭವನದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಘನತ್ಯಾಜ್ಯ ವಿಲೇವಾರಿ ಕುರಿತ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದಲ್ಲಿ ಮಾತನಾಡಿ ಗ್ರಾಮಾಂತರ ಪ್ರದೇಶಗಳಿಗೆ ಕಸ ಸುರಿಯುವುದನ್ನು ತಪ್ಪಿಸಲು ಘನ ತ್ಯಾಜ್ಯ ಬೇರ್ಪಡಿಸಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ೬ ಸಾವಿರ ಟನ್ ಕಸ ಉತ್ಪಾದನೆ ಆಗುತ್ತಿದೆ.ಈ ತ್ಯಾಜ್ಯ ವನ್ನು ಹೊರವಲಯ ಭೂಭರ್ತಿ ಸ್ಥಳಗಳಲ್ಲಿ ಎಸೆಯುತ್ತಿದ್ದೇವೆ.ಆದರೆ, ಈ ವ್ಯಾಪ್ತಿಯ ಹಳ್ಳಿಗಳಲ್ಲಿ ರಸಾಯನಿಕ ಅಂಶ ಹೆಚ್ಚಾಗಿದ್ದು, ಕುಡಿಯುವ ನೀರು ಸಹ ಕಪ್ಪು ಬಣ್ಣದಲ್ಲಿ ಬರಲು ಆರಂಭಿಸಿದೆ. ಹಾಗಾಗಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಘನ ತ್ಯಾಜ್ಯ ಬೇರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಿಂದೆ ನಮ್ಮ ಪೂರ್ವಜರು ಪ್ಲಾಸ್ಟಿಕ್ ಮುಕ್ತ ಪರಿಸರ ನೀಡಿದ್ದರು.ಆದರೆ, ನಾವು ಇಂದು ಪ್ಲಾಸ್ಟಿಕ್ ಬಳಕೆ ಮಾಡಿ, ಮುಂದಿನ ಪೀಳಿಗೆಗೆ ವಿಷ ನೀಡಲಾಗುತ್ತಿದೆ ಎಂದ ಅವರು, ಪ್ಲಾಸ್ಟಿಕ್ ನಿಷೇಧದ ಜವಾಬ್ದಾರಿ ಜನಪ್ರತಿನಿಧಿಗಳ ಮೇಲೆ ಮಾತ್ರವಲ್ಲದೆ, ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಸಂಘಕ್ಕೆ ಬೆಂಗಳೂರಿನಲ್ಲಿ ಕಚೇರಿಗೆ ಜಾಗದ ಅವಶ್ಯಕತೆ ಇದ್ದು, ಈ ಬೇಡಿಕೆ ಈಡೇರದೆ, ಹಲವು ದಿನಗಳಿಂದ ನೆನಗುದಿಗೆ ಬಿದ್ದಿದೆ.ಹಾಗಾಗಿ, ಬಿಬಿಎಂಪಿ ಕಚೇರಿಯೊಂದನ್ನು ಒದಗಿದಲು ಮುಂದಾಗಬೇಕೆಂದು ಒತ್ತಾಯಿಸಿದರು.
ಪತ್ರಕರ್ತರ ಭವನಕ್ಕೆ ಬೆಂಗಳೂರಿನ ನಾಯಂಡಹಳ್ಳಿ ಸಮೀಪ ಅರ್ಧ ಎಕರೆ ಜಮೀನು ನೀಡಿ ೫ ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.ಆದರೆ, ಭವನ ನಿರ್ಮಾಣಕ್ಕೆ ಇನ್ನೂ ೫ ಕೋಟಿ ರೂ. ಅನುದಾನ ಅಗತ್ಯ ಇದ್ದು, ಬಿಬಿಎಂಪಿ ಮೇಯರ್ ನೆರವು ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಬೆಂಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸೋಮಶೇಖರ್ ಗಾಂಧಿ, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಹೆಚ್.ಎಸ್.ಹರ್ಷಕುಮಾರ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
