ದಾವಣಗೆರೆ:
ಕಳೆದ ಒಂದೂವರೆ ವರ್ಷಗಳ ಕಾಲ ಖಡ್ಗ ಸ್ವಯಂ ಸೇವಕರ ಸಂಘ ಹಾಗೂ ಶಾಂತಿಸಾಗರ ಸಂರಕ್ಷಣಾ ಮಂಡಳಿ ಸಹಭಾಗಿತ್ವದಲ್ಲಿ ನಡೆದ ಶಾಂತಿಸಾಗರ ಉಳಿಸಿ ಅಭಿಯಾನಕ್ಕೆ ಮಣಿದಿರುವ ಕರ್ನಾಟಕ ನೀರಾವರಿ ಇಲಾಖೆಯು ಕೆರೆಯ ಒತ್ತುವರಿ ಜಾಗಾ ಸರ್ವೇಗಾಗಿ 11 ಲಕ್ಷ ರೂ. ಅನುದಾನಕ್ಕೆ ಅನುಮೋದನೆ ನೀಡುವ ಮೂಲಕ ಯುಗಾದಿಯ ಸಿಹಿ ನೀಡಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡೊಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ, ಒತ್ತುವರಿಯಾಗಿರುವ ಶಾಂತಿಸಾಗರ (ಸೂಳೆಕೆರೆ) ಜಾಗವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಕಳೆದ ಒಂದೂವರೆ ವರ್ಷದಿಂದ ಶಾಂತಿಸಾಗರ ಉಳಿಸಿ ಅಭಿಯಾನ ಕೈಗೊಳ್ಳಲಾಗಿತ್ತು. ಈ ಅಭಿಯಾನಕ್ಕೆ ಮೊದಲ ಜಯ ಎಂಬಂತೆ ಕರ್ನಾಟಕ ನೀರಾವರಿ ಇಲಾಖೆಯು ಕೆರೆಯ ಜಾಗ ಸರ್ವೇ ಕಾರ್ಯಕ್ಕಾಗಿ 11 ಲಕ್ಷ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೆರೆ ಒತ್ತುವರಿ ಸರ್ವೇಕಾರ್ಯ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ತಿಳಿಸಿದರು.
ಶಾಂತಿಸಾಗರ ಉಳಿಸಿ ಅಭಿಯಾನದ ಅಡಿಯಲ್ಲಿ ಪಾದಯಾತ್ರೆ, ವಿದ್ಯಾರ್ಥಿಗಳ ಜಾಗೃತಿ ಜಾಥಾ ಮಾಡಿದೇವು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೀಡಿದ ಸಹಕಾರದಿಂದ ಒತ್ತುವರಿ ಜಾಗದ ಸರ್ವೇಗಾಗಿ ಅನುದಾನ ನೀಡಲು ಅನುಮೋದನೆ ದೊರೆತಿದ್ದು, ತಕ್ಷಣವೇ ಸರ್ವೇ ಕಾರ್ಯ ಆರಂಭಿಸಿ, ಒತ್ತುವರಿ ತೆರವುಗೊಳಿಸಿ, ಟ್ರಂಚ್ ಹೊಡೆಸಿ, ಶಾಂತಿಸಾಗರದ ನೈಜ ಸೊಬಗು ಉಳಿಸಬೇಕೆಂದು ಆಗ್ರಹಿಸಿದರು.
ಖಡ್ಗ ಸ್ವಯಂ ಸೇವಕರ ಸಂಘದ ರಘು ಬಿ.ಆರ್ ಮಾತನಾಡಿ, ಶಾಂತಿಸಾಗರವು ನೀರಾವರಿ ಇಲಾಖೆಯ ಪ್ರಕಾರ 6,550 ಎಕರೆ ಹಾಗೂ ಕಂದಾಯ ಇಲಾಖೆಯ ಪ್ರಕಾರ 5,447 ಎಕರೆ ವಿಸ್ತೀರ್ಣ ಹೊಂದಿದೆ ಎಂಬ ಮಾಹಿತಿವಿದ್ದು, ಸುಮಾರು 1200ರಿಂದ 1500 ಎಕರೆ ಪ್ರದೇಶ ಕೆರೆ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ಶಂಕೆ ಇದೆ. ತಕ್ಷಣವೇ ಈ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಶಾಂತಿಸಾಗರ ತಮ್ಮ ವ್ಯಾಪ್ತಿಯಲ್ಲಿಯೇ ಬರುವುದಿಲ್ಲ ಎಂಬುದಾಗಿ ಉಡಾಫೆಯ ಮಾತನಾಡಿದ್ದರು. ಆದರೆ, ತರಳಬಾಳು ಜಗದ್ಗುರು ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ ಹಾಗೂ ಚನ್ನಗಿರಿ ಹಿರೇಮಠದ ಶ್ರೀಶಾಂತವೀರ ಸ್ವಾಮೀಜಿಯವರು ನಮ್ಮ ಖಡ್ಗ ಸಂಸ್ಥೆಗೆ ತುಂಬಿದ ಆತ್ಮಸ್ಥೈರ್ಯದಿಂದಾಗಿ ಹೋರಾಟ ಮುಂದುವರೆಸಿದ್ದೇವು.
ಈ ಹೋರಾಟಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ನಟ ಕಿಶೋರ್ ಹಾಗೂ ನಿರ್ಮಾಪಕಿ ರೂಪ ಅಯ್ಯರ್ ಮತ್ತಿರರು ಬೆಂಬಲ ನೀಡಿದ ಕಾರಣಕ್ಕೆ ನಮ್ಮ ಹೋರಾಕ್ಕೆ ಮೊದಲ ಜಯ ಸಂದಿದೆ ಎಂದು ಮಾಹಿತಿ ನೀಡಿದರು.
ಈ ಗೆಲುವಿಗೆ ಹಿಂದಿನ ನಿಷ್ಠವಂತ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೇ, ಕೇಸ್ ವರ್ಕರ್ ಪ್ರಸನ್ನಕುಮಾರ್, ನೀರಾವರಿ ನಿಗಮದ ಶಿವಮೊಗ್ಗ ಕಾರ್ಯಪಾಲಕ ಅಭಿಯಂತರ ಯತೀಶ್ ಚಂದ್ರ, ನಿಗಮದ ಅಧಿಕಾರಿಗಳಾದ ಗುಡ್ಡಪ್ಪ, ರಮೇಶ್, ತಿಪ್ಪೇಸ್ವಾಮಿ, ಭದ್ರಾ ಕಾಡಾ ವಿಭಾಗದ ಕೊಟ್ರೇಶ್ ಹಾಗೂ ಚನ್ನಗಿರಿಯ ತಹಶೀಲ್ದಾರ್ ಅವರುಗಳ ಪರಿಶ್ರಮವೂ ಕಾರಣವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಶಾಂತವೀರ ಸ್ವಾಮೀಜಿ, ಷಣ್ಮುಖಸ್ವಾಮಿ ದೊಡ್ಡಘಟ್ಟ, ಚಂದ್ರಹಾಸ ಲಿಂಗದಹಳ್ಳಿ, ಮೊಹಮ್ಮದ್ ಶಬ್ಬೀರ್ ಕೆರೆಬಿಳಚಿ, ಎಂ.ಬಿ.ವೀರಭದ್ರಪ್ಪ, ಅಣ್ಣಪ್ಪ ಕೆ.ಎಸ್, ಕೆ.ಎಂ.ವೀರಭದ್ರಪ್ಪ, ರವಿ ಹೆಚ್.ಎಂ. ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/07_dvg_03.gif)