ಗೌರಿ ಹುಣ್ಣಿಮೆ ಗೆ ಬಣ್ಣದ ಸಕ್ಕರೆ ಆರತಿ ಸಜ್ಜು

ಕೊಟ್ಟೂರು :
 
       ಗೌರಿ ಹುಣ್ಣಿಮೆ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಸಡಗರವೊ ಸಡಗರ, ಸೀಗಿ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡಗೌರಿ ಹಬ್ಬವೆಂದು ಎರಡು ಬಾರಿ ಆಚರಿಸುವುದು ಇಲ್ಲಿಯ ವಾಡಿಕೆ.
       ಸಕ್ಕರೆ ಅರತಿ ಈ ಹಬ್ಬದ ವಿಶೇಷ. ಹೆಣ್ಣು ಮಕ್ಕಳು ಸಕ್ಕರೆ ಆರತಿ ತಟ್ಟೆಯಲ್ಲಿಟ್ಟುಕೊಂಡು ಗೌರಿಗೆ ಬೆಳಗುತ್ತಾರೆ. ಆರತಿ ಬೆಳಗಿದ ಹೆಣ್ಣು ಮಕ್ಕಳಿಗೆ ಅಣ್ಣ ತಮ್ಮಂದಿರು, ಮಾವಂದಿರು ಕಾಣಿಕೆಯಾಗಿ ಹಣವನ್ನು ಆರತಿ ತಟ್ಟೆಯಲ್ಲಿ ಹಾಕುವ ಸಂಪ್ರದಾಯವಿದೆ.
       ಗೌರಿ ಹುಣ್ಣಿಮೆಯೆಂದರೆ ವಾರಗಟ್ಟಲೇ ಹಳ್ಳಿಯ ಹೆಣ್ಣು ಮಕ್ಕಳು ಸೀರೆಯನ್ನುಟ್ಟು ಗೌರಿ ಮಕ್ಕಳಾಗಿ ಊರಿನ ದ್ವಾರ ಬಾಗಿಲು ರಸ್ತೆಯಲ್ಲಿ ಬಣ್ಣದ ಕೋಲುಗಳೊಂದಿಗೆ ಗೌರಿ ಪದಗಳನ್ನು ಹಾಡುತ್ತಾ, ಕುಣಿಯುತ್ತಾ ಗ್ರಾಮಕ್ಕೆ ಬಂದು ಹೋಗುವ ಪ್ರಯಾಣಿಕರನ್ನು ತಡೆಗಟ್ಟಿ ಅವರಿಂದ ಹಣ ಪಡೆಯುವ ಪದ್ಧತಿಯಿದೆ.
       ಕಟ್ಟಿಗೆಗಳಿಂದ ನಿರ್ಮಿಸಲಾದ ಅಚ್ಚುಪಡಿಗಳಲ್ಲಿ ಸಕ್ಕರೆ ಪಾಕ ಹಾಕುವುದರ ಮೂಲಕ ಸಕ್ಕರೆ ಆರತಿಗಳನ್ನು ತಯಾರು ಮಾಡುತ್ತಾರೆ. ವಿವಿಧ ರೀತಿಯ ಅಚ್ಚುಗಳಿಂದ ನವಿಲು, ಆನೆ, ಗೋಪುರ, ಒಂಟೆ, ರಥ, ಬಸವ, ಶಿವ ಪಾರ್ವತಿ, ಕೃಷ್ಣ ಹೀಗೆ ವೈವಿಧ್ಯಮಯ ಆಕಾರಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸುತ್ತೇವೆ ಎನ್ನುತ್ತಾರೆ ಕೊಟ್ರೇಶಪ್ಪ.
       ‘ಹಬ್ಬವು ಒಂದು ತಿಂಗಳಿದೇ ಎನ್ನುವಾಗಲೇ ಈ ಆರತಿಗಳ ತಯಾರಿಸಲು ಪ್ರಾರಂಬಿಸುತ್ತೇವೆ ಪ್ರತಿ ತಯಾರಕರು ಸುಮಾರು 20ರಿಂದ 30ಕ್ವಿಂಟಾಲ್ ಸಕ್ಕರೆಯಿಂದ ಆರತಿ ತಯಾರಿಸುತ್ತೇವೆ. ಒಂದು ಕ್ವಿಂಟಾಲ್ ಸಕ್ಕರೆ 80ಕೆಜಿ ಸಕ್ಕರೆ ಬೊಂಬೆಗಳಾಗುತ್ತಿದ್ದು, ರೂ.100 ರಿಂದ 120ಕ್ಕೆ ಒಂದು ಕೆ.ಜಿ. ಸಕ್ಕರೆ ಆರತಿ ಮಾರುತ್ತೇವೆ. ಸಕ್ಕರೆ ಬೆಲೆ ಹೆಚ್ಚಾಗಿರುವುದರಿಂದ ಕಾರ್ಮಿಕರ ಅಭಾವದಿಂದ ಸಕ್ಕರೆ ಆರತಿಗಳ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ತಯಾರಕರಾದ ಪಳಾರದ ಅಂಗಡಿ ಮಲ್ಲಪ್ಪ.
     ಗೌರಿ ಹುಣ್ಣಿಮೆಯ ನಂತರ ಐದನೇ ದಿನದ ವಿಶೇಷವೇನೆಂದರೆ ರೊಟ್ಟಿ, ಪುಡಿ ಚಟ್ನಿ, ಬುತ್ತಿ ಹಾಗೂ ಸಿಹಿ ತಿನಿಸುಗಳನ್ನು ತಯಾರಿಸಿ ಬೆಳದಿಂಗಳಿನಲ್ಲಿ ಮನೆಯ ಮಾಳಿಗೆಗಳ ಮೇಲೆ ಸಹಭೋಜನ ಮಾಡುವುದಕ್ಕೆ ‘ಕುಂತಿ ರೊಟ್ಟ ಹಬ್ಬ’ ಎಂದು ಕರೆಯುವ ಪ್ರತೀತಿ ಇದೆ. ಇದರೊಂದಿಗೆ ಹಬ್ಬದ ಆಚರಣೆ ಸಂಪನ್ನವಾಗುತ್ತದೆ.
       ಇಂದಿನ ದಿನಮಾನದಲ್ಲಿ ಗ್ರಾಮೀಣ ಪ್ರದೇಶದ ಇಂತಹ ಹಬ್ಬ ಆಚರಣೆ ಕ್ರಮೇಣ ಕಣ್ಮರೆಯಾಗುತ್ತಿವೆ. ಆಧುನಿಕತೆಗೆ ಮಾರುಹೋಗಿರುವ ಇಂದಿನ ಜನಾಂಗ ಇಂತಹ ಸಾಂಪ್ರದಾಯಿಕ  ಆಚರಸುವುದರ ಮೂಲಕ ಮುಂದಿನ ಪೀಳಿಗೆಗೆ ಇಂತಹ ಹಬ್ಬ ಪರಿಚಯಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link