ಹುಳಿಯಾರು:
ಹುಳಿಯಾರು ಹೋಬಳಿಯ ರೈತರಿಗೆ ಯೂರಿಯಾ ಗೊಬ್ಬರ ಹಾಗೂ ಬೆಳೆಗಳಿಗೆ ಕೀಟನಾಶಕ ಔಷಧ ಕೊರತೆ ಉಂಟಾಗಿದ್ದು, ಕೂಡಲೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಅವರು ಒತ್ತಾಯಿಸಿದ್ದಾರೆ.
ರೈತರಿಗೆ ಮುಂಗಾರು ಹಂಗಾಮು ತಡವಾಗಿ ಪ್ರಾರಂಭವಾಗಿದ್ದು, ಕಳೆದ ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಬೆಳೆಗಳನ್ನು ಉಳಿಸಲು ಯೂರಿಯಾ ಗೊಬ್ಬರ ಉಪಯುಕ್ತವಾಗಿದೆ. ಆದರೆ, ಜಿಲ್ಲೆಯ ವ್ಯಾಪಾರಿಗಳು ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಸಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ.
ಎರಡು ಮೂರು ದಿನಕ್ಕೊಂದು ಲೋಡ್ ಗೊಬ್ಬರ ಬರುತ್ತಿದ್ದು ಅದನ್ನು ಹೆಚ್ಚಿನ ದರಕ್ಕೂ, ಪೊಲೀಸ್ ಕಾವಲಿನಲ್ಲೂ ಹಂಚುತ್ತಿದ್ದಾರೆ. ಅಲ್ಲದೆ ಪ್ರಾಥಮಿಕ ಕೃಷಿ ಸಂಘಗಳಲ್ಲಿ ಇದೂವರೆವಿಗೂ ಒಂದೇ ಒಂದು ಚೀಲ ಗೊಬ್ಬರ ಇಳಿಸಿಲ್ಲ. ಹಾಗಾಗಿ ಹೋಬಳಿಯಲ್ಲಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಹಾಗಾಗಿ ಕೃಷಿ ಅಧಿಕಾರಿಗಳು ಹೆಚ್ಚಿನ ಪಮಾಣದ ಯೂರಿಯಾ ಗೊಬ್ಬರ ಪೂರೈಸಬೇಕು ಎಂದು ಒತ್ತಾಯಿಸಿದರು.
ಪೂರ್ವ ಮುಂಗಾರು ಕೈ ಕೊಟ್ಟ ಪರಿಣಾಮ ಇಡೀ ತಾಲೂಕಿನಲ್ಲಿ ಹೆಸರು ಬಿತ್ತನೆಯಾಗಿರಲಿಲ್ಲ. ಈಗ ಸೋನೆ ಮಳೆಯಲ್ಲೇ ರಾಗಿ ಬಿತ್ತನೆ ಮಾಡಿದ್ದ ರೈತರಿಗೆ ಮೂರ್ನಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರಾಗಿ ಬೆಳೆಗೆ ಜೀವ ಕಳೆ ತಂದಿದೆ. ಈಗ ರಾಗಿಗೆ ಯೂರಿಯ ಗೊಬ್ಬರದ ಅಗತ್ಯವಿದ್ದು ಗೊಬ್ಬರ ಹಾಕದಿದ್ದರೆ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ. ಹಾಗಾಗಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತಕ್ಷಣ ಸಮರ್ಪಕ ಯೂರಿಯ ಗೊಬ್ಬರ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
