ಚಳ್ಳಕೆರೆ
ಗ್ರಾಮೀಣ ಭಾಗದ ಜನರಿಗೆ ಸ್ವಚ್ಚತೆಯ ಅರಿವನ್ನು ಮೂಡಿಸುವುದಲ್ಲದೆ ಹಲವಾರು ವಿದ್ಯಾರ್ಥಿಗಳು ಗ್ರಾಮದ ಪ್ರತಿಬೀದಿಗಳನ್ನು ಸ್ವಚ್ಚಗೊಳಿಸುವ ಮೂಲಕ ಜನತೆಯ ವಿಶ್ವಾಸವನ್ನು ಗಳಿಸಿದ್ಧಾರೆ. ವಿದ್ಯಾರ್ಥಿಗಳ ಈ ಕಾರ್ಯವನ್ನು ಗ್ರಾಮದ ಎಂದೂ ಮರೆಯಲು ಸಾಧ್ಯವಿಲ್ಲ. ಎಲ್ಲಿ ಸ್ವಚ್ಚತೆ ಇರುತ್ತದೆಯೋ ಅಲ್ಲಿ ಆರೋಗ್ಯವಿರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ಗ್ರಾಮದ ಹಿರಿಯ ಮುಖಂಡ ಜಿ.ಟಿ.ಕಾಂತರೆಡ್ಡಿ ತಿಳಿಸಿದರು.
ಅವರು, ಬುಧವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಾಪೂಜಿ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ಘಟಕ ಹಮ್ಮಿಕೊಂಡಿದ್ದ ಸ್ವಚ್ಚತಾ ಅಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕಗಳು ಗ್ರಾಮದ ಜನರಿಗೆ ಸ್ವಚ್ಚತೆ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕಿದೆ. ಕಾರಣ, ನಿರಂತರವಾಗಿ ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಪ್ರತಿನಿತ್ಯ ಸ್ವಚ್ಚತೆಯನ್ನು ಕೈಗೊಳ್ಳಲು ಸಾಧ್ಯವಾಗದು. ಅದ್ದರಿಂದ ಗ್ರಾಮಪಂಚಾಯಿತಿ ಆಡಳಿತ ಮತ್ತು ಗ್ರಾಮಸ್ಥರು ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನಹರಿಸುವಂತೆ ಮನವಿ ಮಾಡಿದರು.
ಶಿಭಿರಾಧಿಕಾರಿ ಜೆ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಐದು ದಿನಗಳಿಂದ ನಮ್ಮ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಚತೆಯೂ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ಧಾರೆ. ಗ್ರಾಮದ ಜನತೆಯ ವಿಶ್ವಾಸ ಹಾಗೂ ಸಹಕಾರಕ್ಕೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಪ್ರತಿಯೊಂದು ಹಂತದಲ್ಲೂ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಸೇರಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾರೆ. ನಮ್ಮ ಉದ್ದೇಶ ಗ್ರಾಮದಲ್ಲಿ ಸ್ವಚ್ಚತೆ ಜೊತೆಗೆ ಸುಂದರ, ಸ್ವಚ್ಚ ವಾತಾವರಣವನ್ನು ಸಹ ನಿರ್ಮಿಸುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ, ಗಂಗಾಧರ, ಉಪನ್ಯಾಸಕ ತಿಪ್ಪೇಸ್ವಾಮಿ, ಎಚ್.ಮಹಲಿಂಗಪ್ಪ, ವಿದ್ಯಾರ್ಥಿಗಳಾದ ಸುರೇಶ್, ರವಿನಾರಾಯಣ, ತಿಪ್ಪೇರುದ್ರ, ವೀರೇಶ್ಬಾಬು, ಮಹಂತೇಶ್, ಅಶ್ವನಿ, ರೋಜಾ, ಪೂರ್ಣಿಮಾ, ಪವಿತ್ರ, ನಾಗವೇಣಿ, ಮಾರುತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
