ತುಮಕೂರು
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ “ಮಾದರಿ ನೀತಿ ಸಂಹಿತೆ” ಜಾರಿಗೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕೊಠಡಿಗೆ ಬೀಗ ಹಾಕಲಾಗಿದೆ.
ತಾ.ಪಂ. ಕಚೇರಿಯಲ್ಲಿ ಅಧ್ಯಕ್ಷ ಗಂಗಾಂಜನೇಯ ಮತ್ತು ಉಪಾಧ್ಯಕ್ಷ ಶಾಂತಕುಮಾರ್ ಅವರಿಗೆ ಒಂದೇ ಕೊಠಡಿಯಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ಕೊಠಡಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದೇ ರೀತಿ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಗೂ ಬೀಗ ಹಾಕಲಾಗಿದೆ. ತಾ.ಪಂ. ಅಧ್ಯಕ್ಷರ ಕರ್ತವ್ಯ ನಿರ್ವಹಣೆಗೆ ನೀಡಿರುವ ಸರ್ಕಾರಿ ವಾಹನ (ಜೀಪ್)ವನ್ನು ಹಿಂದಕ್ಕೆ ಪಡೆಯಲಾಗಿದೆ.
ತಾ.ಪಂ. ಕಚೇರಿ ಆವರಣದ ಒಂದು ಕೊಠಡಿಯಲ್ಲೇ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರೀಶಂಕರ್ ಅವರ ಕರ್ತವ್ಯ ನಿರ್ವಹಣೆಗಾಗಿ “ಶಾಸಕರ ಕಚೇರಿ”ಯ ವ್ಯವಸ್ಥೆ ಮಾಡಲಾಗಿದ್ದು, ಪ್ರಸ್ತುತ ಸದರಿ ಕೊಠಡಿಗೂ ಬೀಗ ಹಾಕಲಾಗಿದೆ. ಮೇ 23 ರವರೆಗೂ “ಮಾದರಿ ನೀತಿ ಸಂಹಿತೆ” ಜಾರಿಯಲ್ಲಿರುತ್ತದೆ.
ಗ್ರಾ.ಪಂ.ಗಳಲ್ಲಿ ಏನು ಕ್ರಮ ಕೈಗೊಳ್ಳುತ್ತಾರೆ?
“ತಾ.ಪಂ. ಕಚೇರಿಯಲ್ಲಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಧ್ಯಕ್ಷರ ಕೊಠಡಿಗೆ ಬೀಗ ಹಾಕಲಾಗಿದೆ. ಗ್ರಾಮಾಂತರ ಶಾಸಕರ ಕೊಠಡಿಗೂ ಬೀಗ ಹಾಕಲಾಗಿದೆ. ಆದರೆ ಎಲ್ಲ ರೀತಿಯ ರಾಜಕೀಯಗಳೂ ನಡೆಯುವ ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ? ಏಕೆಂದರೆ ಅನೇಕ ಗ್ರಾಮ ಪಂಚಾಯಿತಿ ಕಚೇರಿಗಳು ಒಂದೇ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಒಂದೇ ಕೊಠಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿ.ಡಿ.ಓ., ಪಂಚಾಯಿತಿ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಆಪರೇಟರ್ಗಳು ಒಂದೊಂದು ಟೇಬಲ್, ಕುರ್ಚಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುತ್ತಾರೆ. ಆದರೆ ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕಚೇರಿಗೆ ಬಂದು ಕುಳಿತುಕೊಳ್ಳುವುದನ್ನು ಯಾರು-ಹೇಗೆ ತಡೆಯುತ್ತಾರೆ? ಇವರುಗಳು ಕಚೇರಿಗೆ ಬಂದು ತಮಗೆ ಬೇಕಾದ ಕೆಲಸ-ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ, ನಿರ್ದೇಶನ ನೀಡಿದರೆ ಯಾರು ಏನು ಮಾಡುತ್ತಾರೆ? ಅಧ್ಯಕ್ಷರು-ಉಪಾಧ್ಯಕ್ಷರು ಬಂದು ಕುಳಿತುಕೊಳ್ಳುತ್ತಾರೆಂದು ಇಡೀ ಗ್ರಾ.ಪಂ. ಕಚೇರಿಗೇ ಬೀಗ ಹಾಕಲಾದೀತೇ?” ಎಂದು ಸಾರ್ವಜನಿಕರು ಚರ್ಚಿಸುತ್ತಿರುವುದು ತುಮಕೂರು ತಾ.ಪಂ. ಕಚೇರಿ ಆವರಣದಲ್ಲಿ ಕೇಳಿಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
