ಗುಟ್ಕಾ, ಸಿಗರೇಟ್ ಮಾರಾಟ : ತಹಸೀಲ್ದಾರ್ ದಾಳಿ

ಶಿರಾ

     ನಗರದ ಹಲವೆಡೆ ಕಿರಾಣಿ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಗುಟ್ಕಾ, ಸಿಗರೇಟ್ ಮಾರಾಟ ಮಾಡುತ್ತಿದ್ದು, ಅಂತಹ ಅಂಗಡಿಗಳ ಮೇಲೆ ಶುಕ್ರವಾರ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್ ದಾಳಿ ನಡೆಸಿ ಗುಟ್ಕಾ, ಸಿಗರೇಟ್‍ಗಳನ್ನು ವಶಪಡಿಸಿಕೊಂಡರು.

     ಕೋವಿಡ್-19 ಹಿನ್ನೆಲೆಯಲ್ಲಿ ದೇಶ ಲಾಕ್‍ಡೌನ್ ಆಗಿದ್ದು ಯಾವುದೇ ಅಂಗಡಿಗಳಲ್ಲಿ ಗುಟ್ಕಾ, ಸಿಗರೇಟ್, ಬೀಡಿ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡದಂತೆ ತಾಲ್ಲೂಕು ದಂಡಾಧಿಕಾರಿಗಳು ಕಳೆದ ಒಂದು ವಾರದ ಹಿಂದೆಯೇ ಆದೇಶ ಹೊರಡಿಸಿದ್ದರು. ಈ ಸಂಬಂಧ ನಗರದ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ಕೂಡ ಅಂಗಡಿಗಳವರಿಗೆ ಆರಕ್ಷಕ ಇಲಾಖೆಯ ಮೂಲಕ ತಿಳಿವಳಿಕೆ ನೀಡಲಾಗಿತ್ತು. ಆದರೂ ಕೆಲವೆಡೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಂಗಡಿಗಳ ಮೇಲೆ ದಾಳಿ ನಡೆಸಿದರು.

    ಶಿರಾ ನಗರದ ಕಾಳಿದಾಸ ನಗರ, ಬನ್ನಿ ನಗರ, ರಂಗನಾಥನಗರ, ಜ್ಯೋತಿ ನಗರ, ಕೋಟೆ, ತಾಲ್ಲೂಕಿನ ಕೊಟ್ಟ ಗ್ರಾಮ, ಕಲ್ಲುಕೋಟೆ ಸೇರಿದಂತೆ ವಿವಿಧೆಡೆ ಏಕಾಏಕಿ ಸುಮಾರು 30 ಅಂಗಡಿಗಳ ಮೇಲೆ ದಾಳಿ ನಡೆಸಿದ ತಹಸೀಲ್ದಾರ್ ಗುಟ್ಕಾ, ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡು ತಿಳಿವಳಿಕೆ ನೀಡಿ ಬಂದಿದ್ದಾರೆ.

     ಸಾಕಷ್ಟು ತಿಳಿವಳಿಕೆ ನೀಡಿದ್ದರೂ ಮತ್ತೊಮ್ಮೆ ಇಂತಹ ಕೃತ್ಯಗಳಲ್ಲಿ ತೊಡಗಿದ ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಹಾಗೂ ಆರಕ್ಷಕ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap