ತುರುವೇಕೆರೆ:
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಿಂದ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ತಾಲ್ಲೂಕು ದಂಡಾಧಿಕಾರಿ ನಯೀಂ ಉನ್ನೀಸಾ ಭೇಟಿ ನೀಡಿ ರೈತರಿಂದ ಕೊಂಡ ರಾಗಿ ಖರೀದಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜನವರಿ 13 ರಂದು ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿ ಮಾರ್ಚ್ 24 ರ ವರೆವಿಗೂ ರಾಗಿಯನ್ನು ರೈತರಿಂದ ಖರೀದಿ ಮಾಡಲಾಗಿತ್ತು. ಪ್ರತಿದಿನ 60-70 ಟ್ರ್ಯಾಕ್ಟರ್ಗಳಂತೆ 2500 ಕ್ವಿಂಟಾಲ್ ಗೂ ಹೆಚ್ಚು ರಾಗಿ ಖರೀದಿಸುತ್ತಿತ್ತು. ಈ ಮದ್ಯೆ ಕರೊನಾ ಧಾಳಿಯಿಂದ ಮಾರ್ಚ್ 24 ಕ್ಕೆ ರಾಗಿ ಖರೀದಿ ಬಂದ್ ಮಾಡಲಾಯಿತು.
ಏಪ್ರಿಲ್ 24 ಕ್ಕೆ ಮತ್ತೆ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು ಏಪ್ರಿಲ್ 30 ಕ್ಕೆ ಒಟ್ಟು 36,916 ಕ್ವಿಂಟಾಲ್ ರಾಗಿಯನ್ನು 2070 ರೈತರುಗಳಿಂದ ಖರೀದಿಸಲಾಗಿದೆ. ಇನ್ನೂ 513 ರೈತರಿಂದ ನೊಂದಣಿ ಮಾಡಲಾಗಿದ್ದು ತಾಲ್ಲೂಕಿನ ರಾಗಿ ಬೆಳೆದ ರೈತರು ಯಾವುದೇ ಗೊಂದಲವಿಲ್ಲದೆ ರಾಗಿ ತಂದು ಬಿಡುತ್ತಿದ್ದಾರೆ. ಈಗಾಗಲೇ ಸುಮಾರು 11 ಕೋಟಿ ರೂ. ರೈತರ ಹಣ ತುರುವೇಕೆರೆ ಬ್ಯಾಂಕುಗಳಿಗೆ ಮೇಲಧಿಕಾರಿಗಳು ಜಮೆ ಮಾಡಿದ್ದರೂ ಸಹಾ ಕೆಲ ರೈತರು ಖರೀದಿ ಕೇಂದ್ರಕ್ಕೆ ಬಂದು ಹಣ ಕೊಡಿಸಿ ಎಂದು ಅಧಿಕಾರಿಗಳ ಮುಂದೆ ದುಂಬಾಲು ಬೀಳುತ್ತಿದ್ದಾರೆ.
ಕೆಲವು ರೈತರು ಆಧಾರ ಜೋಡಣೆ ಮಾಡದಿರುವುದೇ ಇದಕ್ಕೆ ಕಾರಣವಾಗಿದ್ದು ಅಲ್ಲದೆ ಬ್ಯಾಂಕ್ ಅಧಿಕಾರಿಗಳು ಸಹ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ರೈತರ ಪಾಸ್ಬುಕ್ನಲ್ಲಿ ನಮೂದಿಸಿಕೊಡಬೇಕು. ರೈತರು ಸುಖಾಸುಮ್ಮನೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಖರೀದಿ ಅಧಿಕಾರಿ ನಾರಾಯಣ್ ತಿಳಿಸಿದರು
ತಹಶೀಲ್ದಾರ್ ನಯೀಂ ಉನ್ನೀಸಾ ಮಾತನಾಡಿ ರೈತರು ನಿಬಂಧನೆಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವ್ಯವಹರಿಸಿ. ನಿಮಗೆ ತೊಂದರೆಯಾದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ರೈತರಿಗೆ ತಿಳಿಸಿದರಲ್ಲದೆ ಯಾವೊಬ್ಬ ರೈತನಿಗೂ ಅನ್ಯಾಯವಾಗದಂತೆ ಆತನು ಬೆಳೆದು ತಂದ ರಾಗಿಯನ್ನು ಖರೀದಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತ ನಾಗೇಂದ್ರ ಮಾತನಾಡಿ ಪ್ರಾರಂಭದಲ್ಲಿ ಕೆಲವು ರೈತರ ಪಹಣಿಯಲ್ಲಿ ರಾಗಿ ನಮೂದಾಗದೇ ರಾಗಿ ಮಾರಲು ಸಾದ್ಯವಾಗದೇ ತುಂಬಾ ತೊಂದರೆಯಾಗುತ್ತಿತ್ತು. ಇದೀಗ ರೈತರು ಬೆಳೆದರ್ಶಕ ಹ್ಯಾಪ್ ನಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಂಡು ನಿರಾಯಾಸವಾಗಿ ರಾಗಿ ಖರೀದಿ ಕೇಂದ್ರಕ್ಕೆ ನೀಡಿದ ಕೆಲವೇ ದಿನಗಳಲ್ಲೇ ನಮಗೆ ಹಣ ಕೈಸೇರುತ್ತಿರುವುದಕ್ಕೆ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಈ ಸಂಧರ್ಬದಲ್ಲಿ ಕೃಷಿ ಅಧಿಕಾರಿ ನಟರಾಜು, ಆರ್ಐ. ಶಿವಕುಮಾರ್ ಸೇರಿದಂತೆ ಕಂದಾಯಾಧಿಕಾರಿಗಳು ಹಾಗೂ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
