ತುಮಕೂರು
ಎಲ್ಲೆಡೆ ಕೊರೋನಾ ರೋಗದ ಭೀತಿ ಇರುವ ಹಿನ್ನೆಲೆಯಲ್ಲಿ ಮತ್ತು ಈಗ ಬೇಸಿಗೆ ಕಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿರುವ ಕಾರಣ ತುಮಕೂರು ನಗರದಾದ್ಯಂತ ಬೀದಿಬದಿ ಆಹಾರ ಪದಾರ್ಥಗಳನ್ನು ಮಾರುವವರು, ಹಣ್ಣಿನ ಜ್ಯೂಸ್ ಮಾರುವವರು ಮತ್ತು ಕೋಳಿ ಹಾಗೂ ಮಾಂಸದ ಅಂಗಡಿಗಳವರು ತಮ್ಮ ಮಳಿಗೆ ಹಾಗೂ ಸುತ್ತಮುತ್ತ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಸೂಚನೆ ನೀಡಿದ್ದಾರೆ.
ನೈರ್ಮಲ್ಯದ ವಿಷಯದಲ್ಲಿ ರಾಜಿ ಇಲ್ಲ. ಎಲ್ಲರೂ ನೈರ್ಮಲ್ಯವನ್ನು ಕಾಪಾಡಬೇಕು. ಒಂದು ವೇಳೆ ನಿರ್ಲಕ್ಷಿಸಿದ್ದು ಕಂಡುಬಂದರೆ, ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಕಾನೂನಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ನಗರಾದ್ಯಂತ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಬೀದಿಬದಿಯ ವ್ಯಾಪಾರಿಗಳು ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ಅದೇ ರೀತಿ ಹಣ್ಣಿನ ರಸ (ಜ್ಯೂಸ್) ಮಾರಾಟ ಸಹ ನಡೆಯುತ್ತಿದೆ. ಇವರೆಲ್ಲರೂ ನೈರ್ಮಲ್ಯ ಕಾಪಾಡಲು ಆದ್ಯ ಗಮನ ಕೊಡಬೇಕು. ಧೂಳು, ಕ್ರಿಮಿಕೀಟಗಳು ಬೀಳದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅದೇ ರೀತಿ ಕೋಳಿ ಅಂಗಡಿಗಳವರು, ಮಾಂಸದ ಅಂಗಡಿಗಳವರೂ ಸಹ ನೈರ್ಮಲ್ಯಕ್ಕೆ ಆದ್ಯ ಗಮನ ಕೊಡಬೇಕು. ಮಳಿಗೆಗಳ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಮಾರಾಟ ಮಾಡುವ ಪದಾರ್ಥಗಳು ಸ್ವಚ್ಛವಾಗಿರಬೇಕು. ಮಾರಾಟ ಮಾಡುವ ಸ್ಥಳ ಸ್ವಚ್ಛವಿರಬೇಕು. ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ಸೂಚನೆಗಳನ್ನು ನೀಡಿದ್ದಾರೆ.
ಈ ವಿಷಯವಾಗಿ ತಾವು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮತ್ತು ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಅವರೂ ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ ಎಂದು ಟಿ.ಕೆ.ನರಸಿಂಹಮೂರ್ತಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ