ಚಳ್ಳಕೆರೆ
ಸಾರ್ವಜನಿಕರ ಜೀವಕ್ಕೆ ಕಂಟಕಪ್ರಾಯವಾಗಿರುವ ಕರೋನಾ ಭಯಂಕರ ವೈರಾಣುವನ್ನು ನಿಯಂತ್ರಿಸುವಲ್ಲಿ ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸಮಾರೋಪದಿಯಲ್ಲಿ ಕೆಲಸ ನಿರ್ವಹಿಸಬೇಕು. ತಾಲ್ಲೂಕಿ 388 ಗ್ರಾಮಗಳಲ್ಲೂ ಸಹ ಆರೋಗ್ಯ ತಪಾಸಣಾ ಕಾರ್ಯ ತುರ್ತಾಗಿ ನಡೆಸಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು, ಶನಿವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕರೋನಾ ವೈರಾಣು ನಿಯಂತ್ರಣ ಸಮಿತಿ ಹಾಗೂ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಗೂ ತಹಶೀಲ್ದಾರ್ ತಂಡದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕರೋನಾ ವೈರಾಣು ಪತ್ತೆ ಬಗ್ಗೆ ಮಾಹಿತಿ ಲಭಿಸಿದೆ. ಯಾವುದೇ ಕಾರಣಕ್ಕೂ ಚಳ್ಳಕೆರೆ ತಾಲ್ಲೂಕಿನ ಯಾವುದೇ ಗ್ರಾಮದಲ್ಲಾಗಲಿ ಕರೋನಾ ರೋಗದಿಂದ ಯಾರೂ ನೋವು ಅನುಭವಿಸದಂತೆ ಸಾವಿನ ಅಂಚಿಗೆ ಹೋಗದಂತೆ ಕಾರ್ಯನಿರ್ವಹಿಸುವ ಸಂಪೂರ್ಣ ಜವಾಬ್ದಾರಿ ಎಲ್ಲಾ ಅಧಿಕಾರಿಗಳ ಮೇಲಿದೆ ಎಂದರು.
ಜಿಲ್ಲಾ ಸಾಂಕ್ರಾಮಿಕ ರೋಗಗಳ ವಿಭಾಗದ ಆರೋಗ್ಯ ನಿರೀಕ್ಷಕ ಎ.ಗಂಗಾಧರ ಮಾತನಾಡಿ, ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕರ ಸೂಚನೆಯಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕರೋನಾ ವೈರಾಣು ನಿಯಂತ್ರಣಕ್ಕೆ ಆರ್ಆರ್ಟಿ(ರ್ಯಾಪೀಡ್ ರೆಸ್ಪಾನ್ಸ್ ಟೀಂ) ತಂಡವನ್ನು ರಚಿಸಲಾಗಿದೆ. ನೋವೆಲ್ ವೈರಾಣುವಿನಿಂದ ಕರೋನಾ ವೈರಸ್ ಪ್ರಾರಂಭದಲ್ಲಿ ಚೀನದಲ್ಲಿ ಗೋಚರಿಸಿದ್ದು, ನಂತರ ಬೇರೆ, ಬೇರೆ ದೇಶಗಳಲ್ಲಿ ಹರಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ವೈರಾಣು ಹರಡದಂತೆ ಜಿಲ್ಲಾ ಮಟ್ಟದಲ್ಲೇ ತ್ವರಿತಗತಿಯಲ್ಲಿ ಕಾರ್ಯಚರಣೆ ಮಾಡಲಾಗುತ್ತಿದೆ. ವಿಶೇಷವಾಗಿ ರಜಾ ದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲೂ ವಿದೇಶದಿಂದ ಆಗಮಿಸಿದವರ ಬಗ್ಗೆ ಮಾಹಿತಿ ಸಂಗ್ರಹಿಸಿ ಕೂಡಲೇ ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾತನಾಡಿ, ಈ ರೋಗ ನಿಯಂತ್ರಣಕ್ಕೆ ಸಾರ್ವಜನಿಕರು ಕೆಮ್ಮು, ಸೀತ ನೆಗಡಿ ಆದಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು. ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ, ಆಶಾ, ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಲ್ಲಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮನವಿ ಮಾಡಿ ಈ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಆರ್ಆರ್ಟಿ ತಂಡವನ್ನು ರಚಿಸಿದ್ದು ಡಾ.ಎನ್.ಪ್ರೇಮಸುಧಾ, ಡಾ.ನಾಗರಾಜು, ಎನ್.ಪ್ರೇಮಕುಮಾರ್, ಪುಟ್ಟರಂಗಮ್ಮ, ಎಸ್.ಬಿ.ತಿಪ್ಪೇಸ್ವಾಮಿ, ಲ್ಯಾಬ್ ತಿಪ್ಪೇಸ್ವಾಮಿ, ನಿಂಗಪ್ಪ ಇವರ ತಂಡ ಕಾರ್ಯನಿರ್ವಹಿಸಲಿದೆ ಎಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಕರೋನಾ ವೈರಸ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕಿದೆ. ಈಗಾಗಲೇ ಗ್ರಾಮೀಣ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಇಒ ಮತ್ತು ಸಿಡಿಪಿಒ ಅಧಿಕಾರಿಗಳೂ ಸಹ ಈ ಕಾರ್ಯದಲ್ಲಿ ಭಾಗವಹಿಸುವರು. ಎಲ್ಲರ ಪರಿಶ್ರಮದಿಂದ ಈ ವೈರಾಣು ನಿಯಂತ್ರಣವಾಗಬೇಕಿದೆ ಎಂದರು.
ಸಭೆಯಲ್ಲಿ ನಗರಸಭಾ ಪೌರಾಯುಕ್ತ ಪಿ.ಪಾಲಯ್ಯ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧಿಕಾರಿ ಭೂತಣ್ಣ, ಕಂದಾಯಾಧಿಕಾರಿ ರಾಜೇಶ್, ಹಿರಿಯಪ್ಪ, ರಫೀ, ಮಹಲಿಂಗಪ್ಪ, ಖಾದರ್, ಎನ್.ಪ್ರೇಮಕುಮಾರ್, ಎಸ್.ಬಿ.ತಿಪ್ಪೇಸ್ವಾಮಿ, ನಾಗರಾಜು, ಎಂ.ಪ್ರಸನ್ನಕುಮಾರ್, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್, ರಮೇಶ್ಗೌಡ, ಅತಿಕೂರ್ ರೆಹಮಾನ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
