ಹೆದ್ದಾರಿಯ ತಿರುವುಗಳಲ್ಲಿ ಸುರಕ್ಷಾ ಕ್ರಮ ತೆಗೆದುಕೊಳ್ಳಿ : ವಿನೋತ್ ಪ್ರಿಯಾ

ಚಿತ್ರದುರ್ಗ:
   ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ತಿರುವು ಇರುವ ಕಡೆ ಪ್ರತಿ 20 ಕಿ.ಮೀ ಗೆ ಬ್ಲಿಂಕರ್ ಲೈಟ್ಸ್ ಜೊತೆಗೆ ವಾಯ್ಸ್ ಅಲರ್ಟ್‍ಗಳನ್ನು ಅಳವಡಿಸುವ ಕಾರ್ಯ 15 ದಿನಗಳಲ್ಲಿ ಮುಗಿಯಬೇಕು, ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 
   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲಾ ರಸ್ತೆ ಸುರಕ್ಷತಾ ನಿಧಿಯಡಿ ಜಿಲ್ಲೆಯ ರಸ್ತೆ ಸುರಕ್ಷತಾ ಕಾರ್ಯ ಚಟುವಟಿಕೆಗಳಿಗಾಗಿ 8.30 ಲಕ್ಷ ರೂ ಅನುದಾನವನ್ನು ರಾಜ್ಯ ಮಟ್ಟದ ಸಮಿತಿ ಬಿಡುಗಡೆ ಮಾಡಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
  ಬೆಂಗಳೂರಿನಿಂದ ಚಿತ್ರದುರ್ಗ ನಗರಕ್ಕೆ ಪ್ರವೇಶಿಸುವ ವಾಹನಗಳಿಗೆ ಫ್ಲೈ ಓವರ್ ಬಳಿ ಎದುರಿಗೆ ಬರುವ ವಾಹನ ಕಾಣದೆ ಹೆಚ್ಚು ಅಪಘಾತ ಸಂಭವಿಸುತ್ತಿದ್ದು, ಈ ಫ್ಲೈ ಓವರ್ ಬಳಿ ಕಾನ್ವೆಕ್ಸ್ ಮಿರರ್ ಫಲಕ ಅಳವಡಿಸಬೇಕು, ಅದರ ಪ್ರತಿಫಲನ ವಾಹನಚಾಲಕರಿಗೆ ಕಾಣುವಂತಿರಬೇಕು. ಮದ್ಯಪಾನ ಮಾಡಿ ಚಾಲನೆ ಮಾಡುವ ಚಾಲಕರ ತಪಾಸಣೆಗಾಗಿ ಆಲ್ಕೋಮೀಟರ್ ಹಾಗೂ ಅತಿ ವೇಗದ ಚಾಲನೆ ಮಾಡುವ ಚಾಲಕರ ತಪಾಸಣೆಗಾಗಿ ಸ್ಪೀಡ್‍ಗನ್‍ಗಳ ಖರೀದಿಗೆ 1.8 ಲಕ್ಷ ರೂ ಒದಗಿಸಲಾಗುವುದು ಎಂದರು
 
    ಹಿರಿಯೂರು, ಚಿತ್ರದುರ್ಗ ಮತ್ತು ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆ.ಜೆ. ಹಳ್ಳಿ ಸಮೀಪ, ಶನೇಶ್ವರ ದೇವಸ್ಥಾನದ ಬಳಿ ಸ್ಥಳಾವಕಾಶ ಲಭ್ಯವಿದ್ದು ಅಲ್ಲಿ ಚಾಲಕರಿಗೆ ವಿಶ್ರಾಂತಿ ಪಡೆಯುವ ಸಲುವಾಗಿ ಒಂದು ರಿಫ್ರೆಶ್‍ಮೆಂಟ್ ಮಳಿಗೆ ಅಥವಾ ಒಂದು ಟರ್ಮಿನಲ್ ಸ್ಥಾಪನೆ, ಅಪಘಾತ ವಲಯಗಳಲ್ಲಿ  ಸೂಚನಾ ಫಲಕದೊಂದಿಗೆ ಸೋಲರ್ ಆಧಾರಿತ ಬ್ಲಿಂಕರ್ ಲೈಟ್‍ಗಳ ಅಳವಡಿಕೆ ಹಾಗೂ ರಾತ್ರಿ ಸಮಯದಲ್ಲಿ ಎದ್ದು ಕಾಣುವ ರಸ್ತೆ ಮಾರ್ಗ ವಿಭಜಕಗಳನ್ನು ಉತ್ತಮ ಗುಣಮಟ್ಟದ ಬಿಳಿ ಬಣ್ಣದ ಪಟ್ಟಿಗಳನ್ನು ಅಪಘಾತ ವಲಯಗಳಲ್ಲಿ ಹಾಕಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
 
    ಇವೆಲ್ಲಾ ಕಾರ್ಯ 15 ದಿನಗಳ ಒಳಗಾಗಿ ಆಗಬೇಕು, ತಪ್ಪಿದಲ್ಲಿ ಈ ಭಾಗದಲ್ಲಾದ ಯಾವುದೇ ಅಪಘಾತ ಪ್ರಕರಣಗಳಲ್ಲಿ, ಸಮಿತಿಯ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪರಿಗಣಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.
     ವಿದ್ಯಾರ್ಥಿಯ ಸೇವೆಗೆ ಪ್ರಶಂಸೆ : ಇಂಗಳದಾಳ ಗ್ರಾಮದ ಬಿಇಡಿ ವಿದ್ಯಾರ್ಥಿ ರಂಗಸ್ವಾಮಿ, ಜಿಲ್ಲೆಯ ನಾನಾ ಭಾಗದ ಸುಮಾರು 250 ವಿದ್ಯಾರ್ಥಿಗಳನ್ನೊಳಗೊಂಡ ‘ಸಂಜೀವಿನಿ’ ವ್ಯಾಟ್ಸಪ್ ಗುಂಪು ರಚಿಸಿಕೊಂಡು, ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಜರುಗುವ ಅಪಘಾತದ ಬಗ್ಗೆ ಮಾಹಿತಿ ಪಡೆದು, ಕೂಡಲೆ ಸ್ಥಳಕ್ಕೆ ಧಾವಿಸಿ, ನೆರವು ಒದಗಿಸುತ್ತಿರುವ ಕಾರ್ಯ ಪ್ರಶಂಸನೀಯವಾಗಿದೆ. ಈ ಗುಂಪಿನಲ್ಲಿ ಎಲ್ಲಾ ಸಮಾನ ಮನಸ್ಕ ವಿದ್ಯಾರ್ಥಿಗಳಿದ್ದು, ಸಮಾಜ ಸೇವೆಗಾಗಿ ತಮ್ಮ ಸಮಯ ಮೀಸಲಿಡುತ್ತಿದ್ದಾರೆ. ಇಂತಹ ಕಾರ್ಯಗಳಿಗೆ ಅಧಿಕಾರಿಗಳು ಸಹಕಾರ ನೀಡಿ ಪ್ರೋತ್ಸಾಹಿಸಬೇಕಿದೆ. ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
    ಜೊತೆಗೆ ಈ ಗುಂಪಿನ ಎಲ್ಲ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ ನೀಡುವಂತೆ ಹಾಗೂ ಸಂಚಾರಿ ನಿಯಮಗಳ ಕುರಿತು ತರಬೇತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
      ಪ್ರಾದೇಶಿಕ ಸಾರಿಗೆ ಅಧಿಕಾರಿ ಗಣಪತಿ ಎಸ್ ಹೆಗಡೆ ಅವರು ಮಾತನಾಡಿ,  ಜಿಲ್ಲೆಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ  ವಾಗಿ ನಿರ್ಮಿಸಿರುವ ಸುಮಾರು 200 ಉಬ್ಬು ತಗ್ಗುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಬೇಕು. ಪ್ರತಿ 50 ಕಿ. ಮೀ ಅಂತರಕ್ಕೆ 1 ಅ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಅವಕಾಶವಿದ್ದು, ಕ್ಯಾದಿಗೆರೆಯಿಂದ ಚಿತ್ರದುರ್ಗಕ್ಕೆ 60 ಕಿ.ಮೀ ಅಂತರವಿರುವುದರಿಂದ ಪ್ರಸ್ತುತ 2 ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಡಿ ಭರಮಸಾಗರ, ಐಮಂಗಲ ಹಾಗೂ ಜವನಗೊಂಡನಹಳ್ಳಿಯಲ್ಲಿ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು 2 ಆ್ಯಂಬುಲೆನ್ಸ್ ಸೇವೆ ಕಲ್ಪಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಕೋರಿದರು . 
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ , ಡಿವೈಎಸ್‍ಪಿ ವಿಜಯಕುಮಾರ್ ಸಂತೋಷ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ನಾಯಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link