ದಾವಣಗೆರೆ:
ಜಿಲ್ಲೆಯಲ್ಲಿ ದೃಢಪಟ್ಟಿದ್ದ ಮೂರು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಸೋಂಕಿತರು ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮುಂದೆಯೂ ಒಬ್ಬರಲ್ಲೂ ಸೋಂಕು ಕಾಣಿಸದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳು ಜಾರಿಯಲ್ಲಿರಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ 19 ವೈರಾಣು ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೇರೆ ಕೆಲವು ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ನಮ್ಮಲ್ಲಿ ಉತ್ತಮ ಮಾನವ ಸಂಪನ್ಮೂಲ, ಮೂಲ ಸೌಕರ್ಯಗಳಿದ್ದು ಜಿಲ್ಲಾಡಳಿತವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಎರಡು ತಿಂಗಳ ಶೇ.72 ಪಡಿತರ ವಿತರಣೆಯಾಗಿದ್ದು, ಇನ್ನು ಮುಂದೆ ಮುಂಚಿತವಾಗಿ ಯೋಜನೆ ಹಾಕಿಕೊಂಡು ಟೋಕನ್ ನೀಡಿ ಪಡಿತರ ಹಂಚಿಕೆ ಮಾಡುವ ಮೂಲಕ ಜನದಟ್ಟಣೆಯಾಗದಂತೆ ಕ್ರಮ ವಹಿಸಬೇಕು. ರೇಷನ್ ಕಾರ್ಡ್ಗೆ ಅರ್ಜಿ ಹಾಕಿದವರಿಗೂ ಪಡಿತರ ನೀಡಬೇಕೆಂದು ಸರ್ಕಾರ ಸೂಚಿಸಿದ್ದು, ಬಡವರು ಹಸಿವಿನಿಂದ ಬಳಲದಂತೆ ಹಾಗೂ ಪಡಿತರ ಎಲ್ಲೂ ದುರ್ಬಳಕೆ ಆಗದಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಖಚಿತ ಪಟ್ಟ ಮೂರು ಪ್ರಕರಣಗಳಲ್ಲಿ ಮೂರೂ ಜನರು ಗುಣಮುಖರಾಗಿ ಆಸ್ಪತ್ರೆÉಯಿಂದ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಿಂದ 42 ಜನರು ಬಿಡುಗಡೆ ಹೊಂದಿದ್ದಾರೆ. ಪರೀಕ್ಷೆ ಮಾಡಲು ಸಂಗ್ರÀಹಿಸಿಲಾದ 72 ಮಾದರಿಗಳ ಪೈಕಿ 67 ನೆಗಟಿವ್ ಬಂದಿದೆ. ಐದು ಇಂದು ಸಂಜೆ ಹೊತ್ತಿಗೆ ಫಲಿತಾಂಶ ಬರಲಿದೆ. ಸಿಜಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಗುರುತಿಸಿ ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ನಗರದ ನಾಲ್ಕು ಆಸ್ಪತ್ರೆಗಳು ಸೇರಿದಂತೆ ಪ್ರತಿ ತಾಲ್ಲೂಕುಗಳಲ್ಲಿ ತಲಾ ಐದು ಐಸೊಲೇಷನ್ ಬೆಡ್ಗಳನ್ನು ಗುರುತಿಸಲಾಗಿದೆ. ನಗರದಲ್ಲಿ ಒಟ್ಟು 14 ಜ್ವರದ ಕ್ಲಿನಿಕ್ಗಳನ್ನು ಪ್ರಾರಂಭಿಸಲಾಗಿದ್ದು, ಬಿಪಿ, ಸಕ್ಕರೆ ಕಾಯಿಲೆ ಸೇರಿದಂತೆ ಸಾಮಾನ್ಯ ಔಷಧಿಗಳು ದೊರೆಯುವಂತೆ ಮಾಡಲಾಗಿದೆ ಎಂದರು.
ಕಂಟೈನ್ಮೆಂಟ್ ಝೋನ್ನಲ್ಲಿ 1993 ಮನೆಗಳಿಂದ 4784 ಜನರನ್ನು ಸಂದರ್ಶಿಸಿ ಫ್ಲೂ ಸಮೀಕ್ಷೆಯನ್ನು ಮಾಡಲಾಗಿದೆ. ಮತ್ತು ದೆಹಲಿಯ ನಿಜಾಮ್ದ್ದಿನ್ ಸಮಾವೇಶಕ್ಕೆ ಹೋಗಿ ಬಂದವರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇವರ ಕುರಿತಾಗಿ ಪ್ರತಿದಿನದ ವರದಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಎರಡು ತಿಂಗಳ ಪಡಿತರ ಶೇ.72 ವಿತರಣೆಯಾಗಿದೆ. ರೇಷನ್ಕಾರ್ಡ್ಗೆ ಅರ್ಜಿ ಸಲ್ಲಿಸಿದವರ ಮಾಹಿತಿ ಪಡೆದು ಪಡಿತರ ನೀಡುವಂತೆ ಸರ್ಕಾರ ಆದೇಶಿಸಿದ್ದು ಈ ನಿಟ್ಟಿನಲ್ಲಿ ಕಾರ್ಯವೆಸಗಲಾಗುತ್ತಿದೆ. ಕಲ್ಬುರ್ಗಿಯಿಂದ ತೊಗರಿಬೇಳೆಯನ್ನು ತರಿಸಿಕೊಳ್ಳಲಾಗುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ಪಡಿತರ ನೀಡಲು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಎಂಟರಿಂದ ಹತ್ತು ದೂರುಗಳು ಬಂದಿದ್ದು, ಈ ಪೈಕಿ ಮೂರು ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು ಉಳಿದ ಅಂಗಡಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಅಗತ್ಯ ಮಾಸ್ಕ್ಗಳನ್ನು ಒದಗಿಸಬೇಕು. ಹತ್ತಿ ಬಟ್ಟೆಯ ಮಾಸ್ಕ್ಗಳನ್ನು ದಿನಸಿ ಅಂಗಡಿಗಳಲ್ಲಿ ಸಹ ಮಾರಾಟ ಮಾಡಬಹುದು. ಮೂರು ಲೇಯರ್ ಮಾಸ್ಕ್ಗಳನ್ನು ತಯಾರಿಸಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮೊದಲ ಆದ್ಯತೆಯಲ್ಲಿ ನೀಡಬೇಕು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಕೇಂದ್ರದ ಅಧಿಕಾರಿ ಬಸವರಾಜ್ ಮಾತನಾಡಿ, ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರದಿಂದ ದಿನವೊಂದಕ್ಕೆ 10 ಸಾವಿರ ಕಾಟನ್ ಮಾಸ್ಕ್ ತಯಾರಿಸುತ್ತಿದ್ದು, 10 ಲಕ್ಷ ಮಾಸ್ಕ್ ಹೊಲಿಸುವ ಗುರಿ ಇದೆ. ಮೂರು ಲೇಯರ್ನ 7 ಲಕ್ಷ ಮಾಸ್ಕ್ಗಳನ್ನು ಹೊಲಿಸಲಾಗುವುದು ಎಂದರು.
ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್ ಮಾತನಾಡಿ, ರೈತರ ಬಳಿ ಸುಮಾರು 15 ರಿಂದ 20 ಟನ್ ಸಿಹಿಗುಂಬಳ ಮತ್ತು ಕೋಸು ಇದ್ದು, ಅದನ್ನು ಖರೀದಿ ಮಾಡಿ ಉಡುಪಿ, ಮಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸಿಹಿಗುಂಬಳಕ್ಕೆ ಸ್ವಲ್ಪ ಕಡಿಮೆ ಬೆಲೆ ಸಿಕ್ಕಿದ್ದು, ಉಳಿದಂತೆ ಬೇರೆ ಎಲ್ಲ ಬೆಳೆಗಳಿಗೆ ಕಳೆದ ಸಾಲಿಗಿಂತ ರೈತರಿಗೆ ಉತ್ತಮ ಬೆಲೆ ಲಭಿಸಿದೆ ಎಂದರು.
ಉಮಾಶಂಕರ್ ಮಾತನಾಡಿ, ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಸಾಕಷ್ಟಿದೆಯಾ? ಬಿತ್ತನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಕೃಷಿ ಜಂಟಿ ನಿರ್ದೇಶಕರು ಉತ್ತರಿಸಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಸಾಕಷ್ಟಿದ್ದು, ಬಿತ್ತನೆಗೆ ಅವಶ್ಯಕವಾದ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕೈಗಾರಿಕಾ ಸಂಸ್ಥೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲೆಯಲ್ಲಿ ಒಟ್ಟು 137 ಅಗತ್ಯವಸ್ತುಗಳ ಕೈಗಾರಿಕೆಗಳಿದ್ದು ಬಹುತೇಕ ಎಲ್ಲ ಕಾರ್ಯ ನಿರ್ವಹಿಸುತ್ತಿವೆ. ರೈಸ್ ಮಿಲ್, ಮಿನರಲ್ ವಾಟರ್, ಪ್ಯಾಕೇಜಿಂಗ್ನ ಬಹುತೇಕ ಯುನಿಟ್ಗಳು ಕಾರ್ಯಾರಂಭ ಮಾಡಿದ್ದು ಇವುಗಳಲ್ಲಿ ಕೆಲವು ಘಟಕಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಪಾಲಿಕೆ ವತಿಯಿಂದ ಎಲ್ಲ ವಾರ್ಡುಗಳಲ್ಲಿ ಔಷಧಿ ಸಿಂಪಡಣೆ ಆಗಿದೆ. ಪ್ರತಿದಿನ ಪೌರ ಕಾರ್ಮಿಕರು ಸ್ವಚ್ಚತೆ ಕಾರ್ಯ ಮಾಡುತ್ತಿದ್ದು ಅವರಿಗೆ ಅಗತ್ಯ ಮಾಸ್ಕ್, ಗ್ಲೌಸ್ ಇನ್ನಿತರೆ ಸುರಕ್ಷತಾ ಪರಿಕರಗಳು ಹಾಗೂ ಬೆಳಗಿನ ತಿಂಡಿ ನೀಡಲಾಗುತ್ತಿದೆ. ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನಗರದಲ್ಲಿರುವ ಸುಮಾರು 15 ಸ್ಲಂಗಳ ಮನೆಗಳಿಗೇ ಹೋಗಿ ಉಚಿತ ಹಾಲು ನೀಡುವ ವ್ಯವಸ್ಥೆ ಮಾಡಲಾಗಿದೆ. 50 ತಂಡಗಳನ್ನು ರಚಿಸಿ ಮೂರು ಪಾಯಿಂಟ್ಗಳಿಂದ ಹಾಲು ವಿತರಣೆಯಾಗುತ್ತದೆ. 12,957 ಕುಟುಂಬಗಳಿಗೆ ಪ್ರಸ್ತುತ ಹಾಲು ನೀಡಲಾಗುತ್ತಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯಲ್ಲಿ 21 ಡಾಬಾಗಳು ತೆರೆದಿದ್ದು ಕೇವಲ ಪಾರ್ಸೆಲ್ ಆಹಾರ ನೀಡುತ್ತಿದ್ದಾರೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್, ಇಂತಹ ಡಾಬಾ ಮತ್ತು ಹೋಟೆಲ್ಗಳಿಗೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಲಾರಿ ಡ್ರೈವರ್ ಸಿಬ್ಬಂದಿ ಬರುವುದರಿಂದ ಇಲ್ಲಿಗೆ ಒಂದು ತಂಡವನ್ನು ನಿಯೋಜಿಸಿ ನಿಗಾ ಇಟ್ಟು ಈ ಡಾಬಾ/ಹೋಟೆಲ್ಗಳನ್ನು ಸ್ಯಾನಿಟೈಸ್ ಮಾಡಿಸಬೇಕು ಹಾಗೂ ಅಲ್ಲಿ ಕೆಲಸ ಮಾಡುವವರ ಆರೋಗ್ಯ ತಪಾಸಣೆ ನಡೆಸಿ, ಕೆಮ್ಮು ಶೀತ, ಜ್ವರದಂತಹ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಸಿ ಮಮತಾ ಹೊಸಗೌಡರ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
