ಬೇಸಿಗೆ ನೀರಿನ ಬವಣೆ ತಪ್ಪಿಸುವ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಲತಾರವಿಕುಮಾರ್

ತುಮಕೂರು

     ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಆಯಾ ಗ್ರಾಮ ಪಂಚಾಯ್ತಿಗಳ ನಿರ್ವಹಣೆಗೆ ವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ಅಧಿಕಾರಿಗಳಿಗೆ ಹೇಳಿದರು.

   ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ   ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿದ್ದ ಅವರು, ಕಳೆದ ವರ್ಷದಂತೆ ಈ ವರ್ಷದ ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಅಧಿಕಾರಿಗಳ ಮಾಹಿತಿ ಪಡೆದು, ನೀರಿನ ಲಭ್ಯತೆ ಗುರುತಿಸಿ ಬೇಸಿಗೆಯಲ್ಲಿ ಸರಬರಾಜು ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

    ನೀರಿನ ಕೊರತೆ ಎಂದು ಹಳ್ಳಿಗಳಿಗೆ ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಮಾತ್ರ. ಅಂತಹ ಪರಿಸ್ಥಿತಿಗೆ ಅವಕಾಶ ಮಾಡಿಕೊಡದೆ, ನೀರು ಸಿಗಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಪಟ್ಟಿಮಾಡಿಕೊಳ್ಳಿ, ಹೊಸದಾಗಿ ಕೊಳವೆ ಬಾವಿ ಕೊರೆಯುವ ಸಂದರ್ಭ ಬರಬಹುದು, ಮುಂಗಡವಾಗಿ ಜಿಯಾಲಜಿಸ್ಟ್‍ಗಳಿಂದ ನೀರಿನ ಸೆಲೆ ಗುರುತಿಸಿಕೊಳ್ಳಿ ಅಗತ್ಯ ಬಂದಾಗ ಕೊರೆಯಬಹುದು ಎಂದು ಸಲಹೆ ಮಾಡಿದರು.

     ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಬಗ್ಗೆ ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್, ಕೆ.ಆರ್.ಐ.ಡಿಎಲ್ ಸಂಸ್ಥೆಯಿಂದ 54 ಘಟಕಗಳು ಒಳಗೊಂಡಿರುತ್ತದೆ. ತುರುವೇಕೆರೆ ತಾಲೂಕಿನ 24, ಕೊರಟಗೆರೆ-4, ತಿಪಟೂರು ತಾಲೂಕಿನ 4 ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗಾಗಿ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆರ್‍ಓ ಪ್ಲಾಂಟ್‍ಗಳನ್ನು ಪಂಚಾಯತಿ ಅನುದಾನದಡಿ ದುರಸ್ಥಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಜಿಲ್ಲೆಯ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕೆಟ್ಟಿರುವ ಘಟಕಗಳನ್ನು ಈ ತಿಂಗಳಲ್ಲಿ ರಿಪೇರಿ ಮಾಡಿಸಿ ಗ್ರಾಮ ಪಂಚಾಯ್ತಿಗಳಿಗೆ ವಹಿಸಬೇಕು. ಗ್ರಾಮ ಪಂಚಾಯ್ತಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿವೆಯೆ ಎಂಬ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಒಗಳು ಗಮನಹರಿಸಬೇಕು ಎಂದು ಹೇಳಿದರು.

    ಕೆಟ್ಟದ್ದ 191 ಶುದ್ಧ ನೀರಿನ ಘಟಕಗಳನ್ನು ದುರಸ್ಥಿಗೊಳಿಸಲಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತಹ ವಿವರವಾದ ಯೋಜನಾವರದಿಯನ್ನು ಅಧಿಕಾರಿಗಳು ಸಲ್ಲಿಸಿಲ್ಲ. ನೀರಿನ ಘಟಕಗಳಲ್ಲಿ ಮೆಂಬ್ರೇನ್, ಕಾಯಿನ್ ಬಾಕ್ಸ್ ಕೆಟ್ಟಿವೆಯೆ ಅಥವಾ ಇನ್ನಾವ ತೊಂದರೆಯಿಂದಾಗಿ ಘಟಕ ಕೆಟ್ಟಿವೆ ಎಂಬ ವಿವರವಾದ ವರದಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ ನೀಡಿದರೆ ದುರಸ್ಥಿಗೆ ಅನುಮೋದನೆ ನೀಡಬಹುದು ಎಂದು ಸಿಇಒ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಹೇಳಿದರು.

      ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ವಿವರ ನೀಡಲು ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್ ವಿಫಲವಾದಾಗ, ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತೀರಿ ಎಂದು ಅಧ್ಯಕ್ಷರು ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.ಜಿಲ್ಲೆಯ ಎಷ್ಟು ಹಳ್ಳಿಗಳಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಇದೆ, ಬೇಸಿಗೆ ವೇಲೆಗೆ ಇನ್ನೆಷ್ಟು ಹೆಚ್ಚಾಗಬಹುದು, ಅದಕ್ಕೆ ಪರಿಹಾರ ಕ್ರಮಗಳೇನು ಎನ್ನುವ ಬಗ್ಗೆ ನಿಮಗೆ ಮಾಹಿತಿಯೇ ಇಲ್ಲ ಎಂದರು.

       ನೀವು ಅಧಿಕಾರಿಗಳು ಕಚೇರಿಯಲ್ಲಿರುತ್ತೀರಿ, ನೀರಿನ ಸಮಸ್ಯೆ ಬಗ್ಗೆ ಜನ ನಮ್ಮನ್ನು ಕೇಳುತ್ತಾರೆ, ನಾವು ಏನು ಉತ್ತರ ನೀಡಬೇಕು ಎಂದು ಸ್ಥಯಿ ಸಮಿತಿ ಅಧ್ಯಕ್ಷೆ ಡಾ. ನವ್ಯಾ ಬಾಬು ಅಧಿಕಾರಯ ವಿರುದ್ಧ ಅಸಹನೆ ವ್ಯಕ್ತಪಡಿಸಿದರು. ನೀರು ಲಭ್ಯವಿರುವ ಕೊಳವೆ ಬಾವಿಗಳನ್ನು ಗುರುತಿಸಿ, ಪೈಪ್ ಅಳವಡಿಸುವುದು ಮುಂತಾದ ಸಿದ್ಧತಾ ಕ್ರಮ ಆರಂಭಿಸಿ ಎಂದು ಹೇಳಿದರು.

       ತುಮಕೂರು ತಾಲ್ಲೂಕು ಬನ್ನಿಕುಪ್ಪೆ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ, ರೈತರ ತಮ್ಮ ಜಮೀನಿಗೆ ಹೋಗಲು ಹೆದರುವಂತಾಗಿದೆ. ಇತ್ತೀಚೆಗೆ ಗ್ರಾಮದ ಲಕ್ಷ್ಮಮ್ಮ ಎಂಬವವರನ್ನು ಚಿರತೆ ಕೊಂದಿತ್ತು. ಈ ಚಿರತೆ ಹಿಡಿಯಲು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅರಣ್ಯಾಧಿಕಾರಿಗಳಿಗೆ ಕೇಳಿದರು.ಪ್ರಾದೇಶಿಕ ಅರಣ್ಯಾಧಿಕಾರಿ ಮುನಿರಾಜು ಮಾತನಾಡಿ, ನರಹಂತಕ ಚಿರತೆ ಹಿಡಿಯಲು ತುಮಕೂರು ವಲಯದ ಬನ್ನಿಕುಪ್ಪೆ, ಕುಣಿಗಲ್ ವಲಯದ ದೊಡ್ಡಮಳಲವಾಡಿ ಹಾಗೂ ಗುಬ್ಬಿ ವಲಯದ ಮಣಿಕುಪ್ಪೆ ಗ್ರಾಮಗಳ ಸುತ್ತಮುತ್ತ 18 ಸ್ಥಳಗಳಲ್ಲಿ ಬೋನುಗಳನ್ನು ಇಟ್ಟು ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಚಿರತೆ ಬೋನಿಗೆ ಬೀಳುತ್ತಿಲ್ಲ ಎಂದರು.

    ಚಿರತೆ ಬಗ್ಗೆ ಜಾಗರೂಕತೆಯಿಂದ ಇರಲು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಉಪಾಧ್ಯಕ್ಷರು ಹೇಳಿದರು. ಅರಿವು ಮೂಡಿಸಲಾಗುತ್ತಿದೆ. ಗ್ರಾಮಗಳ ಸುತ್ತಲಿನ ಪೊದೆ ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಗ್ರಾಮಪಂಚಾಯ್ತಿಗಳಿಗೆ ಸೂಚನೆ ನೀಡಿದ್ದಾರೆ, ಆದರೆ ಗ್ರಾಮಗಳಲ್ಲಿ ಪೊದೆ ತೆರವು ಮಾಡಿಲ್ಲ ಎಂದು ಅಧಿಕಾರಿ ಹೇಳಿದರು.

    ನರೇಗಾ ಯೋಜನೆಯಡಿ 191 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದ್ದು ಎಲ್ಲಾ ಕಟ್ಟಡಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್ ಆಯಾ ಅಧಿಕಾರಿಗಳಿಗೆ ಸೂಚಿಸಿದರು.ಆರ್‍ಐಡಿಎಫ್ ಯೋಜನೆಯಡಿ 55 ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದು ಈ ಪೈಕಿ 43 ಕಟ್ಟಡಗಳ ಕಾಮಗಾರಿ ಮುಗಿದಿದೆ. ಉಳಿದ 12 ಕಟ್ಟಡಗಳ ಕಾವಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಎಸ್‍ಡಿಪಿ ಯೋಜನೆಯ 15, ನರೇಗಾ ಒಗ್ಗೂಡಿಸುವಿಕೆ ಯೋಜನೆಯ 191 ಕಟ್ಟಡಗಳ ಕಾಮಗಾರಿಯನ್ನು ಮುಂದಿನ ತಿಂಗಳೊಳಗೆ ಮುಗಿಸಲು ಸೂಚಿಸಿದರು.

    ಕೊರೊನಾ ವೈರಸ್ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತರಬೇತಿ ನೀಡಿ, ಮನೆ-ಮನೆಗೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕ್ರಮವಹಿಸಬೇಕು. ಮತ್ತು ಶಾಲಾ ಮಕ್ಕಳಿಗೆ ಕೈ-ಕಾಲುಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಂತೆ ತಿಳಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

    ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಿಡಿ 2018ನೇ ಸಾಲಿನಲ್ಲಿ 66339 ರೈತರು ನೊಂದಣಿ ಮಾಡಿಸಿದ್ದು, 50068 ರೈತರಿಗೆ 5310.40 ಲಕ್ಷ ರೂ. ವಿಮಾ ಮೊತ್ತ ಪಾವತಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಹೇಳಿದರು.

     ತೋಟಗಾರಿಕೆ ಇಲಾಖೆಯಡಿ ಹವಾಮಾನ ಆಧಾರಿತ ಇನ್ಸೂರೆನ್ಸ್ ಯೋಜನೆಯಲ್ಲಿ ಒಟ್ಟು 16550 ಪ್ರಕರಣಗಳ ಪೈಕಿ 8176 ಪ್ರಕರಣಗಳಿಗೆ ಒಟ್ಟು 1813.94 ಲಕ್ಷ ರೂ.ಗಳು ರೈತರ ಖಾತೆಗಳಿಗೆ ಪಾವತಿಯಾಗಿದ್ದು, ಬಾಕಿಯಿರುವ 7760 ಪ್ರಕರಣಗಳಿಗೆ 1984.04 ಲಕ್ಷ ರೂ.ಗಳು ರೈತರಿಗೆ ಪಾವತಿಯಾಗಬೇಕು. ಸದರಿ ಪ್ರಕರಣಗಳಿಗೆ ಬೆಳೆ ಸಮೀಕ್ಷೆಗೂ ಹಾಗೂ ನೋಂದಣಿ ಸಮಯದಲ್ಲಿ ರೈತರು ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ನಮೂದಿಸಿರುವ ಬೆಳೆಗೂ ಹೊಂದಾಣಿಕೆ ಆಗದ ಕಾರಣ ರೈತರಿಗೆ ಹಣ ಪಾವತಿಯಾಗಿರುವುದಿಲ್ಲ ಎಂದರಲ್ಲದೇ, ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಇನ್ಸೂರೆನ್ಸ್ ಕಂಪನಿಯಿಂದ ಹಣ ರೈತರಿಗೆ ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಅವರು ಸಭೆಗೆ ಮಾಹಿತಿ ನೀಡಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ|| ನವ್ಯಬಾಬು, ಅಕ್ಕಮಹಾದೇವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link