ತಾಲ್ಲೂಕಿನಲ್ಲಿ ಬರನಿರ್ವಹಣೆ ಕುರಿತು ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆ

ಹಿರಿಯೂರು :

       ಹಾಲಿ ಇರುವ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ ಎಂದು ಸುಮ್ಮನಾಗುವ ಬದಲು, ಇನ್ನೊಂದಿಷ್ಟು ಆಳಕ್ಕೆ ಪೈಪ್ ಇಳಿಸಿ ನೋಡಬೇಕು. ಸಾಧ್ಯವಾದರೆ ಕೊಳವೆ ಬಾವಿಯನ್ನು ಮತ್ತೊಂದಿಷ್ಟು ಆಳಕ್ಕೆ ಕೊರೆಸಲು ಅಧಿಕಾರಿಗಳು ಚಿಂತಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ತಾಕೀತು ಮಾಡಿದರು. ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬರನಿರ್ವಹಣೆ ಕುರಿತು ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

        ತಾಲ್ಲೂಕಿನಲ್ಲಿ ಪ್ರಸ್ತುತ 14 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನೂ 34 ಹಳ್ಳಿಗಳ ಪಟ್ಟಿ ಸಿದ್ಧವಾಗಿದೆ. ಹುಚ್ಚವ್ವನಹಳ್ಳಿ, ಹೊಸೂರು, ಕ್ಯಾತೇದೇವರಹಟ್ಟಿ, ಮಲ್ಲೇಣು, ಯರದಕಟ್ಟೆ, ಆಲೂರು, ಹೊಸಯಳನಾಡು ಸೇರಿದಂತೆ 14 ಹಳ್ಳಿಗಳಿಗೆ ಟ್ಯಾಂಕರ್‍ನಲ್ಲಿ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

       ಕೆಲವು ಹಳ್ಳಿಗಳಲ್ಲಿ 800 ಅಡಿಯವರೆಗೆ ಕೊಳವೆಬಾವಿ ಕೊರೆಸಲಾಗಿದೆ.ಹೊಸ ಯಳನಾಡು ಗ್ರಾಮದ ಹಳ್ಳಿಯಲ್ಲಿ ನೀರು ಬಂದಿದ್ದು 4ಕಿ.ಮೀ. ಪೈಪ್‍ಲೈನ್ ಮಾಡಬೇಕಿದೆ ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್ ಮಂಜುನಾಥ್ ಸಭೆಗೆ ತಿಳಿಸಿದರು.
ನೀರು ಕೊಡುವ ವಿಚಾರದಲ್ಲಿ ಮೀನ-ಮೇಷ ಎಣಿಸಬಾರದು. 2-3 ದಿನಕ್ಕೊಮ್ಮೆ ಒಬ್ಬ ವ್ಯಕ್ತಿಗೆ ಕನಿಷ್ಠ 40 ಲೀಟರ್‍ನಂತೆ ಲೆಕ್ಕಹಾಕಿ ನೀರು ಕೊಡಬೇಕು. ಜಿಲ್ಲೆಯಲ್ಲಿ 79 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಮಸ್ಯೆ ಇದ್ದು, ಇಲ್ಲಿ 11 ಸರಿಯಾಗಿ ನಡೆಯುತ್ತಿಲ್ಲ. ತಾಲ್ಲೂಕಿನ ಅಗತ್ಯತೆಯ ಬಗ್ಗೆ ವಿವರವಾದ ಅಂದಾಜುಪಟ್ಟಿ ತಯಾರಿಸಿ ಕೊಡಬೇಕು ಎಂದು ಸಿಇಒ ರವೀಂದ್ರ ಸೂಚಿಸಿದರು.

      ತಾಲ್ಲೂಕಿನ 152 ಕಂದಾಯ ಗ್ರಾಮಗಳ ಪೈಕಿ 138 ರಲ್ಲಿ ಜಾನುವಾರು ನೀರಿನ ತೊಟ್ಟಿಗಳಿವೆ ಎಂದು ಪಶುಇಲಾಖೆ ಅಧಿಕಾರಿ ಡಾ.ರವಿ ತಿಳಿಸಿದಾಗ, ಗೊಲ್ಲರಹಟ್ಟಿಗಳಲ್ಲಿ , ತಾಂಡಾಗಳಲ್ಲಿ, ಕಾಲೊನಿಗಳಲ್ಲಿಯೂ ತೊಟ್ಟಿಗಳು ಇವೆಯೇ? ಕುರಿ, ಮೇಕೆ, ದನ-ಕರುಗಳು ಕುಡಿಯುವಂತೆ ಇವೆಯೇ? ಪಾಚ್ಚಿಕಟ್ಟಿದ್ದರೆ ಪಿಡಿಒಗಳಿಗೆ ಹೇಳಿ ಶುಚಿಗೊಳಿಸಿ ಸುಣ್ಣ ಬಳಸಿ ಎಂದು ಸಿಇಒ ತಿಳಿಸಿದರು.

       ನರೇಗಾ ಪ್ರಗತಿ; ಬೇಸರ ತಾಲ್ಲೂಕಿನ ಮರಡಿಹಳ್ಳಿಯಲ್ಲಿ ಕೇವಲ 1750, ಬುರುಜನರೊಪ್ಪ ಪಂಚಾಯಿತಿಯಲ್ಲಿ 3700 ಮಾನವ ದಿನಗಳನ್ನು ತೋರಿಸಲಾಗಿದೆ. ಬೇರೆ ಪಂಚಾಯಿತಿಗಳಲ್ಲಿ 13 ರಿಂದ 50 ಸಾವಿರ ಮಾನವ ದಿನಗಳಾಗಿವೆ. ಬದು, ಕೃಷಿಹೊಂಡ, ಕೆರೆಯ ಹೂಳು ತೆಗೆಸಲು ನಿಮಗಿರುವ ತೊಂದರೆ ಏನು? ಸಂಘಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಕೂಲಿಗೆ ಬರುವಂತೆ ಮಾಡಬೇಕು ಎಂದು ರವೀಂದ್ರ ಸಲಹೆ ನೀಡಿದರು.

        ನಗರದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಬೇಕು. ನಗರದಲ್ಲಿ ಸ್ವಚ್ಛತೆಯಿದ್ದರೆ ಸಾರ್ವಜನಿಕರ ಆರೋಗ್ಯ ಕಾಪಾಡಿದಂತೆ ಆಗುವುದು. ಈ ದಿಶೆಯಲ್ಲಿ ಮಾಂಸದ ಮಾರುಕಟ್ಟೆಯಲ್ಲಿ ಕತ್ತರಿಸಿದ ಮಾಂಸವನ್ನು ನೇತು ಹಾಕದಂತೆ ತಡೆಯಬೇಕು .ತ್ಯಾಜ್ಯವನ್ನು ನದಿಗೆ ಎಸೆಯಬಾರದು. ಇವನ್ನೆಲ್ಲ ಸರಿಪಡಿಸುವಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link