ಶಿರಾ
ಶಿರಾ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೂ ಸೇರಿದಂತೆ ತಾಲ್ಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಪರದಾಡುವಂತಾಗಿದೆ ಎಂದು ಇಲ್ಲಿನ ತಾಲ್ಲೂಕು ಪಂಚಾಯ್ತಿ ಸದಸ್ಯರು ವೈದ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದ ಪ್ರಸಂಗ ನಡೆಯಿತು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೈಗೊಳ್ಳಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಭೆಯ ಆರಂಭದಲ್ಲಿಯೇ ತಾಲ್ಲೂಕು ವೈದ್ಯಾಧಿಕಾರಿಗಳ ಮೇಲೆ ಸದಸ್ಯರೆಲ್ಲರೂ ಅರಿಹಾಯ್ದರು.
ಶಿರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರ ಜೀವದೊಂದಿಗೆ ಕೆಲ ವೈದ್ಯರು ಚೆಲ್ಲಾಟ ಆಡುತ್ತಾರೆ. ಜುಲೈ 18 ರಂದು ನಡೆದ ಘಟನೆಯೊಂದರಿಂದ ಇಲ್ಲಿನ ಕೆಲ ವೈದ್ಯರ ನಿರ್ಲಕ್ಷ್ಯ ನಮ್ಮ ಮನ ನೋಯಿಸಿದೆ. ಅಂದು ರೈತನೊಬ್ಬ ವಿಷ ಸೇವಿಸಿ ಆಸ್ಪತ್ರೆಗೆ ಬಂದಿದ್ದಾಗ ಇಲ್ಲಿನ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆಯನ್ನೂ ಮಾಡದೆ ಜಿಲ್ಲಾಸ್ಪತ್ರೆಗೆ ಸಾಗಿ ಹಾಕಿದಾಗ ಆತ ಮದ್ಯ ದಾರಿಯಲ್ಲಿಯೇ ಮೃತಪಟ್ಟಿದ್ದನು. ಕನಿಷ್ಠ ಪ್ರಥಮ ಚಿಕಿತ್ಸೆಯನ್ನೂ ಮಾಡಲಾಗದ ಇಲ್ಲಿನ ವೈದ್ಯರ ಬಗ್ಗೆ ಯಾರೂ ಕೇಳುವವರೇ ಇಲ್ಲದಂತಾಗಿದೆ ಎಂದು ಸದಸ್ಯ ಮಂಜುನಾಥ್ ತೀವ್ರವಾಗಿ ವೈದ್ಯರ ವಿರುದ್ಧ ಆರೋಪಿಸಿದರು.
ಮಂಜುನಾಥ್ ಅವರ ಆರೋಪಕ್ಕೆ ಸದಸ್ಯರಾದ ಮಲ್ಲಾನಾಯ್ಕ ಕೂಡಾ ಸಾಥ್ ನೀಡಿ, ನಗರದ ಆಸ್ಪತ್ರೆಯಲ್ಲಿ ಮೂಳೆ ವೈದ್ಯರಿಲ್ಲದೆ ಜನ ಪರದಾಡುತ್ತಾರೆ. ಇಂತಹ ದೊಡ್ಡ ಆಸ್ಪತ್ರೆಯಿಂದ ಏನು ಪ್ರಯೋಜನ ಎಂದು ರೋಗಿಗಳು ಶಪಿಸುವಂತಾಗಿದೆ ಎಂದು ಮಲ್ಲಾನಾಯ್ಕ ದೂರಿದಾಗ ಡಾ.ಆಫ್ಜಲ್ ಮಾತನಾಡಿ ಹಾಲಿ ಒಬ್ಬ ಮೂಳೆ ಚಿಕಿತ್ಸಾ ವೈದ್ಯರಿದ್ದು ಇನ್ನೂ ಒಂದು ಹುದ್ದೆ ಖಾಲಿ ಇದೆ. ಸದರಿ ಜಾಗವನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರನ್ನು ಚಿಕಿತ್ಸೆ ಮಾಡಿಸಲು ಬಂದರೆ 50 ರೂ.ಗಳ ಹಣ ಸಂದಾಯ ಮಾಡಿಸಿಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಅನ್ನುವ ಸರ್ಕಾರದ ಮಾತೇ ಇಲ್ಲಿ ಸುಳ್ಳಾದಂತೆ ಕಾಣುತ್ತಿದೆ. ಗರ್ಭಿಣಿ ಮಹಿಳೆಯರಿಂದಲೂ ಹಣ ವಸೂಲು ಮಾಡುವುದೇಕೆ ಎಂದು ಕಳ್ಳಂಬೆಳ್ಳ ತಾ.ಪಂ. ಸದಸ್ಯರೊಬ್ಬರು ಪ್ರಶಿಸಿದಾಗ ತಾ. ವೈದ್ಯಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ.ನಾ.ಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದು ಈ ಇಬ್ಬರು ವೈದ್ಯರು ಕೂಡ ಸಂಜೆ 4 ಗಂಟೆಯಾದೊಡನೆ ಮನೆ ಸೇರಿಕೊಳ್ಳುತ್ತಾರೆ. ರಾತ್ರಿ ವೇಳೆ ಬರುವ ರೋಗಿಗಳ ಚಿಕಿತ್ಸೆಗೆ ನರ್ಸ್ ಬಿಟ್ಟರೆ ಯಾವ ವೈದ್ಯರೂ ಇರುವುದಿಲ್ಲ ಎಂದು ಸದಸ್ಯ ಶ್ರೀನಿವಾಸ್ ಆರೋಪಗಳ ಸುರಿಮಳೆಗರೆದಾಗ ರಾತ್ರಿ ವೇಳೆ ಒಬ್ಬ ವೈದ್ಯರು ಆಸ್ಪತ್ರೆಯಲ್ಲಿ ತಂಗಲೇಬೇಕೆಂದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ವೈದ್ಯಾಧಿಕಾರಿ ಭರವಸೆ ನೀಡಿದರು.
ತಾಲ್ಲೂಕಿನಲ್ಲಿರುವ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಖಾಲಿ ಹೊಡೆಯುತ್ತಿದ್ದು, ಅದೇ ಗ್ರಾಮದಲ್ಲಿನ ಖಾಸಗಿ ಕ್ಲಿನಿಕ್ಗಳಲ್ಲಿ ರೋಗಿಗಳು ಚಿಕಿತ್ಸೆಗಾಗಿ ತುಂಬಿಕೊಂಡಿರುತ್ತಾರೆ. ಅಂದರೆ ಸರ್ಕಾರಿ ವೈದ್ಯರ ಚಿಕಿತ್ಸಾ ಕ್ರಮಗಳ ವೈಫಲ್ಯವೋ ಅಥವ ಔಷಧಿಗಳ ಕೊರತೆಯೋ ಮೊದಲು ಈ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಅನೇಕ ಸದಸ್ಯರು ಆಸ್ಪತ್ರೆಗಳ ಅವ್ಯವಸ್ಥೆಯ ವಿರುದ್ಧ ಅರಿಹಾಯ್ದರು.
ಬುಕ್ಕಾಪಟ್ಟಣ ಹೋಬಳಿಯ ಹೋಬಳಿಹಳ್ಳಿ ಅನ್ನುವ ಗ್ರಾಮದಲ್ಲಿನ ಶಾಲಾ ಕಟ್ಟಡ ಕುಸಿದು ಬೀಳುವಂತಿದ್ದು, ಮಕ್ಕಳು ಮರದಡಿಯಲ್ಲಿ ಪಾಠ ಕೇಳುವಂತಾಗಿದೆ. ಮಳೆ ಬಂದರೆ ಕಟ್ಟಡ ಸೋರುತ್ತಿದ್ದು ಶಾಲಾ ದಾಖಲಾತಿಗಳು ಕೂಡ ನೆನೆಯುತ್ತಿವೆ ಎಂದು ಸದಸ್ಯ ಪುಟ್ಟರಾಜು ದೂರಿದರು. ಸದರಿ ಕಟ್ಟಡವನ್ನು ದುರಸ್ಥಿಗೊಳಿಸುವುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿ ಭರವಸೆ ನೀಡಿದರು.
ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ತಾ.ಪಂ. ಇ.ಓ. ಮೋಹನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
