ಬೆಂಗಳೂರು
ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಮುಂದಾಗಿದ್ದು, ಇದರ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದೇ ಹಲವು ಶಿಕ್ಷಕರು ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಕಡ್ಡಾಯ ವರ್ಗಾವಣೆಗೆ ರೂಪಿಸಿರುವ ನಿಯಮಗಳ ವ್ಯಾಪ್ತಿಗೆ ಬರದಿದ್ದರೂ ಕೆಲವು ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಪಟ್ಟಿಗೆ ಸೇರಿಸುವ ಮೂಲಕ ಶಿಕ್ಷಕರಿಗೆ ಶಿಕ್ಷೆ ನೀಡಲು ಮುಂದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಸರ್ಕಾರದ ನಿಯಮದಂತೆ ಸಾರ್ವಜನಿಕ ವಲಯ (ಪಿ.ಎಸ್.ಯು) ದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಪತಿ-ಪತ್ನಿ ಉದ್ಯೋಗದಲ್ಲಿದ್ದರೆ ಅಂತಹ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆಗೆ ಪರಿಗಣಿಸಬಾರದು ಎಂದು ಕಡ್ಡಾಯ ವರ್ಗಾವಣೆಗೆ ಕುರಿತು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಿದೆ.
ರಾಜ್ಯ ಸರ್ಕಾರ ಸಾರ್ವಜನಿಕ ವಲಯಗಳು ಯಾವುವು ಎಂದು ಗುರುತಿಸುವಲ್ಲಿ ಎಡವಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವ ವಿಮಾ ನಿಗಮ (ಎಲ್.ಐ.ಸಿ) ವನ್ನು ರಾಜ್ಯ ಸರ್ಕಾರ ಸಾರ್ವಜನಿಕ ವಲಯ ಎಂದು ಪರಿಗಣಿಸದೆ ಎಡವಟ್ಟು ಮಾಡಿದೆ. ವರ್ಗಾವಣೆ ಶಿಕ್ಷೆಯಿಂದ ಕಂಗಲಾದ ಶಿಕ್ಷಕರು ಈ ಸಂಬಂಧ ಕಳೆದ ಆಗಸ್ಟ್ ಮಾಹೆಯಲ್ಲಿ ಪ್ರೌಢ ಶಿಕ್ಷಣ ಇಲಾಖೆಯು ಜೀವ ವಿಮಾ ನಿಗಮಕ್ಕೆ ಸಾರ್ವಜನಿಕ ವಲಯ ಸೇರುವ ಬಗ್ಗೆ ಸ್ಪಷ್ಟನೆ ಕೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜೀವ ವಿಮಾ ನಿಗಮವು 1976 ರ ಕಾಯ್ದೆಯಡಿ ನಮ್ಮ ಸಂಸ್ಥೆಯು ಸಾರ್ವಜನಿಕ ವಲಯಕ್ಕೆ ಸೇರುವುದಾಗಿ ಪ್ರೌಢ ಶಿಕ್ಷಣ ಇಲಾಖೆಗೆ ಸ್ಪಷ್ಟನೆ ನೀಡಿದೆ. ಆದರೂ ಸಹ ತರಾತುರಿಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಸಭೆಯಲ್ಲಿ ಜೀವ ವಿಮಾ ನಿಗಮವನ್ನು ಸಾರ್ವಜನಿಕ ವಲಯಕ್ಕೆ ಸೇರಿಸದೆ ಆದೇಶ ಹೊರಡಿಸಿದೆ.
ಈ ಕೂಡಲೇ ಮಾನ್ಯ ಶಿಕ್ಷಣ ಸಚಿವರು ಜೀವ ವಿಮಾ ನಿಗಮವನ್ನು ಸಾರ್ವಜನಿಕ ವಲಯಕ್ಕೆ ಸೇರಿಸಬೇಕೆಂದು ಮನವಿ ಶಿಕ್ಷಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








