ಚಿತ್ರದುರ್ಗ:
ಶಿಕ್ಷಕರು ಸ್ಫೂರ್ತಿಯ ಮೂರ್ತಿಗಳಾಗಿ ಜ್ಞಾನದರ್ಶನ ಮಾಡಿಸಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಡಿ.ಎಸ್.ಇ.ಆರ್.ಟಿ. ಮತ್ತು ಡಯಟ್ ವತಿಯಿಂದ ಚಿತ್ರದುರ್ಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುರುಘಾ ಮಠದಲ್ಲಿ ಆಯೋಜಿಸಿದ್ದ ಇಂಡಕ್ಷನ್( ಬುನಾದಿ) ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು
ಬೋಧನೆ ಪೂಜೆಗೆ ಸಮಾನವಾದುದು, ಶಿಕ್ಷಕ ಒಬ್ಬ ಶಿಲ್ಪಿಯಾಗಬೇಕು ತರಗತಿಯಲ್ಲಿ ಮಕ್ಕಳು ಎಂಬ ಶಿಲೆಗಳಿರುತ್ತವೆ. ಬೋಧನೆ ಸಂದರ್ಭದಲ್ಲಿ ಯಾವ ವಿದ್ಯಾರ್ಥಿಗಳು ನಿದ್ದೆಗೆ ಸರಿಯದಂತೆ ಅವರಲ್ಲಿ ಕುತೂಹಲ ಉಂಟು ಮಾಡಬೇಕು. ವಿದ್ಯೆ, ವಿನಯ,ಸಮರ್ಪಣಾ ಭಾವದಿಂದ ವಿದ್ಯಾರ್ಥಿಯನ್ನು ಸುಂದರ ಮೂರ್ತಿಯಾಗಿ ಮಾಡಬೇಕು ಎಂದು ತಿಳಿಸಿದರು. ಉತ್ತಮ ಶಿಕ್ಷಕನಾಗಲು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಬೇಕು. ಮನಸಿನಲ್ಲಿ ಹೊಸ ವಿಚಾರಗಳು ಆಲೋಚನೆಗಳಲ್ಲಿ ಹೊಸತನ ಬೆಳೆಸಿಕೊಂಡು ನಿರಂತರ ಪ್ರಯತ್ನದಿಂದ ಜಾಗೃತಿ ಮೂಡಿಸಿ ಎಂದು ಶಿಕ್ಷಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ. ಕೋದಂಡರಾಮ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಎನ್.ಎಮ್. ರಮೇಶ್ ಸ್ವಾಗತಿಸಿದರು. ಉಪನ್ಯಾಸಕರಾದ ಎಸ್. ಬಸವರಾಜು ನಿರೂಪಿಸಿ ಕೆ.ಎಮ್ ನಾಗರಾಜು ವಂದಿಸಿದರು.