ಗ್ರಾಮೀಣ ಭಾಗದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯ ಪುಣ್ಯ ಕಾರ್ಯ

ಚಳ್ಳಕೆರೆ

        ಗ್ರಾಮಾಂತರ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ, ಶಾಂತಿ ನೆಮ್ಮದಿಯನ್ನು ನೀಡಿದ ಗ್ರಾಮ ದೇವತೆಗಳನ್ನು ಸದಾ ಪೂಜ್ಯಭಾವನೆಯಿಂದ ನಾವು ಕಾಣಬೇಕಿದೆ. ಕಾಲ ಯಾವ ರೀತಿಯೇ ಬದಲಾದರೂ ನಾವು ನಡೆಸುವ ಪೂಜಾ ಕಾರ್ಯಕ್ರಮಗಳು ಮಾತ್ರ ನಿರಂತರವಾಗಿ ಮುಂದುವರೆಯುತ್ತವೆ. ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯ ಪುಣ್ಯ ಕಾರ್ಯವೆಂದು ಡಾ.ಸೂರ್ಯನಾರಾಯಣಶೆಟ್ಟಿ ತಿಳಿಸಿದರು.

         ಅವರು, ಭಾನುವಾರ ತಾಲ್ಲೂಕಿನ ಕ್ಯಾತಗೊಂಡನಹಳ್ಳಿ ಗ್ರಾಮದ ಗ್ರಾಮ ದೇವತೆಯಾದ ಕರಿಯಮ್ಮ ದೇವಸ್ಥಾನ ನಿರ್ಮಾಣಕ್ಕೆ ಆದಿಲಕ್ಷ್ಮಿ ರಾಜ ಸೀತಾರಾಮಯ್ಯಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 15 ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಲಿದ್ದು, ಈ ಹಣವನ್ನು ಗ್ರಾಮದ ಎಲ್ಲಾ ಹಿರಿಯರು ಸೇರಿ ದೇವಸ್ಥಾನ ನಿರ್ಮಾಣಕ್ಕೆ ಸದ್ವಿನಿಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಈಗಾಗಲೇ ದೇವಸ್ಥಾನ ನಿರ್ಮಾಣಕ್ಕೆ 7 ಲಕ್ಷ ನೀಡಿದ್ದು, ಗೋಪುರ ನಿರ್ಮಾಣಕ್ಕೆ 8 ಲಕ್ಷ ಹಣ ನೀಡಲಿದ್ದು, ಒಟ್ಟು 15 ಲಕ್ಷ ರೂಗಳನ್ನು ದೇವಸ್ಥಾನ ಜೀರ್ಣೋದ್ದಾರಕ್ಕಾಗಿ ನೀಡುವುದಾಗಿ ತಿಳಿಸಿದರು. ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಮುಂತಾದ ವಸ್ತುಗಳನ್ನು ಶನಿವಾರವೇ ಶಾಲೆಯಲ್ಲಿ ವಿತರಣೆ ಮಾಡಿದರು.

       ಟ್ರಸ್ಟ್‍ನ ನಿರ್ದೇಶಕ ಇಂಜಿನಿಯರ್ ಆರ್.ಭದ್ರಿನಾಥ ಮಾತನಾಡಿ, ದೇವರು ಮಾತ್ರ ನಮ್ಮೆಲ್ಲರಿಗೂ ನೆಮ್ಮದಿಯ ಬದುಕನ್ನು ನೀಡಲು ಸಾಧ್ಯ. ನಮ್ಮ ಹಿರಿಯರು ರೂಪಿಸಿರುವ ಉತ್ತಮ ಮಾರ್ಗಗಳೇ ನಮಗೆ ಆದರ್ಶ. ಗ್ರಾಮೀಣ ಭಾಗಗಳಲ್ಲೂ ಸಹ ಅನೇಕ ರೀತಿಯ ತೊಂದರೆಯನ್ನು ಜನರು ಎದುರಿಸುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ಮತ್ತು ಬಾಲಾಜಿ ಯೋಗ ಕೇಂದ್ರದಲ್ಲಿ ಕೈ ಕಳೆದುಕೊಂಡಿರುವ ಅಂಗವಿಕಲರಿಗೆ ಉಚಿತವಾಗಿ ಕೃತಕ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಾಗುವುದು ಎಂದರು.

       ತಾಲ್ಲೂಕು ಪಂಚಾಯಿತಿ ಸದಸ್ಯ ಕಾಲುವೇಹಳ್ಳಿ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನಿಸಿ ನಗರ ಪ್ರದೇಶದಲ್ಲಿದ್ದರೂ ಸಹ ಗ್ರಾಮ ದೇವತೆ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಆರ್ಥಿಕ ನೆರವು ನೀಡುತ್ತಿರುವುದು ಸಂತಸ ವಿಷಯ. ಗ್ರಾಮೀಣ ಜನರ ಮೇಲೆ ಅವರು ಇಟ್ಟಿರುವ ವಿಶ್ವಾಸ ಪ್ರಶಂಸನೀಯವೆಂದರು. ಈ ಸಂದರ್ಭದಲ್ಲಿ ಶಾನ್‍ಬೋಗ್ ಕೆ.ಸುಬ್ಬಣ್ಣ, ಕೆ.ಶ್ರೀನಿವಾಸ್‍ಶ್ರೇಷ್ಠಿ, ಆರ್.ಜಿ.ರಮೇಶ್‍ಬಾಬು, ಜಿ.ಟಿ.ಕೃಷ್ಣಮೂರ್ತಿ, ರಂಗಸ್ವಾಮಿ, ರಾಮಣ್ಣ, ಜಂಪಣ್ಣ, ರಮೇಶ್, ಯಾದಗಲಗಟ್ಟೆ ಜಗನ್ನಾಥ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link