ದಾವಣಗೆರೆ

ವಿದ್ಯಾರ್ಥಿಗಳು ತಂದೆ-ತಾಯಂದಿರ ಭರವಸೆಯನ್ನು ಹುಸಿಗೊಳಿಸಬಾರದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಬಣಕಾರ್ ಕರೆ ನೀಡಿದರು.ನಗರದ ಕುಂದುವಾಡ ರಸ್ತೆಯಲ್ಲಿರುವ ಬಂಟರ ಭವನದಲ್ಲಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿ ಪಡೆದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ತಂದೆ-ತಾಯಂದಿರು ಸಂಪೂರ್ಣ ಭರವಸೆ ಇಟ್ಟಿರುತ್ತಾರೆ. ನಿಮ್ಮ ಜೀವನದ ಮೇಲೆ ಅವರ ಜೀವನವೂ ಅವಲಂಬಿಸಿರುತ್ತದೆ. ಆದ್ದರಿಂದ ಅವರ ಭರವಸೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಕಿವಿಮಾತು ಹೇಳಿದರು.
ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಎಂಬ ಮನೋಭಾವನೆಯನ್ನು ಯಾರೂ ಸಹ ಹೊಂದಿರಬಾರದು. ಬದಲಾಗಿ ಜ್ಞಾನಕ್ಕಾಗಿ ಶಿಕ್ಷಣ ಪಡೆಯಬೇಕು. ಉನ್ನತಮಟ್ಟಕ್ಕೆ ಏರುವ ಮೂಲಕ ಇಂದು ಪಡೆದ ಪದವಿಯನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ ಅವರು, ಅವಕಾಶಗಳು ನಮ್ಮ ಸುತ್ತಮುತ್ತಲೇ ಇರುತ್ತವೆ. ಅವುಗಳನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಹೋಗುವ ಮೂಲಕ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಬೇಕೆಂದು ಹೇಳಿದರು.
ಬಹುತೇಕ ವಿದ್ಯಾರ್ಥಿಗಳು ಪದವಿ ಮುಗಿದ ನಂತರದಲ್ಲಿ ವಿಶ್ರಮಿಸುತ್ತಾರೆ. ಆದರೆ, ಪದವಿ ಮುಗಿದ ನಂತರವೇ ನಿಜವಾದ ಜೀವನ ಆರಂಭವಾಗಲಿದೆ. ನಿಮ್ಮ ಜೀವನದ ಗುರಿ ಹಾಗೂ ದಾರಿಯ ಆಯ್ಕೆ ನಿಮ್ಮ ಕೈಯಲ್ಲಿದೆ. ಸ್ನಾತಕೋತ್ತರ ಪದವಿ ಇಲ್ಲವೇ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಪದವಿ ಕಲಿಯುವಾಗ ಪ್ರತಿ ದಿವಸದ ಚಟುವಟಿಕೆಯನ್ನು ಡೈರಿಯಲ್ಲಿ ಬರೆದುಕೊಳ್ಳಬೇಕು. ಅಂದಿನ ಕೆಲಸವನ್ನು ಅಂದೇ ಸಂಪೂರ್ಣಗೊಳಿಸಬೇಕು. ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ನಿರ್ದಿಷ್ಟವಾದ ವೇಳಾಪಟ್ಟಿಯನ್ನು ಹಾಕಿಕೊಂಡು ಓದು ಮುಂದುವರೆಸಬೇಕೆಂದು ಸಲಹೆ ನೀಡಿದರು.
ದಾವಣಗೆರೆ ವಿವಿಯ ಸಿಂಡಿಕೇಟ್ ಮಾಜಿ ಸದಸ್ಯ ಸಿ.ಎಚ್. ಮುರುಗೇಂದ್ರಪ್ಪ ಮಾತನಾಡಿ, ಹಿಂದೆ ಇಂಜಿನಿಯರ್ ಕೋರ್ಸ್ಗೆ ಸೇರುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಕೋರ್ಸ್ಗೆ ಹೆಚ್ಚಿನ ಬೇಡಿಕೆ ಬಂದಿದೆ. ದಾವಣಗೆರೆಯಲ್ಲಿ ಪ್ರತಿ ವರ್ಷ 3500 ವಿದ್ಯಾರ್ಥಿಗಳು ಎಂಜಿನಿಯರ್ ಪದವಿ ಮುಗಿಸಿ ಬರುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ನಿರ್ಮಾಣದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾಗಿದೆ ಎಂದರು.
ಜೈನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಅಚಲ್ಚಂದ್ ಮಾತನಾಡಿ, ಇಂದು ಪದವಿ ಪಡೆದ ಪದವೀಧರರು ನಾಡಿನ ಭವಿಷ್ಯಕ್ಕಾಗಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ಕೆ.ಜಿ. ತನು, ಎಂ.ಕೆ. ದರ್ಶನ್, ಎಚ್.ಟಿ. ಸತೀಶ್, ರಕ್ಷಿತಾ ಹರ್ವೇಕರ್, ಟಿ.ವಿ.ಯಶಸ್ವಿನಿ, ಎನ್. ಮೇಘರಾಜ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿಖಿತಾ, ಪ್ರಾಂಶುಪಾಲ ಡಾ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
