ಬೆಂಗಳೂರಿಗೆ ತುಂಗಭದ್ರೆ ನೀರು : ನಾಳೆ ತರಳಬಾಳು ನ್ಯಾಯಪೀಠದಲ್ಲಿ ದೂರು

ದಾವಣಗೆರೆ:

    ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ಒಯ್ಯಲು ಯೋಜನೆ ರೂಪಿಸಲು ಮುಂದಾಗಿರುವುದರ ವಿರುದ್ಧ ನಾಳೆ (ಜೂ.17ರಂದು) ಬೆಳಗ್ಗೆ 11 ಗಂಟೆಗೆ ಸಿರಿಗೆರೆ ತರಳಬಾಳು ಮಠದ ನ್ಯಾಯಪೀಠಕ್ಕೆ ದೂರು ನೀಡಲು ಖಡ್ಗ ಸ್ವಯಂಸೇವಕರ ಸಂಘ ತೀರ್ಮಾನಿಸಿದೆ.

     ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಆರ್.ರಘು, ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ತುಂಗಭದ್ರಾ ನದಿಯಿಂದ 18ರಿಂದ 30 ಟಿಎಂಸಿ ನೀರನ್ನು ತೆಗೆದುಕೊಂಡು ಹೋಗಲು ರೂಪುರೇಷೆ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದರ ವಿರುದ್ಧ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ನ್ಯಾಯಪೀಠಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

     ಪ್ರಸ್ತುತ ಉತ್ತಮ ಮಳೆಯಾಗದೆ ತುಂಗಭದ್ರಾ ನದಿಯನ್ನು ಅವಲಂಬಿಸಿಕೊಂಡಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಸರ್ಕಾರದ ಯತ್ನ ನಿಜಕ್ಕೂ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಈ ಯೋಜನೆ ಅನುಷ್ಠಾನಗೊಂಡಲ್ಲಿ ಈ ಭಾಗದ ಜನರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸ್ಥಳೀಯ ಸಂಸದರು, ಶಾಸಕರು ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಧ್ವನಿ ಎತ್ತಬೇಕೆಂದು ಅವರು ಮನವಿ ಮಾಡಿದರು.

       ಸಂಘದ ನಿರ್ದೇಶಕ ಚಂದ್ರಹಾಸ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನ ಜಲ ಮೂಲಗಳನ್ನು ಸರ್ವನಾಶ ಮಾಡಿ, ಈಗ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎನ್ನುವುದು ನ್ಯಾಯಸಮ್ಮತವಲ್ಲ. ಬೆಂಗಳೂರಿನಲ್ಲಿ ಚೆನ್ನಾಗಿ ಮಳೆಯಾಗುತ್ತಿದ್ದು, ಅಂತಹ ಮಳೆ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸದೆ ಬೇರೆ ಕಡೆಯಿಂದ ನೀರು ತರುವುದು ಮೂರ್ಖತನದ ಪರಮಾವದಿ ಯಾಗಿದೆ . ಮೊದಲು ಜಿಲ್ಲೆಯ ಶಾಂತಿಸಾಗರ ಸೇರಿದಂತೆ ಪಕ್ಕದ ಜಗಳೂರು ತಾಲೂಕಿನ ಕೆರೆಗಳಿಗೇ ತುಂಗಭದ್ರಾ ನೀರನ್ನು ಹರಿಸಲಿ ಎಂದು ಆಗ್ರಹಿಸಿದರು.

      ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಷಣ್ಮುಖಸ್ವಾಮಿ, ಅಹ್ಮದ್ ಶಬ್ಬೀರ್, ಮನೋಜ್, ಕೆ.ಆರ್.ರಂಗಪ್ಪ, ಟಿ.ಕುಬೇಂದ್ರಸ್ವಾಮಿ ,ಎನ್.ವಿ.ರುದ್ರೇಶ, ವೀರಭದ್ರಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link