ಬೆಂಗಳೂರು
ಕಾಂಗ್ರೆಸ್ಗೊಂದು ಕಾನೂನು, ಬೇರೆಯವರಿಗೊಂದು ಕಾನೂನಿಲ್ಲ. ಡಿ.ಕೆ.ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿಯನ್ನು ವಿರೋಧಿಸಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರ ವರ್ತನೆ ಖಂಡನೀಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕುಮಾರಕೃಪಾದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಲಾ ಪ್ರಕರಣಗಳು ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಖಲಾಗಿವೆ. ಇಂತಹ ಸಂದರ್ಭದಲ್ಲೂ ಸಿಬಿಐನವರು ದಾಳಿ ಮಾಡಬಾರದು, ತಪ್ಪಿತಸ್ಥರು ಎನ್ನುವುದನ್ನು ಗಮನಿಸಿ ಅವರ ಬಗ್ಗೆ ಕ್ರಮ ಕೈಗೊಳ್ಳಬಾರದು ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ನೋಡಿ ತುಂಬಾ ಆಶ್ಚರ್ಯವಾಗುತ್ತಿದೆ ಎಂದು ಟೀಕಿಸಿದರು.
ಈ ಹಿಂದೆ ಯಡಿಯೂರಪ್ಪನವರ ಮನೆ ಮೇಲೆ ಇದೇ ರೀತಿ ಸಿಬಿಐ ದಾಳಿ ನಡೆದಾಗ ಇವರೆಲ್ಲರ ಹೇಳಿಕೆ ಏನಿತ್ತು ಎಂಬುದನ್ನು ನೆನಪಿಸಿಕೊಳ್ಳಲಿ. ಉಪ್ಪು ತಿಂದವರು ನೀರು ಕುಡಿಯುತ್ತಿದ್ದಾರೆ. ಅನುಭವಿಸಲಿ ಎನ್ನುವ ಮಾತುಗಳನ್ನೆಲ್ಲ ಹೇಳಿದ್ದರು. ಈಗ ಡಿ.ಕೆ.ಶಿವಕುಮಾರ್ ಬೇರೆ ಕಾನೂನು ಇದೆಯೇ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಹೇಗೆ ತಪ್ಪಿತಸ್ಥ ಅಲ್ಲ ಎಂದು ಹೊರ ಬಂದರೋ ಹಾಗೆಯೇ ಡಿ.ಕೆ.ಶಿವಕುಮಾರ್ ಕೂಡ ಹೊರ ಬರಲಿ. ಅಲ್ಲಿಯವರೆಗೂ ಸಿಬಿಐ ತನಿಖೆಗೆ ಸಹಕಾರ ಕೊಡಬೇಕು. ಅವರಿಗೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/2af6761faf4eb6214216d8d78a38c3a1aa3af84c0a3369ef9f7044d9d0108229.gif)