ತಿಪಟೂರು 

ವಿಶ್ವದಾದ್ಯಂತ ಮಹಾಮಾರಿಯಂತೆ ಬಂದೆರಗಿರುವ ಕೊರೋನಾ ರಾಜ್ಯದ ಅನೇಕರ ಹೊಟ್ಟೆಯ ಮೇಲೆ ಹೊಡೆದು ತಣ್ಣೀರು ಬಟ್ಟೆ ಹಾಕಿರುವುದಲ್ಲದೆ, ಯಾವುದೆ ಮದುವೆ ಮುಂತಾದ ಶುಭಸಮಾರಂಭಗಳಿಗೆ ಗುತ್ತಿಗೆ ಕೊಟ್ಟ ಹಣವನ್ನು ಹಿಂಪಡೆಯಲೂ ಆಗದೆ, ಮದುವೆಯನ್ನೂ ಮಾಡಲಾಗದೆ ಡೋಲಾಯಮಾನ ಪರಿಸ್ಥಿತಿಗೆ ಸಾರ್ವಜನಿಕರು ಬಂದು ತಲುಪಿದ್ದಾರೆ.
ಕೊರೋನ ಮಹಾಮಾರಿಯ ಸೋಂಕನ್ನು ತಡೆಯಲು ಸಾರ್ವಜನಿಕ ಜಾತ್ರೆ, ಸಂತೆ, ರಸ್ತೆ ಬದಿ ತಿಂಡಿ ವ್ಯಾಪಾರ, ಮಾಂಸದಂಗಡಿ ವ್ಯಾಪಾರ, ಸಭೆ, ಸಮಾರಂಭ ನಿಷೇಧಿಸುವ ಸರ್ಕಾರದ ದಿಢೀರ್ ನಿರ್ಧಾರ ಜನರ ಪಾಲಿಗೆ ಬಿಸಿ ತುಪ್ಪವಾಗಿದ್ದು, ಉಗುಳಲೂ ಆಗದೆ, ನುಂಗಲೂ ಆಗದೆ ಬಿಸಿ ತುಪ್ಪವನ್ನು ಬಾಯಿಗೆ ಹಾಕಿಕೊಂಡ ಪರಿಸ್ಥಿತಿಗೆ ಬಂದಿದ್ದಾರೆ.
ವಾರಾಂತ್ಯವಾದ ಶನಿವಾರ ಹಾಗೂ ಭಾನುವಾರ ತಾಲ್ಲೂಕಿನಾದ್ಯಂತ ಸಾಕಷ್ಟು ಕಡೆ ಶುಭ ಸಮಾರಂಭ ನಿಗದಿಯಾಗಿದ್ದವು. ಕೆಲವು ಕಡೆ ಅದ್ದೂರಿ ಮದುವೆಗಳಿಗೆ ಸಿದ್ಧತೆ ನಡೆದಿತ್ತು. ಆದರೆ, ಸರ್ಕಾರದ ಹೊಸ ಆದೇಶದಿಂದ ಏನಾಗುವುದೊ ಎಂಬ ಆತಂಕದಲ್ಲಿ ಕಾರ್ಯಕ್ರಮದ ಆಯೋಜಕರು ಅಧಿಕಾರಿಗಳಿಗೆ, ಪರಿಚಯ ಇರುವವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಜನರು ಅಕ್ಕಿಯ ಮೇಲಾಸೆ, ನೆಂಟರೂ ಬರಬೇಕೆಂಬಂತೆ ಸಮಾರಂಭಗಳಿಗೆ ಹೋಗಲಾಗದೆ ಮನೆಯಲ್ಲಿ ಕುಳಿತುಕೊಂಡಿದ್ದರು.
ಇನ್ನೂ ಮದುವೆಗಳಿಗೆ ಆರು ತಿಂಗಳು ಇರುವಾಗಲೆ ಸಾಲಸೋಲ ಮಾಡಿ ಅನೇಕ ಸಾಮಗ್ರಿಗಳನ್ನು ಹೊಂದಿಸುವುದು, ಒಡವೆ-ವಸ್ತ್ರ ಖರೀದಿಯೂ ಆಗಿರುತ್ತದೆ. ಜತೆಗೆ ಕಲ್ಯಾಣ ಮಂಟಪ, ಅಡುಗೆಯವರು, ಶಾಮಿಯಾನ, ಅಲಂಕಾರ, ಫೆÇೀಟೊ-ವೀಡಿಯೊ ಕವರೇಜ್ ಮೊದಲಾದವುಗಳಿಗೂ ಮುಂಗಡ ಹಣ ನೀಡಲಾಗಿರುತ್ತದೆ. ಮದುವೆಗಳಿಗೆ ಬಂಡವಾಳ ಹಾಕಿರುತ್ತಾರೆ. ಈಗ ಮದುವೆಗಳಿಗೆ ಜನ ಕಡಿಮೆ ಬರುತ್ತಾರೆ, ಊಟಕ್ಕೆ ಅಷ್ಟು ಜನ ಬರುವದಿಲ್ಲ ಎಂದು ಹೇಳಿ ಸ್ಟುಡಿಯೋ ಮತ್ತು ಅಡುಗೆಯವರನ್ನು ಕೇಳಿದರೆ ಸ್ವಾಮಿ ಇದು ನಮಗೂ ತೊಂದರೆ ನಮಗೂ ವ್ಯಾಪಾರವಿಲ್ಲ. ಆರ್ಡ್ರನ್ನು ಕಡಿಮೆಗೆ ನಿಮಗೆ ಮಾಡಿಕೊಟ್ಟಿರುವುದು. ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಕೇಳಿದಾಗ ಹಣ ಕೊಡುವುದೊ ಇಲ್ಲ ಬಿಡುವುದೋ ಎಂಬ ಗೊಂದಲಕ್ಕೆ ಸಾರ್ವಜನಿಕರು ಬೀಳುತ್ತಿದ್ದಾರೆ.
ಬಡವರ ಹೊಟ್ಟೆಯ ಮೇಲೆ ಹೊಡೆದ ಕರೋನ :
ಆಡಂಬರದಿಂದ ಮದುವೆ ಮಾಡುವವರ ಕಥೆ ಒಂದು ಕಡೆಯಾದರೆ ಇನ್ನೊಂದು ಕಡೆ ಬೀದಿ ಬದಿ ವ್ಯಾಪಾರಿಗಳು, ಸಂತೆ, ಜಾತ್ರೆ ಸುತ್ತುವವರ ಪರಿಸ್ಥಿತಿಯಂತು ಹೇಳ ತೀರದಾಗಿದೆ. ಹೊನ್ನವಳ್ಳಿ ಉಡಿಸಲಮ್ಮನ ಜಾತ್ರೆಯಲ್ಲಿ ಭಾನುವಾರದ ಸಿಡಿಕಂಬಕ್ಕೆ ಜನರೆ ಇರಲಿಲ್ಲ.
ಸೋಮವಾರ ನಡೆದ ರಥೋತ್ಸವಕ್ಕೆ ಅತಿ ವಿರಳವಾಗಿ ಜನರು ಬಂದಿದ್ದರು. ಇಲ್ಲಿಗೆ ಪ್ರತಿವರ್ಷ ಬರುವ ಭಕ್ತಾದಿಗಳು ತಮ್ಮ ಮಕ್ಕಳಿಗೆ ಬೇಕಾಗುವ ಆಟದ ಸಾಮಾನುಗಳು, ಹೆಂಗಳೆಯರು ವಿವಿಧ ಶೃಂಗಾರ ಸಾಮಗ್ರಿಗಳು, ಹಿರಿಯರು ಕಡಲೆಪುರಿ, ಬೆಂಡು ಬತ್ತಾಸುಗಳನ್ನು ಕೊಂಡು ಹೋಗುವುದು ಮಾಮೂಲಾಗಿತ್ತು. ಆದರೆ ಈ ಬಾರಿಯ ಜಾತ್ರೆಯಲ್ಲಿ ಯಾವುದೇ ಅಂಗಡಿಗಳಲಿಲ್ಲದೇ ಇರುವುದು ಜಾತ್ರೆಯ ಮೆರುಗನ್ನೆ ಕಳೆದುಕೊಂಡಿದೆಯೆಂದು ಭಕ್ತಾದಿಗಳು ಮಾತನಾಡಿಕೊಳ್ಳುತ್ತಿದ್ದರು.
ಈ ಕೊರೋನ ಕಾಯಿಲೆ ಬಂದು ಜನರು ಹೊರಗೆ ಬರುತ್ತಿಲ್ಲ. ಜೊತೆಗೆ ನಾವು ಜನರಿರುವಲ್ಲಿ ನಮ್ಮ ಅಂಗಡಿಗಳನ್ನು ಹಾಕಿಕೊಂಡು, ಜಾತ್ರೆ, ಊರೂರು ಸುತ್ತುತ್ತಾ ಜೀವನ ಸಾಗಿಸುತ್ತಿದ್ದೇವೆ. ಈ ಕಾಯಿಲೆಯಿಂದ ನಮ್ಮ ತುತ್ತಿನ ಚೀಲಕ್ಕೂ ಹೊಡೆತ ಬಿದ್ದಿದೆ ಎಂದು ಅಂಗಡಿಯನ್ನು ಹಾಕಲಾರದೆ ಪಕ್ಕದಲ್ಲಿ ಕಟ್ಟಿಟ್ಟಿದ್ದ ತಮ್ಮ ಅಂಗಡಿಯನ್ನು ತೋರಿಸುತ್ತಾ ವ್ಯಾಪಾರಿಯು ತನ್ನ ನೋವನ್ನು ತೋಡಿಕೊಂಡನು.
ರಸ್ತೆಗಳಲ್ಲಿ ಜನರೆ ಇಲ್ಲ :
ಇನ್ನು ಜನರು ಬಿಸಿಲಿಗೆ ಹೆದರಿದ್ದಾರೋ ಇಲ್ಲ, ಕರೋನಾಕ್ಕೆ ಹೆದರಿದ್ದಾರೋ ತಿಳಿಯದಾಗಿದ್ದು, ವ್ಯಾಪಾರಸ್ಥರು ತಲೆ ಮೇಲೆ ಕೈ ಇಟ್ಟು ಕುಳಿತುಕೊಂಡಿದ್ದಾರೆ.
ಯುಗಾದಿಗೆ ಹೊಸಬಟ್ಟೆ ತೆಗೆದುಕೊಂಡು ನವ ಸಂವತ್ಸರವನ್ನು ಸ್ವಾಗತಿಸಿ, ಪಂಚಾಂಗ ಓದುವುದು ಸಂಪ್ರದಾಯ. ಆದರೆ ಯುಗಾದಿ ಇನ್ನೇನು ಒಂದು ವಾರವಿದೆ ಎಂದು ನಾವು ಸಾಲ ಸೋಲ ಮಾಡಿ ವ್ಯಾಪಾರಕ್ಕಾಗಿ ಬಟ್ಟೆಗಳ ಮೇಲೆ ಬಂಡವಾಳ ಹಾಕಿಕೊಂಡಿದ್ದೇವೆ. ಈಗಿನ ಪರಿಸ್ಥಿತಿ ಒಂದು ವಾರ ಕಳೆದರೆ ನಾವು ಮಾಡಿದ ಸಾಲದ ಹಣವಿರಲಿ, ಬಾಡಿಗೆ ಕಟ್ಟಲು ಪರದಾಡುವ ಸನ್ನಿವೇಶ ಬರುವುದು ಖಚಿತವೆಂದು ಬಟ್ಟೆ ವ್ಯಾಪಾರಿಗಳು ನುಡಿಯುತ್ತಾರೆ.
ವರ್ಷದ ತೊಡಕು ಇದೆಯೋ? ಇಲ್ಲವೋ ?! :
ಕೊರೋನ ವೈರಾಣು ನಮ್ಮ ಯುಗಾದಿ ಹೊಸವರ್ಷದ ಮೇಲೂ ಕಣ್ಣು ಹಾಕಿದ್ದು, ಸರ್ಕಾರದ ಆದೇಶದಂತೆ ಇನ್ನೊಂದು ವಾರದಲ್ಲಿ ಪರಿಸ್ಥಿತಿ ತಿಳಿಯಾಗದೆ ಇದ್ದರೆ, ಈಗಲೆ ಕೋಳಿ ಮತ್ತು ಮಾಂಸವನ್ನು ತಿನ್ನುವುದನ್ನು ಬಿಟ್ಟಿರುವ ಮಾಂಸಾಹಾರಿಗಳು ಮತ್ತೆ ತಿನ್ನುವುದೇ ಇಲ್ಲ. ಇನ್ನು ತಿನ್ನಲೆ ಬೇಕೆನ್ನುವವರು ಹೊರಗಡೆ ತಿನ್ನೊಣವೆಂದರೆ ಕಾಯಿಲೆಯ ಭಯದಿಂದ ಕೆಲವರು ಯುಗಾದಿಯ ಹೊತ್ತಿಗಾದರು ಕೊರೋನ ಶಾಂತವಾಗಲಿ ಎಂದು ದೇವರಿಗೆ ಮಾಂಸದ ವ್ಯಾಪಾರಿಗಳು ಮತ್ತು ಮಾಂಸಖಾದ್ಯ ಪ್ರಿಯರು ಹರಕೆ ಹೊತ್ತುಕೊಂಡರೂ ಆಶ್ಚರ್ಯವಿಲ್ಲ.ಈಗಾಗಲೆ ಕೊರೋನಾದ ರೋದ
ನೆ ರಸ್ತೆ ಬದಿ ಮತ್ತು ಚಿಕ್ಕಪುಟ್ಟ ವ್ಯಾಪಾರಿಗಳಿಗೆ ತಟ್ಟಿರುವ ಬಿಸಿ, ಇನ್ನು ದೊಡ್ಡ ಮಟ್ಟದ ಉದ್ದಿಮೆಗಳಿಗೂ ತಟ್ಟದಿದ್ದರೆ ಅಷ್ಟೆ ಸಾಕೆನ್ನುವ ಪರಿಸ್ಥಿತಿಗೆ ಕೊರೋನಾ ತಂದು ನಿಲಿಸ್ಲಿದೆ.
ನೆ ರಸ್ತೆ ಬದಿ ಮತ್ತು ಚಿಕ್ಕಪುಟ್ಟ ವ್ಯಾಪಾರಿಗಳಿಗೆ ತಟ್ಟಿರುವ ಬಿಸಿ, ಇನ್ನು ದೊಡ್ಡ ಮಟ್ಟದ ಉದ್ದಿಮೆಗಳಿಗೂ ತಟ್ಟದಿದ್ದರೆ ಅಷ್ಟೆ ಸಾಕೆನ್ನುವ ಪರಿಸ್ಥಿತಿಗೆ ಕೊರೋನಾ ತಂದು ನಿಲಿಸ್ಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
