ದಾವಣಗೆರೆ:

ಇಲ್ಲಿನ ಜಾಲಿ ನಗರದ ನಿವಾಸಿ ಹಾಗೂ ಕೊರೊನಾ ಸೋಂಕಿತ (ರೋಗಿ ಸಂಖ್ಯೆ-556) 69 ವರ್ಷದ ವೃದ್ಧ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು, ಧರ್ಮಗುರುಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಮೃತನ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಲಿ ನಗರ ವಾಸಿಯಾಗಿದ್ದ ಕೊರೋನಾ ಸೋಂಕಿತ (ರೋಗಿ ಸಂಖ್ಯೆ-556) ಸಿಮೆಂಟ್ ವ್ಯಾಪಾರಿಯಾಗಿದ್ದು, ಏ.28ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಕೊರೊನಾ ಸೋಂಕು ಇರುವುದು ಏ.29ರಂದು ದೃಢಪಟ್ಟಿತ್ತು ಎಂದರು.
ಎಸ್ಎಆರ್ಐ ಕೇಸ್ ಎಂಬ ಕಾರಣಕ್ಕೆ ಜಿಲ್ಲೆಯ ತಜ್ಞ ವೈದ್ಯರು, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರನ್ನು ಒಳಗೊಂಡ ತಜ್ಞರ ಸಲಹೆ ಪಡೆದು, ಪ್ರತಿ 2 ಗಂಟೆಗೊಮ್ಮೆ ಪಿ-556ಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಬುಧವಾರ ರಾತ್ರಿ ತಜ್ಞರ ಸಮಿತಿಯು ವೆಂಟಿಲೇಟರ್ಗೆ ಶಿಫ್ಟ್ಮಾಡಿತ್ತು. 2-3 ತಾಸಿಗೊಮ್ಮೆ ಸೋಂಕಿತನ ಆರೋಗ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದೆವು ಎಂದು ಅವರು ಮಾಹಿತಿ ನೀಡಿದರು.
ಪಿ-556 ನಿನ್ನೆ ಸಂಜೆವರೆಗೂ ಸರಿಯಾಗಿದ್ದರು. ರಾತ್ರಿ 9ರ ಹೊತ್ತಿಗೆ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು. ಪ್ರೊಟೋಕಾಲ್ ಪ್ರಕಾರ ಧಾರ್ಮಿಕ ಮುಖಂಡರನ್ನು ದೂರ ನಿಲ್ಲಿಸಿ, ಯಾರೂ ಮೃತನ ಶವ ಮುಟ್ಟಲು ಅವಕಾಶ ನೀಡದೇ, ಆರೋಗ್ಯ, ಪೊಲೀಸ್, ಇಲಾಖೆ, ಪಾಲಿಕೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಶನಿವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಅವರು ಸ್ಪಷ್ಪಪಡಿಸಿದರು.
ಹೈಪರ್ ಟೆನ್ಷನ್, ಮಧುಮೇಹ, ಹೃದ್ರೋಹ ಸಮಸ್ಯೆಯು ಈ ಸೋಂಕಿತನಿಗೆ ಇತ್ತು. ಕಳೆದ 5 ವರ್ಷದಿಂದಲೂ ಮಣಿಪಾಲದಕಸ್ತೂರ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಂತರ ಮಣಿಪಾಲ ಆಸ್ಪತ್ರೆಗೆ ಹೋಗಿ ಬಂದಿದ್ದರು. ಮೈ-ಕೈ ನೋವು ಅಂತಾ ಏ.19ಕ್ಕೆ ಪಿ-556ನಲ್ಲಿ ಆರೋಗ್ಯ ಸಮಸ್ಯೆ ಕಾಡತೊಡಗಿತು. ಔಷಧಿ ಅಂಗಡಿಯಲ್ಲಿ ಮಾತ್ರೆ ಖರೀದಿಸಿ, ಬಳಸಿದಿದ್ದಾರೆ. ನಂತರ ಬೂದಾಳ್ ರಸ್ತೆಯ ಆಯುಷ್ ವೈದ್ಯರಲ್ಲೂ ಪಿ-556 ಪರೀಕ್ಷೆ ಮಾಡಿಸಿಕೊಂಡಿದ್ದರು ಎಂದು ಅವರು ವಿವರಿಸಿದರು.
ಮೈ-ಕೈ ನೋವಿಗೆ ಚಿಕಿತ್ಸೆ ನೀಡಿದರೂ ಗುಣಮುಖವಾಗದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಆಯುಷ್ ವೈದ್ಯರು ಸೂಚಿಸಿದ್ದಾರೆ. ಅದರಂತೆ ಜಿಲ್ಲಾಸ್ಪತ್ರೆಯಲ್ಲಿ ಜಾಲಿ ನಗರದ ಸಿಮೆಂಟ್ ವ್ಯಾಪಾರಿ ವೃದ್ಧನ ಸ್ಯಾಂಪಲ್ನ್ನು ಸಂಗ್ರಹಿಸಿ, ಕಳಿಸಲಾಗಿತ್ತು. ಏ.29ಕ್ಕೆ ಪಿ-556ನಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಅವರು ಮಾಹಿತಿ ನೀಡಿದರು.
164 ಜನರ ಸ್ಯಾಂಪಲ್ ಸಂಗ್ರಹ:
ಕೋವಿಡ್-19 ಸೋಂಕಿತ ಪಿ-556 ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ 92 ಜನರ ಸ್ಯಾಂಪಲ್ ನಿನ್ನೆ ಸಂಜೆವರೆಗೆ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಿದ್ದೇವೆ. ಶನಿವಾರ ಸಹ 72 ಜನರ ಸ್ಯಾಂಪಲ್ ಲ್ಯಾಬ್ಗೆ ಕಳಿಸಲಾಗಿದೆ. ಬಾಷಾ ನಗರದ ಪಿ-533 ಮತ್ತು ಜಾಲಿ ನಗರದ ಪಿ-556 ಮನೆಗಳನ್ನು ಎಪಿ ಸೆಂಟರ್ ಎಂಬುದಾಗಿ ಗುರುತಿಸಿ, ಎಪಿ ಸೆಂಟರ್ನ ಸುತ್ತಮುತ್ತಲಿನವರು, ನೆರೆಹೊರೆಯವರಲ್ಲಿ ಸೋಂಕಿನ ಲಕ್ಷಣ ಇಲ್ಲದಿದ್ದರೂ ಸ್ಪೆಷಲ್ ಡ್ರೈವ್ ಆಗಿ, ಎಲ್ಲರ ಸ್ಯಾಂಪಲ್ ಸಂಗ್ರಹಿಸಿದ್ದೇವೆ. ಅದನ್ನು ಲ್ಯಾಬ್ಗೆ ಪರೀಕ್ಷೆಗೆ ಕಳಿಸಲಾಗಿದೆ ಎಂದರು.
ಎಪಿ ಸೆಂಟರ್ಗಳು ಘೋಷಿಕ ಸ್ಲಂಗಳಾಗಿದ್ದು, ಇಕ್ಕಟ್ಟಿನ ಜಾಗದಲ್ಲಿ ಜನರು ವಾಸಿಸುತ್ತಿದ್ದಾರೆ. ರಿಸ್ಕ್ ತೆಗೆದುಕೊಳ್ಳದೇ, ಹೆಚ್ಚು ಜನರ ಸ್ಯಾಂಪಲ್ ಸಂಗ್ರಹಿಸಿದ್ದೇವೆ. ಇಂದು ಸಂಜೆ ಒಳಗಾಗಿ ಶುಕ್ರವಾರ ಕಳಿಸಿದ್ದ ಸ್ಯಾಂಪಲ್ಗಳ ವರದಿ ಕೈ ಸೇರಲಿದೆ. ಸ್ಪೆಷಲ್ ಡ್ರೈವ್ ಮೂಲಕ ಸಂಗ್ರಹಿಸಿ, ಇಂದು ಕಳಿಸಿರುವ ವರದಿಗಳ ಫಲಿತಾಂಶ ಮೇ.3ಕ್ಕೆ ನಮ್ಮ ಕೈ ಸೇರಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಹನುಮಂತರಾಯ್, ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ, ಕೋವಿಡ್-19 ನೋಡಲ್ ಅಧಿಕಾರಿ ಪ್ರಮೋದ ನಾಯಕ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
