ಲೋಕಸಭಾ ಚುನಾವಣೆ : ಗರಿಗೆದರಿದ ಸೋಲು ಗೆಲುವಿನ ಲೆಕ್ಕಾಚಾರ

ತುಮಕೂರು:

     ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನ ಹತ್ತಿರವಾಗುತ್ತಿದ್ದು, ಫಲಿತಾಂಶ ಕುರಿತಾದ ಲೆಕ್ಕಾಚಾರಗಳು ಗರಿಗೆದರಿವೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಲ್ಲರು ಎಂಬ ರಾಜಕೀಯ ವಿದ್ಯಾಮಾನಗಳು ನಡೆಯುತ್ತಲೇ ಇವೆ. ಗೆಲುವು-ಸೋಲಿನ ಲೆಕ್ಕಾಚಾರಗಳು ತಮ್ಮದೇ ಆದ ರೀತಿಯಲ್ಲಿ ವರ್ಣನೆಯಾಗುತ್ತಿವೆ.

      ಕಳೆದ 2014ರ ಲೋಕಸಭಾ ಚುನಾವಣೆ ಹಾಗೂ ಪ್ರಸಕ್ತ ಸಾಲಿನ ಚುನಾವಣೆಯನ್ನು ಮುಂದಿಟ್ಟುಕೊಂಡು ನೋಡುವುದಾದರೆ ಏನೆಲ್ಲಾ ಏರುಪೇರು ಆಗಬಹುದು ಎಂಬ ಚರ್ಚೆಗಳು ಹೆಚ್ಚು ಮುನ್ನಲೆಗೆ ಬಂದಿವೆ. 2014 ರಲ್ಲಿ ದೇಶಾದ್ಯಂತ ಮೋದಿ ಅಲೆ ಇದ್ದಿತಾದರೂ ಈಗಿನಷ್ಟು ಪ್ರಖರತೆಯನ್ನು ಪಡೆದುಕೊಂಡಿರಲಿಲ್ಲ. ಮೋದಿ ಅಲೆಯ ಜೊತೆಗೆ ಆಗ ಹೆಚ್ಚಾಗಿ ಬಿಂಬಿತವಾದದ್ದು ಕಾಂಗ್ರೆಸ್ ವಿರೋಧಿ ಅಲೆ. ಅದಕ್ಕೆ ಕಾರಣಗಳೂ ಇವೆ.

       ಕಾಂಗ್ರೆಸ್ ಆ ಸಂದರ್ಭದಲ್ಲಿ ಹಲವು ಹಗರಣಗಳಲ್ಲಿ ಸಿಲುಕಿ ಹೋಗಿತ್ತು. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಇದನ್ನು ಸಮರ್ಥವಾಗಿ ಬಳಸಿಕೊಂಡಿತ್ತು. ಒಂದು ಕಡೆ ಆಡಳಿತದ ವಿರೋಧಿ ಅಲೆ, ಮತ್ತೊಂದು ಕಡೆ ಮೋದಿಯ ಪ್ರವರ್ಧಮಾನ ಇವೆಲ್ಲವೂ ಆ ಪಕ್ಷದ ಗೆಲುವಿಗೆ ಸಹಕಾರಿಯಾಗಿದ್ದವು. ಅಂದಿಗಿಂತ ಈ ಬಾರಿ ಮೋದಿಯ ವರ್ಚಸ್ಸು ಹೆಚ್ಚಳವಾಗಿದೆ.. ಹೀಗಾಗಿ ಮತದಾರನ ಆಯ್ಕೆ ಪಕ್ಷಕ್ಕೋ, ವ್ಯಕ್ತಿಗೋ… ಎನ್ನುವ ಗೊಂದಲ ಇದ್ದೇ ಇದೆ.

      ಬದಲಾವಣೆಯ ನಿರೀಕ್ಷೆ ಮನುಷ್ಯನ ಸಹಜ ಗುಣ. ಇಷ್ಟು ವರ್ಷಗಳ ಕಾಂಗ್ರೆಸ್ ಆಳ್ವಿಕೆ ಬದಲಾಗಲಿ ಎಂಬ ಅಭಿಪ್ರಾಯ ಹೊಂದಿರುವ ಮತದಾರರು ಇದ್ದಾರೆ. ದೇಶದಲ್ಲಿ ಒಂದಷ್ಟು ಹೊಸದಾದ ಆಶೋತ್ತರಗಳನ್ನು ಹೊಂದಿರುವವರು ಇದ್ದಾರೆ. ಇವೆಲ್ಲ ಬದಲಾವಣೆಯ ಹಾದಿಯತ್ತ ಸಾಗುತ್ತವೆಯೇ ಎಂಬುದನ್ನು ಚುನಾವಣೆಯ ಫಲಿತಾಂಶವೇ ನಿರ್ಧರಿಸಬೇಕು.

      ಬಹು ನಿರೀಕ್ಷೆಗಳನ್ನು ಹೊಂದಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮಾಡಿದ ಮತದಾರ ವರ್ಗ ಆ ಪಕ್ಷ ಅಧಿಕಾರಕ್ಕೆ ಬಂದ ಒಂದೆರಡು ವರ್ಷಗಳಲ್ಲಿ ಅಸಮಾಧಾನ ಹೊಂದಿದ್ದು ಸಹಜ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಏನೆಲ್ಲಾ ಅಸಮಾಧಾನ ಇದ್ದರೂ 2019ರ ಚುನಾವಣೆಯ ಹೊಸ್ತಿಲಿಗೆ ಬಂದಾಗ ಕೆಲವು ಅನಿರೀಕ್ಷಿತ ಘಟನಾವಳಿಗಳು ಮತ್ತೆ ಮೋದಿಯ ಅಲೆಯನ್ನು ಸೃಷ್ಟಿಸಿದವು. ಹೀಗಾಗಿ ಇಡೀ ದೇಶದಲ್ಲಿ ಈ ಬಾರಿ ಮೋದಿಯ ಅಲೆಯನ್ನು ಕಾಣಬಹುದಾಗಿದ್ದು, ಫಲಿತಾಂಶ ಈ ನಿಟ್ಟಿನಲ್ಲಿಯೇ ಬರಬಹುದೇ ಎಂಬ ಗುಣಾಕಾರ ನಡೆಯುತ್ತಲೇ ಇವೆ.

       ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಹೆಚ್ಚು ಮೋದಿಯ ಅಲೆ ಕಂಡುಬಂದಿದೆ. ವಿಶೇಷವಾಗಿ 18 ರಿಂದ 30 ವರ್ಷ ವಯೋಮಾನದ ಯುವಜನತೆ ಮೋದಿಯ ಅಲೆಯಲ್ಲಿದ್ದಾರೆ. ಇದೆಲ್ಲವೂ ಮತವಾಗಿ ಪರಿವರ್ತನೆಯಾಗುವುದೇ? ಚುನಾವಣೆಯಲ್ಲಿ ಜಾತಿಯ ಲೆಕ್ಕಾಚಾರಗಳೇ ಹೆಚ್ಚು ಪ್ರಧಾನ್ಯತೆ ಪಡೆಯುತ್ತವೆ.

      ಕೆಲವು ಜಾತಿಗಳು ಪಕ್ಷನಿಷ್ಠೆಗೆ ಗುರುತಿಸಿಕೊಂಡಿವೆ. ಯುವಕರು ಈ ಬಾರಿ ಹೆಚ್ಚು ಮೋದಿಯತ್ತ ವಾಲಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆಯಾದರೂ ಪಕ್ಷನಿಷ್ಠೆಗೆ ಒಳಗಾಗಿರುವ ಜಾತಿ ಸಮೂಹಗಳ ಯುವಕರು ಪಕ್ಷನಿಷ್ಠೆ ತೋರಿದ್ದಾರೋ ಇಲ್ಲ ಮೋದಿಯತ್ತ ಮುಖ ಮಾಡಿದ್ದಾರೋ? ಎಂಬುದು ಸಹ ಈ ಬಾರಿ ಪರಿಗಣಿಸಬೇಕಾಗಿರುವ ಅಂಶ.

     ರಾಷ್ಟ್ರದ ಮತದಾರ ವರ್ಗವನ್ನು ತನ್ನತ್ತ ಸೆಳೆದಿರುವ ನರೇಂದ್ರ ಮೋದಿಯವರಿಗೆ ಭಾಷಣದಲ್ಲಿ ಹಿಡಿತವಿದೆ. ನಿರರ್ಗಳತೆ ಇದೆ. ಎಲ್ಲೇ ಹೋದರೂ ಅಲ್ಲಿನ ನಾಡಿಮಿಡಿತ ಅರಿತೇ ರೋಚಕತೆಯ ಭಾಷಣ ಮಾಡುವಲ್ಲಿ ನಿಸ್ಸೀಮರು. ಆದರೆ ಈ ಆಕರ್ಷಣೀಯ ಭಾಷಣದ ತಿರುಳು ಯುವಜನತೆಗೆ ಅರ್ಥೈಸಿಕೊಳ್ಳಲು ಸಾಧ್ಯವಾಗಿದೆಯೇ? ಅಂತಹ ಸಾಮಥ್ರ್ಯ ಯುವಜನತೆಯಲ್ಲಿ ಇದೆಯೇ? ಎಂಬುದು ವಿಚಾರಾರ್ಹವಾದರೂ ಬಹುಪಾಲು ಯುವಕರು ಮೋದಿ ಅಲೆಯಲ್ಲಿ ಇರುವುದು ನಿರ್ವಿವಾದ. ನರೇಂದ್ರ ಮೋದಿಗೆ ತದ್ವಿರುದ್ಧವಾದ ವೈಚಾರಿಕ ವಿಚಾರಗಳು ತಳಸ್ಪರ್ಶಿ ಆಗಿದ್ದರೂ ಅವು ಅಷ್ಟಾಗಿ ಪರಿಣಾಮ ಬೀರಿಲ್ಲ ಎಂಬುದು ಹೊರನೋಟಕ್ಕೆ ಕಾಣುತ್ತದೆ.

     ಭಾರತೀಯ ಚುನಾವಣೆಗಳನ್ನು 1970ರ ದಶಕದಿಂದ ಅವಲೋಕಿಸಿದಾಗ ಒಲವು, ಆಕರ್ಷಣೆ ಎಂಬಿತ್ಯಾದಿ ವ್ಯಾಖ್ಯಾನಗಳು ನಡೆದ ಸಂದರ್ಭದಲ್ಲಿ ಫಲಿತಾಂಶ ಹೀಗೆಯೇ ಬರುತ್ತದೆಂದು ನಂಬಿದ್ದರೂ ತದ್ವಿರುದ್ಧ ಫಲಿತಾಂಶಗಳು ಬಂದಿರುವ ಉದಾಹರಣೆಗಳಿವೆ. ದೇಶದಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ `ಕಾಂಗ್ರೆಸ್ ಇಂಡಿಕೇಟ್ಸ್ ಸಿಂಡಿಕೇಟ್,’ `ಕಾಂಗ್ರೆಸ್ ಹೋ ಕಾಂಗ್ರೆಸ್ ಹೈ’ ಇವೆಲ್ಲವೂ ಭೂಮಿಕೆಗೆ ಬಂದಾಗ ಕಾಂಗ್ರೆಸ್ ಮೆರೆದಿತ್ತು.

      ಅಪಾತ್ರ ಅಭ್ಯರ್ಥಿಗಳು ಸತ್ಪಾತ್ರರಂತೆ ವಿಜೃಂಭಿಸಿದರಾದರೂ ಅಂತಹವರ್ಯಾರೂ ಸ್ಮತಿಪಟಲದಲ್ಲಿ ಉಳಿದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಗಟ್ಟಿ ಛಾಪನ್ನು ಬಿತ್ತಿ ಹೋದವರು ಅಪರೂಪವೇ. ರಾಜಕಾರಣದ ಪ್ರವೃತ್ತಿಯೇ ಇಷ್ಟು.ಮೋದಿಯ ಪರ್ವದಲ್ಲಿ ರಾಜಕೀಯ ಛಾಪು ಮೂಡಿಸುವಂತಹ ವಿಜೃಂಭಣೆ ಬರಬಹುದೆ ಎಂದು ಭಾವಿಸಿದರೆ ಬಂದದ್ದು ಆಗಿದೆ. ಈಗ ಪುನರಾವೃತ್ತಿಯನ್ನು ದೇಶ ನಿರೀಕ್ಷಿಸುತ್ತಿದೆಯೇ? ಈ ನಿರೀಕ್ಷೆ ಫಲಕಾರಿಯಾಗುವುದೇ ಎಂಬ ಕಾಲಘಟ್ಟದಲ್ಲಿ ಇದ್ದೇವೆ. 2020ರ ಹೊಸ್ತಿಲಿನ ದಿನಗಳಲ್ಲಿ ಮಾಧ್ಯಮ ಪ್ರಭಾವದಿಂದಾಗಿ ಇಂತಹ ನಿರೀಕ್ಷೆಗಳೇ ಏರುಪೇರಾಗಬಹುದೇ ಎಂಬ ಆಲೋಚನೆಗಳೂ ಇವೆ.

        ಮತದಾನದ ಪ್ರಮಾಣ ಗಮನಿಸಿದಾಗ ತಾನು ಓಟು ಹಾಕಲೇಬೇಕು ಎಂಬ ಅರಿವು ಮತದಾರರಿಗೆ ಬಂದಂತಿದೆ. ಆದರೆ ಯಾರಿಗೆ ಹಾಕಬೇಕೆಂಬ ಪ್ರಶ್ನೆ ಬಂದಾಗ ಅಳೆದು ತೂಗಿ ಅಂತಿಮವಾಗಿ ಪಕ್ಷ ಅಥವಾ ವ್ಯಕ್ತಿಯನ್ನು ಆರಿಸಿಕೊಂಡಿದ್ದಾರೆ. ಮತದಾನದ ಪರಿಜ್ಞಾನ ಹೊಂದಿದ್ದಾರೆ 1970 ಹಾಗೂ 2020ರ ಈ ಎರಡೂ ಕಾಲಘಟ್ಟಗಳನ್ನು ಹೋಲಿಸಿದಾಗ ಕೇಂದ್ರ ಸರ್ಕಾರ ತನ್ನ 5 ವರ್ಷಗಳ ಆಳ್ವಿಕೆಯಲ್ಲಿ ಮತದಾರನ ಆಶಯದಂತೆ ನಡೆದುಕೊಂಡಿದೆಯೇ? ತಟಸ್ಥ ಮತದಾರ ವರ್ಗ ಇದಕ್ಕೆ ಯಾವ ಉತ್ತರ ನೀಡಬಲ್ಲರು ಎಂಬುದೇ ನಮ್ಮ ಮುಂದಿರುವ ನಿರೀಕ್ಷೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link