ಒಕ್ಕೂಟದ ಸದಸ್ಯರ ಮನಸ್ಸು ಹಾಲಿನಂತಿರಬೇಕು :ಹೆಚ್.ಬಿ.ಶಿವನಂಜಪ್ಪ ಹಳೆಮನೆ

ಚಿಕ್ಕನಾಯಕನಹಳ್ಳಿ:

   ಹಾಲು ಹೇಗೆ ಬೆಳ್ಳಗೆ ಇರುತ್ತದೆಯೋ ಹಾಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿರುವ ಸದಸ್ಯರ ಮನಸ್ಸೂ ಹಾಲಿನಂತೆಯೇ ಇರಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಬಿ.ಶಿವನಂಜಪ್ಪ ಹಳೆಮನೆ ಕರೆ ನೀಡಿದರು.

   ಚಿಕ್ಕನಾಯಕನಹಳ್ಳಿ ತಾಲ್ಲೂಕು ನಡುವನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದ ಕ್ಷೀರ ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಹಾಗೂ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿ ಯಾವುದೇ ಜಾತಿ ಬೇಧ ಇಲ್ಲ. ರಾಜಕಾರಣ ವೈಯಕ್ತಿಕವಾಗಿ ಇರಲಿ. ಸಂಘದ ವಿಚಾರ ಬಂದಾಗ ಎಲ್ಲರೂ ಒಂದೇ ಎಂಬ ಮನೋಭಾವ ಇರಲಿ ಎಂದು ಸಲಹೆ ನೀಡಿದರು.

    ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲೆಂದು ಮಹಿಳಾ ಸಹಕಾರ ಸಂಘಗಳನ್ನು ಗುರುತಿಸಿ ಉತ್ತೇಜನ ನೀಡಲಾಗುತ್ತಿದೆ. ವಿವಿಧ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ತುಮಕೂರು ಹಾಲು ಒಕ್ಕೂಟವು ಸುಸ್ಥಿತಿಯಲ್ಲಿದ್ದು, ಪ್ರತಿದಿನ 8 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ತಿಂಗಳು ಗ್ರಾಮಗಳಿಗೆ ಲಕ್ಷಾಂತರ ರೂ.ಗಳ ಬಟವಾಡೆಯಾಗುತ್ತದೆ. ಇದನ್ನು ನಂಬಿ ಹಲವಾರು ಕುಟುಂಬಗಳು ಬದುಕು ಸಾಗಿಸುತ್ತಿವೆ ಎಂದರು.

    ಸಂಘಗಳಲ್ಲಿ ಶಿಸ್ತು ಇರಬೇಕು. ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಯಾವ ಸಂಘದಲ್ಲಿ ಶಿಸ್ತು ಅಳವಡಿಸಿಕೊಂಡಿರುತ್ತಾರೋ ಅಂತಹ ಸಂಘಗಳು ಬಹು ಬೇಗನೆ ಪ್ರವರ್ಧಮಾನಕ್ಕೆ ಬರುತ್ತವೆ ಎಂದರು. ಒಕ್ಕೂಟದ ಡೆಪ್ಯುಟಿ ಮ್ಯಾನೇಜರ್ ಎರಗುಂಟಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ 23 ಮಹಿಳಾ ಸಹಕಾರ ಸಂಘಗಳಿವೆ. ಎಲ್ಲ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

    ಮಹಿಳಾ ಸಂಘಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒಬ್ಬರು ಸಾಲ ಪಡೆದ ನಂತರ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು. ಈ ಸಹಕಾರ ಮನೋಭಾವನೆ ಎಲ್ಲರಲ್ಲೂ ಇದ್ದರೆ ಉತ್ತಮ ಸಂಘಗಳಾಗಿ ಬೆಳೆಯುತ್ತವೆ ಎಂದರು.

    ಮಹಿಳೆ ಮತ್ತು ಕಾನೂನು ವಿಷಯವಾಗಿ ಮಾತನಾಡಿದ ವಕೀಲ ಸಾ.ಚಿ.ರಾಜಕುಮಾರ ಅವರು ಗಡಿ ಭಾಗಗಳಲ್ಲಿ, ತಾಂಡಗಳು, ಹಟ್ಟಿಗಳಲ್ಲಿ ಇಂದಿಗೂ ಸಹ ಮಹಿಳೆಯರ ಮೇಲೆ ಹಲವು ಆಚರಣೆಗಳನ್ನು ಹೇರುವ ರೂಢಿಗಳು ಚಾಲ್ತಿಯಲ್ಲಿವೆ. ಬಾಲ್ಯ ವಿವಾಹ ಜೀವಂತ ಇದೆ. ಇವುಗಳನ್ನು ನಿವಾರಿಸಬೇಕು. ಬಾಲ್ಯ ವಿವಾಹಗಳಿಂದ ಆಗುವ ದುಷ್ಪರಿಣಾಮಗಳು ಹಲವು. ಒಂದು ವೇಳೆ ಕಾನೂನು ಉಲ್ಲಂಘಿಸಿ ವಿವಾಹವಾದರೆ ಅದಕ್ಕೆ ಸಂಬಂಧಿಸಿದ ಎಲ್ಲರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ವರದಕ್ಷಿಣೆ, ಭ್ರೂಣಹತ್ಯೆ ಇತ್ಯಾದಿ ಕಾನೂನುಗಳ ಕುರಿತಾಗಿ ಮಾತನಾಡಿದರು.

     ಸಮಾರಂಭದಲ್ಲಿ ಹಾಲು ಒಕ್ಕೂಟದ ಸ್ಟೆಪ್ ಯೋಜನೆಯ ಉಪ ವ್ಯವಸ್ಥಾಪಕ ಮಂಜುನಾಥ ನಾಯಕ್, ವಿಸ್ತರಣಾ ಧಿಕಾರಿಗಳಾದ ಮಧು ವೈ.ಎಸ್., ನೇತಾ ಬಿ.ಗೌಡ, ರಾಜು, ಸಮಾಲೋಚಕ ಸುನಿಲ್, ಸುಗಮ ನಿರ್ವಹಣಾಧಿಕಾರಿ ಶಿವಪ್ಪ, ಸಂಘದ ಅಧ್ಯಕ್ಷೆ ಪಾರ್ವತಮ್ಮ, ಕಾರ್ಯದರ್ಶಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಸು ಖರೀದಿಸಿದವರಿಗೆ ಒಕ್ಕೂಟದಿಂದ 20 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link