ಶಿರಾ
ಶಿರಾ ನಗರದ ಐತಿಹಾಸಿಕ ಪ್ರಸಿದ್ಧ ಕಸ್ತೂರಿ ರಂಗಪ್ಪನಾಯಕನ ಕೋಟೆಯಲ್ಲಿ ಬರಲಿರುವ ಆ. 15 ರ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮ ಕೈಗೊಳ್ಳಲು ನಿರ್ಧಾರಿಸಲಾಗಿತ್ತು. ಆದರೂ ಸಮಯದ ಅಭಾವದಿಂದ ಎಂದಿನಂತೆ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿಯೇ ಸ್ವಾತಂತ್ರ್ಯೋತ್ಸವ ನಡೆಯಲಿದ್ದು, ಮುಂದಿನ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಕೋಟೆಯ ಪ್ರಾಂಗಣದಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಐತಿಹಾಸಿಕ ಪ್ರಸಿದ್ಧ ಕಸ್ತೂರಿ ರಂಗಪ್ಪ ನಾಯಕನ ಕೋಟೆಗೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಶಾಸಕರು, ಸ್ವಾತಂತ್ರ್ಯೋತ್ಸವವನ್ನು ಕೋಟೆಯ ಪ್ರಾಂಗಣದಲ್ಲಿ ನಡೆಸಲು ಸ್ಥಳ ಪರಿಶೀಲನೆ ನಡೆಸಿದರು.
ಕೋಟೆಯ ಪ್ರಾಂಗಣದಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಶಿರಾದ ಕಸ್ತೂರಿ ರಂಗಪ್ಪನಾಯಕನ ಕೋಟೆಯು ಐತಿಹ್ಯ ಹೊಂದಿದ್ದು, ಪ್ರಾಚ್ಯವಸ್ತು ಮತ್ತು ಸಂರಕ್ಷಣಾ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದೆ. ಕೋಟೆಯ ಅಭಿವೃದ್ಧಿಗಾಗಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ 54 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿ ಕಾರ್ಯ ನಡೆಯುತ್ತಿದೆ. ಪುನಃ ಇತ್ತೀಚೆಗಷ್ಟೆ 5 ಕೋಟಿ ರೂ. ಮಂಜೂರಾಗಿದ್ದು ಕೋಟೆಯ ಸಮಗ್ರ ಅಭಿವೃದ್ಧಿ ನಡೆಯಲಿದೆ ಎಂದರು.
ಬರಲಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಕೋಟೆಯ ಆವರಣದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿತ್ತಾದರೂ ಕೋಟೆಯ ಪ್ರಾಂಗಣವನ್ನು ಸ್ವಚ್ಚಗೊಳಿಸುವ ಹಾಗೂ ನೆಲವನ್ನು ಸಮತಟ್ಟು ಮಾಡಿಕೊಳ್ಳುವ ಕಾರ್ಯಗಳಿಗೆ ಸಾಕಷ್ಟು ದಿನಗಳು ಬೇಕಾಗಿರುವ್ಯದರಿಂದ, ಇನ್ನು ಮುಂದಿನ ರಾಷ್ಟ್ರೀಯ ಹಬ್ಬಗಳನ್ನು ಕೋಟೆಯಲ್ಲಿಯೇ ಆಚರಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸತ್ಯನಾರಾಯಣ್ ಹೇಳಿದರು.
ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಿ, ಗ್ರಾ. ಸಿ.ಪಿ.ಐ. ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಯ ರವಿಚಂದ್ರ, ಬಿ.ಇ.ಓ. ರಾಮಪ್ಪ, ತಾ.ಪಂ. ಇ.ಓ. ಮೋಹನ್, ಬೆಸ್ಕಾಂ ಎ.ಇ.ಇ. ಶಾಂತರಾಜು, ಜಲ್ದೇಶ್, ಆರ್.ಐ. .ಮಂಜುನಾಥ್, ಇಂಜಿನಿಯರ್ ಮಂಜುನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
