ಹುಳಿಯಾರು:
ಕೇಂದ್ರ ಸರ್ಕಾರದ ಅನ್ಲಾಕ್ ಐದರ ಅನ್ವಯ ಅ.15 ರಿಂದ ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದ್ದರೂ ಸಹ ಕೋವಿಡ್– 19 ನಿಯಮಾವಳಿ ಪಾಲನೆಗೆ ಚಿತ್ರಮಂದಿರದ ಮಾಲೀಕರು ಅಂಜಿದ ಪರಿಣಾಮ ಹುಳಿಯಾರಿನಲ್ಲಿ ಚಿತ್ರಮಂದಿರ ಬಾಗಿಲು ತೆರೆಯದೆ ಚಿತ್ರ ರಸಿಕರಿಗೆ ನಿರಾಸೆಯಾಗಿದೆ.
ಸರ್ಕಾರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ ಸಹ ಚಿತ್ರ ಮಂದಿರದ ಪ್ರತಿಯೊಬ್ಬ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕು, ಪ್ರೇಕ್ಷಕರ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬೇಕು. ಪ್ರತಿ ಪ್ರೇಕ್ಷಕರಿಗೂ ಸ್ಯಾನಿಟೈಸ್ ಮಾಡಬೇಕು, ಮಾಸ್ಕ್ ಕಡ್ಡಾಯ ಮಾಡಬೇಕು, ಸೀಟುಗಳ ನಡುವೆ ಅಂತರ ಇರಬೇಕು, ಶೇ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂಬಿತ್ಯಾದಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿರ್ದೇಶಿಸಲಾಗಿದೆ. ಇದು ಚಿತ್ರಮಂದಿರದ ಮಾಲೀಕರ ತಲೆಬಿಸಿಗೆ ಕಾರಣವಾಗಿದೆ.
ಕೋವಿಡ್ ನಿಯಮ ಪಾಲನೆ ಮಾಡಿ ಪ್ರದರ್ಶನ ವ್ಯವಸ್ಥೆ ಮಾಡಿದ್ದರೂ ಸಹ ಪ್ರೇಕ್ಷಕರು ಬರದಿದ್ದರೆ ಕಲೆಕ್ಷನ್ ಇರುವುದಿಲ್ಲ. ಸಿಬ್ಬಂದಿ ಪಗಾರ, ವಿದ್ಯುತ್ ಶುಲ್ಕ, ಪರಮಾನಗಿ ನವೀಕರಣ, ಕೋವಿಡ್ ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಇತರ ಖರ್ಚುಗಳನ್ನು ಭರಿಸುವುದು ಕಷ್ಟವಾಗುತ್ತದೆ. ಅಲ್ಲದೆ ಹೊಸ ಸಿನಿಮಾಗಳ ಬಿಡುಗಡೆ ಸಹ ಆಗದಿರುವುದರಿಂದ ಸದ್ಯಕ್ಕೆ ಚಿತ್ರ ಪ್ರದರ್ಶನ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹುಳಿಯಾರು ಬಾಲಾಜಿ ಚಿತ್ರಮಂದಿರದ ಮ್ಯಾನೇಜರ್ ಬಾಣಾವರ ಸತೀಶ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
