ಕಮಿಷನ್ ದಂಧೆಯಿಂದ ಯೋಜನೆಗಳಿಗೆ ಹಿನ್ನಡೆ: ಎಸ್ ಆರ್ ಶ್ರೀನಿವಾಸ್

ಗುಬ್ಬಿ

    ಹಿಂದುಳಿದ ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಅನುದಾನ ಬಳಕೆಯಲ್ಲಿ ವಿಳಂಬವಾಗಿರುವುದಕ್ಕೆ ಸರ್ಕಾರವೆ ಹೊಣೆ. ಕಮಿಷನ್ ದಂಧೆಯಿಂದಾಗಿ ಈ ಅನುದಾನ ಕ್ರಿಯಾ ಯೋಜನೆಗಳು ಹಿಂದೆ ಉಳಿದಿವೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪ ಮಾಡಿದರು.

    ತಾಲ್ಲೂಕಿನ ಕಂಚಿಗಾನಹಳ್ಳಿ ಗ್ರಾಮದಲ್ಲಿ ಟಿಎಸ್‍ಪಿ ಯೋಜನೆಯ 20 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಕ್ರಿಯಾಯೋಜನೆಗಳು ನಮ್ಮ ಗಮನಕ್ಕೆ ಬಾರದೆ ನಡೆದಿರುತ್ತದೆ. ನಮ್ಮಲ್ಲಿ ಬರುವ ಗುತ್ತಿಗೆದಾರರು ಪತ್ರ ನೀಡಿದರೆ ಸಾಕು ಎನ್ನುವ ಹಂತ ತಲುಪಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

    ಮೇಲ್ಮಟ್ಟದ ಅಧಿಕಾರಿಗಳ ಕಮಿಷನ್ ದಂಧೆಯಿಂದಾಗಿ ಈ ಅನುದಾನ ಬಳಕೆಯಲ್ಲೂ ಹಿಂದೆ ಸರಿದಿದೆ. ಈ ದುರ್ಗಮ ಸ್ಥಿತಿಗೆ ಸಮಾಜ ಕಲ್ಯಾಣ ಸಚಿವರು ಮತ್ತು ಮುಖ್ಯಮಂತ್ರಿಗಳು ನೇರ ಹೊಣೆ ಹೊರಬೇಕು. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ 38 ತಾಲ್ಲೂಕುಗಳಿಗೆ ಈ ಮೀಸಲಿನ ಹಣ ಬಳಕೆ ಮಾಡಲಿ. ಗುಬ್ಬಿ ತಾಲ್ಲೂಕು ಸಹ ಹಿಂದುಳಿದ ಪಟ್ಟಿಯಲ್ಲಿದೆ. ನಮಗೆ ಅನುದಾನ ನೀಡಿದ್ದಲ್ಲಿ ಸದ್ಬಳಕೆ ಮಾಡುತ್ತೇವೆ. ಶೋಷಿತ ವರ್ಗಗಳಾದ ಎಸ್‍ಸಿ,ಎಸ್‍ಟಿ ಜನಾಂಗಗಳ ಕಾಲನಿಗಳ ಅಭಿವೃದ್ಧಿಗೆ  ದುಡಿದಿದ್ದೇನೆ. ಮೀಸಲು ಹಣವನ್ನು ಸಾಕಷ್ಟು ಬಳಸಿ ಬಹುತೇಕ ಗ್ರಾಮಗಳಲ್ಲಿ ಕೆಲಸ ಮಾಡಿದ್ದೇನೆ. ಈ ಮೀಸಲಿನ ಹಣ 27 ಸಾವಿರ ಕೋಟಿ ಉಳಿಸಿಕೊಂಡ ಸರ್ಕಾರಕ್ಕೆ ನಾಚಿಕೆಯಾಗಬೇಕಿದೆ ಎಂದು ಕಿಡಿಕಾರಿದರು.

     ನಮ್ಮ ತಾಲ್ಲೂಕಿಗೆ ಸಾವಿರ ಕೋಟಿ ನೀಡಿದರೂ ಅದರ ಬಳಕೆ ಸಮರ್ಪಕವಾಗಿ ಮಾಡುತ್ತೇನೆ. ಅನುದಾನ ಬಳಕೆಯಲ್ಲಿ ಆದ ಗಮನಾರ್ಹ ಕಮಿಷನ್ ದಂಧೆಗೆ ಕಡಿವಾಣ ಹಾಕಿ, ಅಧಿಕಾರಿಗಳ ಮಧ್ಯಸ್ಥಿಕೆಗೆ ತೆರೆ ಎಳೆದು ನೇರ ಕ್ಷೇತ್ರಗಳಿಗೆ ಇಂತಿಷ್ಟು ಹಣ ಹಂಚಿ ಕ್ರಿಯಾಯೋಜನೆಗೆ ಶಾಸಕರ ಸಮ್ಮತಿ ನೀಡಿದಲ್ಲಿ ಅನುದಾನ ಬಳಕೆಯಾಗಲಿದೆ ಎಂದ ಅವರು, ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿಯ ರೈತರ ಭೂಮಿ ಪಡೆಯಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮೂರು ತಾಲ್ಲೂಕಿಗೆ ನೀರು ನೀಡುವಲ್ಲಿ ಕೇವಲ 95 ಎಂಸಿಎಫ್‍ಟಿ ಮಾತ್ರ ನೀಡಲು ತಿಳಿಸಲಾಗಿದೆ ಎಂದರು.

     ಕನಿಷ್ಠ 2 ಟಿಎಂಸಿ ನೀರು ಪ್ರತಿ ತಾಲ್ಲೂಕಿಗೆ ನೀಡುವಂತೆ ಆಗ್ರಹಿಸಲಾಗುತ್ತಿದೆ. ಕಾಮಗಾರಿ ನಡೆಸುವ ವಿಚಾರದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸ್ಥಗಿತಗೊಳಿಸಲಾಗಿದೆ. ತಿಪಟೂರು ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗುಬ್ಬಿಯಲ್ಲಿ ಕಾಮಗಾರಿ ನಡೆದಿದ್ದು, ಕೋಲಾರ ಭಾಗದ ಕುಡಿಯುವ ನೀರಿನ ಯೋಜನೆಯ ಹಿನ್ನೆಲೆಯಲ್ಲಿ ಮಾನವೀಯ ಗುಣ ತೋರಿದ್ದಾರೆ. ಹೇಮಾವತಿ ಕಾಣದ ಹಲವು ಕೆರೆಗಳಿಗೆ ನೀರು ಹರಿಸಲು ಒತ್ತಾಯ ಹೇರಲಾಗಿದೆ. ಶೀಘ್ರದಲ್ಲಿ ಬೇಡಿಕೆ ಈಡೇರುವ ಸಾಧ್ಯತೆ ಇದೆ ಎಂದ ಅವರು, ಸಾಮಾನ್ಯ ಮೀಸಲಿನ ಶೇ.10 ರಲ್ಲಿ ನಗರ ಪ್ರದೇಶದ ಒಕ್ಕಲಿಗರನ್ನು ಕೈ ಬಿಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಅವಲೋಕಿಸಬೇಕಿದೆ. ಆರ್ಥಿಕವಾಗಿ ಒಕ್ಕಲಿಗರು ಸದೃಢರೆಂದು ಹೇಳಲಾಗದು ಎಂದರು.

     ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ದೇವರಾಜಮ್ಮ ಬಸವರಾಜು, ಸದಸ್ಯ ರೇಣುಕಾಪ್ರಸಾದ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ, ಮುಖಂಡರಾದ ಚಿದಾನಂದಮೂರ್ತಿ, ಕಾಳಯ್ಯ, ಗುತ್ತಿಗೆದಾರ ರಮೇಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಜಗದೀಶ್ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link