ಹುಳಿಯಾರು:
ರಾಷ್ಟ್ರೀಯ ಹೆದ್ದಾರಿ 150 ವಿಸ್ತರಣೆಗೆ ರಸ್ತೆ ಬದಿ ಮರಗಳ ಹನನ ಮುಂದುವರಿದಿದ್ದು ಹುಳಿಯಾರು ಕೆ.ಬಿ.ಕ್ರಾಸ್ ಮಾರ್ಗದ ರಸ್ತೆ ಬದಿಯ ಸಾಲುಮರಗಳು ನೆನಪಿನಂಗಳ ಸೇರುತ್ತಿವೆ.
ಈ ರಸ್ತೆಯ ಉದ್ದಕ್ಕೂ ಇಕ್ಕೆಲದಲ್ಲಿದ್ದ ಆಲ, ಬೇವು, ನೇರಲೆ, ಅರಳಿ, ಹೊಂಗೆ ಮೊದಲಾದ ನೂರಾರು ಮರಗಳು ಯಂತ್ರ ಗರಗಸಕ್ಕೆ ಮೈಯೊಡ್ಡಿವೆ. ಕಾಂಡ, ರೆಂಬೆಗಳನ್ನು ತುಂಡರಿಸಿ ವಾಹನಗಳಲ್ಲಿ ಒಯ್ಯಲಾಗುತ್ತಿದೆ. ನೂರಾರು ವರ್ಷ ಜನರಿಗೆ ನೆರಳು ಕೊಡುತ್ತಿದ್ದ ಮರಗಳು ಧರೆಗುರುಳುತ್ತಿರುವ ಈ ದೃಶ್ಯ ಪರಿಸರ ಪ್ರೇಮಿಗಳ ಮನ ಕಲಕುತ್ತಿದೆ.
ಬದಿಯ ಸಾಲುಮರಗಳು ರಸ್ತೆಗೆ ಆಭರಣವಿದ್ದಂತೆ. ಮಳೆ ತರುತ್ತವೆ, ನೆರಳು ನೀಡುತ್ತವೆ. ಅಳಿಲು, ಹಾವು, ಪಕ್ಷಿಗಳಿಗೆ ಆಹಾರ ನೀಡುತ್ತವೆ. ಈ ರಸ್ತೆ ಬದಿಯ ಸಾಲುಮರಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ಹೆದ್ದಾರಿ ವಿಸ್ತರಣೆ ಅವುಗಳಿಗೆ ಕುತ್ತಾಗಿ ಪರಿಣಮಿಸಿದೆ. ಪರಿಣಾಮ ಸಾಲುಮರಗಳ ನೆರಳಿನಲ್ಲಿ ತಂಪು ಹವೆಯ ಸಂಚಾರ ನೆನಪಿನ ಅಂಗಳಕ್ಕೆ ಸೇರಿದೆ.
ಮರಗಿಡಗಳನ್ನು ಕಡಿದ ಪರಿಣಾಮ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ ಎಂಬ ವಾಸ್ತವ ಸತ್ಯ ತಿಳಿದಿದ್ದರೂ ಸಹ ಮರ ಕಡಿಯುವುದು ಇನ್ನೂ ನಿಂತಿಲ್ಲ. ಪ್ರತಿವರ್ಷ ಮರಗಿಡಗಳನ್ನು ಬೆಳೆಸಲು ನೂರಾರು ಕೋಟಿ ರೂ. ಖರ್ಚು ಮಾಡುವ ಸರ್ಕಾರ ರಸ್ತೆ ಬದಿಯ ಮರಳನ್ನು ಕಡಿಯಲು ಅನುಮತಿ ನೀಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಹೀಗೆ ಕಡಿಯುವ ಬದಲು ವೈಜ್ಞಾನಿಕವಾಗಿ ಸ್ಥಳಾಂತರಿಸಿದ್ದರೆ ಒಳಿತಿತ್ತು ಎಂದು ಸಾವಯವ ಕೃಷಿಕ ರಾಮಕೃಷ್ಣಪ್ಪ ಅಭಿಪ್ರಾಯಪಡುತ್ತಾರೆ.
ಅಗಲೀಕರಣ ಆಗಬೇಕು ಅದು ಸತ್ಯ. ಹಾಗಂತ ಬೆಲೆ ಕಟ್ಟಲಾಗದ ಸಾವಿರಾರು ಮರಗಳನ್ನು ಕಡಿಯುವ ಬದಲು ಸಾಲು ಮರಗಳ ಸಾಲನ್ನು ಹಾಗೆಯೇ ಉಳಿಸಿ ಅದರ ಪಕ್ಕದಲ್ಲೇ ಇನ್ನೊಂದು ರಸ್ತೆ ಮಾಡಿದ್ದರೆ 2 ವೇ ರಸ್ತೆಯೂ ಆಗುತ್ತಿತ್ತು. ಮರಗಳೂ ಸಹ ಉಳಿಯುತ್ತಿತ್ತು. ಆದರೆ ಕಡಿಮೆ ಬೆಲೆಗೆ ಮರಗಳ ಹಾರಾಜು ನಡೆಸಿ ಕೋಟ್ಯಾಂತರ ರೂ. ಆದಾಯ ಪಡೆಯುವ ದಂದೆ ಇದಾಗಿರುವುದರಿಂದ ನಮ್ಮ ಕೂಗು ಅರಣ್ಯರೋಧನವಾಗಿದೆ ಎನ್ನುತ್ತಾರೆ ರೈತ ಮುಖಂಡ ಕೆಂಕೆರೆ ಸತೀಶ್
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಈಗಾಗಲೇ ಮರಗಳನ್ನು ಬೇರು ಸಮೇತ ಕಡಿದು ಸಾಗಿಸಲಾಗಿದೆ. ಆದರೆ ಒಂದು ಮರ ಕಡಿದರೆ 10 ಗಿಡಗಳನ್ನು ನೆಟ್ಟು ಪೋಷಿಸಬೇಕು ಎನ್ನುವ ಅರಣ್ಯ ಇಲಾಖೆಯ ನಿಯಮ ಈಗ ಪಾಲನೆ ಮಾಡಬೇಕಿದೆ. ಈ ಪ್ರಕ್ರಿಯೆಯನ್ನು ಬರುವ ಮಳೆಗಾಲದಲ್ಲಿಯೇ ಆರಂಭಿಸಿದರೆ ಉತ್ತಮ ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ವೃಕ್ಷಗಳನ್ನು ಮತ್ತೆ ಬೆಳೆಸಲು ಮುಂದಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
