ಹೊಸದುರ್ಗ :
ಕೋರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಸರ್ಕಾರ ಘಂಟಾಘೋಷವಾಗಿ ಹೇಳುತ್ತಲೇ ಇದ್ದರೂ ಸರ್ಕಾರಿ ಬಸ್ಸುಗಳಲ್ಲಿಯೇ ಈ ನಿಯಮ ಗಾಳಿಗೆ ತೂರುತ್ತಿರುವುದು ವಿಷಾದನೀಯ.
ಸೋಂಕು ಹರಡದಂತೆ ತಡೆಯಲು ಒಂದು ಬಸ್ಸಿನಲ್ಲಿ ಕೇವಲ 30 ಜನ ಮಾತ್ರ ಪ್ರಯಾಣ ಮಾಡಬೇಕು ಎಂಬ ನಿಯಮವಿದ್ದರೂ 50-60 ಜನ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿರುವ ಆತಂಕಕಾರಿ ಘಟನೆಗಳು ಹೊಸದುರ್ಗ ನಗರದಲ್ಲಿ ಇಂದಿಗೂ ನಡೆಯುತ್ತಿವೆ. ಈ ಕುರಿತು ದಾವಣಗೆರೆ ಕೆಎಸ್ ಆರ್ ಟಿಸಿ ಪ್ರಾದೇಶಿಕ ಕಚೇರಿ ಮತ್ತು ಚಿತ್ರದುರ್ಗ ಜಿಲ್ಲೆ ಪ್ರಾದೇಶಿಕ ಕಚೇರಿ ಜಾಗರೂಕತೆ ವಹಿಸದೇ ನಿರ್ಲಕ್ಷವಹಿಸುತ್ತಿದೆ.
ಹೀಗೆ ದಾವಣಗೆರೆಯಿಂದ ಹೊಸದುರ್ಗಕ್ಕೆ ಬರುವ ಬಸ್ಸಿನಲ್ಲಿ 50 ರಿಂದ 60 ಹೆಚ್ಚಿನ ಜನ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಈಗಾಗಲೇ ದಾವಣಗೆರೆಯಲ್ಲಿ 356ಕ್ಕಿಂತ ಹೆಚ್ಚು ಕೋರೋನಾ ಪಾಸಿಟಿವ್ ಇದ್ದು ಹೊಸದುರ್ಗದಲ್ಲಿ 3 ಪಾಸಿಟಿವ್ ದೃಢ ಪಟ್ಟಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈ ರೀತಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಬರುವುದು ಎಷ್ಟರ ಮಟ್ಟಿಗೆ ಸರಿ ಎಂಬುದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೆಡೆ ಜಿಲ್ಲೆಯಲ್ಲಿ 70 ಕೋರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೊಂದೆಡೆ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಜಿಲ್ಲಾಡಳಿತ ಏನೆಲ್ಲಾ ಕಸರತ್ತು ಮಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಯಮ ಗಾಳಿಗೆ ತೂರಿ ಹೆಚ್ಚಿನ ಪ್ರಯಾಣಿಕರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಹೋಗುವುದರ ಮೂಲಕ ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸರಿಯಾದ ಕ್ರಮವಲ್ಲ. ಸೋಂಕು ಹರಡದಂತೆ ತಡೆಯಲು ಸರ್ಕಾರವೇ ಜಾರಿ ಮಾಡಿರುವ ನಿಯಮಗಳನ್ನು ಸರ್ಕಾರದ ಅಂಗ ಸಂಸ್ಥೆಗಳೇ ಮುರಿಯುವುದು ಸರಿಯಿಲ್ಲ. ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನೂ ಹಾಕಿಸುವ ಬಸ್ಸಿನ ವಿರುದ್ಧ ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಳ್ಳುವುದರ ಮೂಲಕ ಸೋಂಕು ಹರಡದಂತೆ ತಡೆದು ಜನರ ಜೀವ ರಕ್ಷಣೆ ಮಾಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
