ತುರುವೇಕೆರೆ
ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿರುವ ರೈತರು ಕರೊನ ಲಾಕ್ ಡೌನ್ ನಿಂದಾಗಿ ಬಿತ್ತನೆ ಬೀಜಕ್ಕಾಗಿ ಪರದಾಡುವಂತಾಗಿದೆ.ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಭರಣಿ ಮಳೆ ಉತ್ತಮವಾಗಿದ್ದು, ರೈತರು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ತಮ್ಮ ವಾಹನಗಳಲ್ಲಿ ತೆರಳಿ ಬಿತ್ತನೆ ಬೀಜಕೊಳ್ಳಲು ಮುಂದಾಗಿದ್ದಾರೆ.
ಇನ್ನುಳಿದ ರೈತರು ಲಾಕ್ಡೌನ್ ಇರುವುದರಿಂದ ಬಸ್ ಸಂಚಾರವಿಲ್ಲದೆ ಹಾಗೂ ಸ್ವಂತ ವಾಹನಗಳಿಲ್ಲದ ಕಾರಣ ತುರುವೇಕೆರೆಗೆ ಹೋಗಿ ಬಿತ್ತನೆ ಬೀಜಕೊಳ್ಳಲು ಆಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದೊರಕುತ್ತಿದ್ದವು. ಆದರೆ ಇಲ್ಲಿಗೆ ಬರಲಾಗದ ಕೆಲ ರೈತರು ಸ್ಥಳೀಯ ಖಾಸಗಿ ಅಂಗಡಿಗಳಲ್ಲಿ ಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ಕುಮಾರ್ ಬಿತ್ತನೆ ಬೀಜ ವಿತರಣೆ ಕುರಿತಂತೆ ವಿವರಣೆ ನೀಡಿದ್ದು, ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ 40 ಕ್ವಿಂಟಾಲ್ ಹೆಸರು, 5 ಕ್ವಿಂಟಾಲ್ ಅಲಸಂಡೆ ಮತ್ತು 5 ಕ್ವಿಂಟಾಲ್ ತೊಗರಿ. ದಂಡಿನಶಿವರದಲ್ಲಿ 18 ಕ್ವಿಂಟಾಲ್ ಹೆಸರು, 5 ಕ್ವಿಂಟಾಲ್ ಅಲಸಂಡೆ. ಮಾಯಸಂದ್ರದಲ್ಲಿ 6 ಕ್ವಿಂಟಾಲ್ ಹೆಸರು, 4 ಕ್ವಿಂಟಾಲ್ ಅಲಸಂಡೆ ಹಾಗು ದಬ್ಬೇಘಟ್ಟದಲ್ಲಿ 18 ಕ್ವಿಂಟಾಲ್ ಹೆಸರು ರಿಯಾಯಿತಿ ದರದಲ್ಲಿ ವಿತರಣೆಯಾಗಿದೆ.
ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಭೂಮಿ ಹದ ಮಾಡಿಕೊಂಡಿರುವ ರೈತರು ಮಳೆ ಬಿದ್ದ ತಕ್ಷಣ ಬಿತ್ತನೆ ಪ್ರಾರಂಭಿಸಲಿದ್ದಾರೆ. ನಮ್ಮಲ್ಲಿ ಸಾಕಷ್ಟು ಬಿತ್ತನೆ ಬೀಜ ದಾಸ್ತಾನು ಇದ್ದು ತಾಲ್ಲೂಕಿನ ಯಾವ ರೈತರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
