ಬೆಂಗಳೂರು
ಕೊರೋನಾ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನ ಸೆ. 26 ರವರೆಗೆ ಮಾತ್ರ ನಡೆಯಲಿದ್ದು, ಅಧಿಕೃತ ಕಾರ್ಯಕಲಾಪಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.ಸದನದ ಎಲ್ಲಾ ಸದಸ್ಯರು ಸಮಯದ ಮಿತಿ ಅರಿತು ಕಾರ್ಯಕಲಾಪಕ್ಕೆ ಸಹಕಾರ ನೀಡಬೇಕು. ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸದೇ ಸಹಕಾರ ನೀಡಬೇಕು ಎಂದರು.
ಸದನ ಸೇರಿದ ಕೂಡಲೇ ಸಭಾಧ್ಯಕ್ಷರು ಸೋಮವಾರ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಕಲಾಪವನ್ನು ಎರಡು ದಿನಗಳ ಮಟ್ಟಿಗೆ ಕಡಿತಗೊಳಿಸಲಾಗಿದೆ. ಹೀಗಾಗಿ ಸುಗಮವಾಗಿ ಕಲಾಪ ನಡೆಸಲು ಸಹಕರಿಸಬೇಕು ಎಂದಿದ್ದಾರೆ.
ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ, ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30 ರವರೆಗೆ ಸದನ ನಡೆಸಲು ಸಭೆಯಲ್ಲಿ ನಿರ್ಣಯವಾಗಿದೆ. ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದೇ ಸವಾಲಾಗಿದೆ. ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿ ಅರಿತು ಶಿಸ್ತುಬದ್ಧವಾಗಿ ಸದನ ನಡೆಸಲು ಸಹಕರಿಸಬೇಕು. ಚುಕ್ಕೆ ರಹಿತ ಪ್ರಶ್ನೋತ್ತರವನ್ನು ಸದಸ್ಯರಿಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು. ಸದನದಲ್ಲಿ ಉತ್ತರಿಸುವ ಪ್ರಶ್ನೆಗಳ ಉತ್ತರವನ್ನು ಸದನದಲ್ಲೇ ಮಂಡನೆ ಮಾಡಲಾಗುವುದು. ಆದ್ಯತೆ ಮೇಲೆ ವಿಧೇಯಕಗಳ ಚರ್ಚೆಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ಸ್ಪೀಕರ್ ಕಾಗೇರಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/09/SPEAKER-1569464401.gif)