ಶಿಕ್ಷಣ ಸಚಿವರ ಮೌಖಿಕ ಆದೇಶ : ದುರ್ನಾತ ಬೀರುತ್ತಿದ್ದ ಸ್ಥಳ ತೆರವು

ಮಧುಗಿರಿ

    ಇತ್ತೀಚೆಗೆ ಗ್ರಾಮದ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಹಲವು ದಶಕಗಳಿಂದ ತಿಪ್ಪೆಗುಂಡಿಯಾಗಿ ದುರ್ನಾತ ಬೀರುತ್ತಿದ್ದ ಸ್ಥಳವನ್ನು ಗ್ರಾಮ ಪಂಚಾಯತಿ ವತಿಯಿಂದ ತೆರವುಗೊಳಿಸಲಾಯಿತು.

    ತಾಲ್ಲೂಕಿನ ಕಸಬ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ಸರಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಕೆಲ ದಿನಗಳ ಹಿಂದೆಯಷ್ಟೇ ಆಚರಿಸಲಾಯಿತು. ಶಾಲೆಗೆ ಆಟದ ಮೈದಾನದ ಕೊರತೆ ಇದೆ, ಮಕ್ಕಳಿಗೆ ಆಟವಾಡಲು ಸಾಧ್ಯವಿಲ್ಲ. ಕೂಗಳತೆಯ ದೂರದಲ್ಲಿ ಗ್ರಾಮ ಠಾಣದ ಜಾಗವಿದ್ದರೂ ಅದೂ ಬಳಕೆಯಾಗುತ್ತಿಲ್ಲ ಎಂದು ಸಭೆಯಲ್ಲಿ ಕೆಲ ಗ್ರಾಮಸ್ಥರು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದರು.

    ಸಮಸ್ಯೆಯನ್ನು ಮನಗಂಡ ಶಿಕ್ಷಣ ಸಚಿವರು ಗ್ರಾಮಸ್ಥರು ಸೂಚಿಸುತ್ತಿರುವ ಸ್ಥಳವನ್ನು ಬಳಕೆ ಮಾಡುವಂತೆ ಗ್ರಾ.ಪಂ ಪಿಡಿಓಗೆ ಸಭೆಯಲ್ಲಿ ಸೂಚಿಸಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಗ್ರಾಮದ ವೀರಭದ್ರಶ್ವೇರ ಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಿರುವ ಶೃಂಗಾರ ವನ ಅಥವಾ ಸಿಂಗಾರಮ್ಮನ ಹಿತ್ತಲಲ್ಲಿ ಬೆಳದಿದ್ದ ಅನುಪಯುಕ್ತ ಗಿಡ ಗಂಟೆಗಳನ್ನು ಜೆಸಿಬಿ ಮೂಲಕ ಗ್ರಾಪಂ ಸಿಬ್ಬಂದಿ ಸ್ವಚ್ಛಗೊಳಿಸಿದರು.

    ಆದರೆ ಗ್ರಾಮದ ಕೆಲ ಹಿರಿಯ ಮಹಿಳೆಯರು ನಾವು ಇಲ್ಲಿಯೇ ಬಹಳ ವರ್ಷಗಳಿಂದ ತಿಪ್ಪೆ ಗುಂಡಿ ಹಾಗೂ ದನ ಕರುಗಳ ಕೊಟ್ಟಿಗೆ ಮತ್ತು ಬಯಲು ಶೌಚಾಲಯಗಳನ್ನು ಮಾಡಿಕೊಂಡಿದ್ದೇವೆ. ಈ ಸ್ಥಳವನ್ನು ತೆರವುಗೊಳಿಸುವುದಾಗಲಿ ಹಾಗೂ ಯಾವುದೆ ಕಾಮಗಾರಿ ಯನ್ನು ಮಾಡುವುದಾಗಲಿ ಬೇಡ. ನೀವೆಲ್ಲಾ ಸೇರಿಕೊಂಡು ನಿವೇಶನಗಳನ್ನು ಮಾಡಿ ಮಾರಾಟ ಮಾಡಿಕೊಳ್ಳುತ್ತೀರಿ ಎಂದು ಆರೋಪಿಸಿ, ಕೆಲ ಹೊತ್ತು ಹಿರಿಯ ಮಹಿಳೆಯರು ಗ್ರಾಪಂ ಸಿಬ್ಬಂದಿ ವಿರುದ್ಧ ಕಿಡಿ ಕಾಡಿದರು.

    ಈ ಬಗ್ಗೆ 1990 ರಲ್ಲಿಯೆ ಈ ಶೃಂಗಾರ ವನವನ್ನು ಯಾರಿಗೂ ವಿಲೆ ಮಾಡದೆ ಗ್ರಾಮದ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಕಾಯ್ದಿರಿಸಬೇಕೆಂದು ಸಿದ್ದಾಪುರ ಮಂಡಲ ಪಂಚಾಯತಿಯಲ್ಲಿ ಸರ್ವಾನುಮತದಿಂದ ಈ ಹಿಂದೆಯೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂಬುದು ಗ್ರಾಮದ ಕೆಲ ಮಹಿಳೆಯರ ವಾದವಾಗಿದೆ.

   ಈ ಬಗ್ಗೆ ಗ್ರಾಮ ಪಂಚಾಯತಿಯ ಪಿಡಿಓ ಗೌಡಪ್ಪ ಮಾತನಾಡಿ, ನಾವು ಇಲ್ಲಿ ಯಾವುದೇ ನಿವೇಶನಗಳನ್ನು ಮಾಡುತ್ತಿಲ್ಲ. ಈ ಸ್ಥಳವು ಗ್ರಾಮದ ಮಧ್ಯೆ ಭಾಗದಲ್ಲಿ ಇದೆ. ಜಾಗವನ್ನು ಸ್ವಚ್ಛಗೊಳಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗುವುದು. ಗ್ರಾಮದ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಸಾಮೂಹಿಕ ಶೌಚಾಲಯವನ್ನು ನಿರ್ಮಿಸಿ ಕೊಡಲಾಗುವುದು ಎಂದರು.

    ತಾಪಂ ಸದಸ್ಯ ರಾಮಣ್ಣ ಮಾತನಾಡಿ, ಶೃಂಗಾರ ವನವು ತನ್ನದೇ ಆದಂತಹ ಇತಿಹಾಸವನ್ನು ಹೊಂದಿದ್ದು, ವಿರಕ್ತ ಮಠಕ್ಕೆ ಸೇರಿದ ಜಾಗವಾಗಿದೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ಇದೊಂದು ಬಯಲು ಶೌಚಾಲಯವಾಗಿ ಜನರು ಮಾರ್ಪಡಿಸಿಕೊಂಡಿದ್ದಾರೆ. ಈ ಜಾಗವನ್ನು ಆಟದ ಮೈದಾನಕ್ಕೆ ಅಥವಾ ಗ್ರಾಮದ ಅಭಿವೃದ್ಧಿಗೆ ಬಳಸಿಕೊಂಡರೆ ಎಲ್ಲ್ಲರಿಗೂ ಅನುಕೂಲವಾಗಲಿದೆ ಎಂದರು.

    ಮುಖಂಡ ಅಶ್ವತ್ಥಪ್ಪ ಮಾತನಾಡಿ, ಹಲವು ದಶಕಗಳಿಂದ ಈ ಜಾಗವು ಪಾಳು ಬಿದ್ದಿದೆ. ಈ ಜಾಗದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ, ದುರ್ನಾತದಿಂದ ಕೂಡಿದೆ. ಅಕ್ಕ ಪಕ್ಕದ ಮನೆಯವರು ಅನೇಕ ರೀತಿ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಗಿಡಗೆಂಟೆಗಳು ಹೆಚ್ಚಾಗಿರುವುದರಿಂದ, ಅವುಗಳನ್ನು ತೆರವು ಗೊಳಿಸಲಾಗುತ್ತಿದೆ. ಈ ಸ್ಥಳವನ್ನು ಗ್ರಾಮಸ್ಥರ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡುತ್ತಿರುವುದು ಸೂಕ್ತವಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link