ಚಿಕ್ಕನಾಯಕನಹಳ್ಳಿ

ಪಟ್ಟಣದ ಸೋಮವಾರದ ಸಂತೆ ಯಾವುದೇ ಪ್ರತಿಭಟನೆ, ಗದ್ದಲ, ಗಲಾಟೆ ಇಲ್ಲದೆ ಎ.ಪಿ.ಎಂ.ಸಿ. ಆವರಣದಲ್ಲಿ ನಡೆಯಿತು.ಸರ್ಕಾರಿ ಪಿ.ಯು.ಕಾಲೇಜಿಗೆ ತೆರಳುವ ಮಾರ್ಗ ಮಧ್ಯ ಹಾಗೂ ತೀ.ನಂ.ಶ್ರೀ ಸಭಾಂಗಣದ ಆವರಣದಲ್ಲಿ ನಡೆಯುತ್ತಿದ್ದ ವಾರದಸಂತೆ ಜಾಗವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಎ.ಪಿ.ಎಂ.ಸಿ ಆವರಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು.
ಸಂತೆ ಜಾಗ ಬದಲಾಗಬಾರದೆಂದು ಕೆಲ ವ್ಯಾಪಾರಸ್ಥರು ಕಳೆದ ವಾರ ಪ್ರತಿಭಟನೆ ನಡೆಸಿದ್ದರು. ಆದರೆ ಸಂತೆ ಎ.ಪಿ.ಎಂ.ಸಿ ಆವರಣದಲ್ಲಿ ನಡೆಯುತ್ತದೆ ಎಂದು ಪುರಸಭೆ ಅಧಿಕಾರಿಗಳು, ಪೆÇಲೀಸ್ನವರು ಖುದ್ದು ವ್ಯಾಪಾರಸ್ಥರಿಗೆ ತಿಳಿಸಿದರು ಹಾಗೂ ಎಪಿಎಂಸಿಯಲ್ಲಿ ಸಂತೆ ನಡೆಯಲು ತೀರ ಅವಶ್ಯವಿರುವ ಸೌಲಭ್ಯವನ್ನು ಒದಗಿಸಲಾಗುವುದು ಎಲ್ಲರೂ ಸಹಕರಿಸಬೇಕು ಎಂದಿದ್ದರು.
ಬದಲಾದ ಎ.ಪಿ.ಎಂ.ಸಿ ಆವರಣವನ್ನು ಸಂತೆಗೆ ಅನುಕೂಲವಾಗುವಂತೆ ಪುರಸಭೆಯವರು ಸ್ವಚ್ಛಗೊಳಿಸಿ ವ್ಯಾಪಾರಸ್ಥರಿಗೆ ಅನುವು ಮಾಡಿಕೊಟ್ಟರು. ಅದರಂತೆ ಈ ವಾರ ನಡೆದ ಸಂತೆಗೆ ವ್ಯಾಪಾರಸ್ಥರು ರಾತ್ರಿಯಿಂದಲೇ ತಮ್ಮ ಜಾಗವೆಂದು ಖಾತರಿಪಡಿಸಿಕೊಂಡು ಸಂತೆ ವ್ಯಾಪಾರವನ್ನು ಸೋಮವಾರ ನಡೆಸಿದರು.
ಮರಿ ಸಂತೆಗೆ ಜಾಗ ಎಲ್ಲಿ..?
ಪ್ರತಿ ಸೋಮವಾರ ಕುರಿಗಳ ವಹಿವಾಟು ಎ.ಪಿ.ಎಂ.ಸಿ.ಆವರಣದಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ತರಕಾರಿ ಸಂತೆಯನ್ನು ಅಲ್ಲಿಗೆ ವರ್ಗಾಯಿಸುವುದರಿಂದ ಎರಡೂ ಸಂತೆಗೆ ಬರುವ ಜನರ ಸಂಖ್ಯೆಯೂ ಹೆಚ್ಚು, ವಾಹನಗಳ ದಟ್ಟಣಿಯೂ ಅಧಿಕ. ಇದರಿಂದ ಜನರಿಗೆ ಓಡಾಡಲು ತೊಂದರೆಯಾಗತ್ತದೆ ಎಂಬುದು ಕೆಲವರ ಅನಿಸಿಕೆ. ಇನ್ನು ಕೆಲವರು ಎರಡೂ ಸಂತೆ ಒಂದೇ ಕಡೆ ನಡೆಯಬೇಕು, ಮರಿ ಸಂತೆಯನ್ನು ಉಗ್ರಾಣದ ಹಿಂಭಾಗದ ಜಾಗದಲ್ಲಿ ಮಾಡಿದರೆ ಸಮಸ್ಯೆಯಾಗದು. ಆದರೆ ಅಲ್ಲಿಗೆ ಹೋಗಿ ಬರಲು ವಾಹನಗಳು, ಜನರು ಓಡಾಡಲು ವ್ಯವಸ್ಥಿತವಾದ ರಸ್ತೆ ಆದರೆ ಉತ್ತಮ ಎನ್ನುವುದು ಹಲವರ ಅನಿಸಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








