ಹುಳಿಯಾರು:
ವಿಶೇಷ ವರದಿ: ಎಚ್.ಬಿ.ಕಿರಣ್ ಕುಮಾರ್
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಕಡ್ಡಾಯ ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ 25 ರಷ್ಟು ಸೀಟುಗಳಿಗೆ ಪ್ರವೇಶಾತಿ ಕೋರಿ ಒಂದೇ ಒಂದು ಅರ್ಜಿ ಬಂದಿಲ್ಲ!
ಹೌದು, ಹಿಂದಿನ ವರ್ಷಗಳಲ್ಲಿ ಆರ್ಟಿಇ ಅಡಿಯಲ್ಲಿ ಸೀಟು ದಕ್ಕಿಸಿಕೊಳ್ಳುವುದು ಹರಸಾಹಸವಾಗಿತ್ತು. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಅವಕಾಶ ಪಡೆಯಲು ಪೋಷಕರು ಹರಸಾಹಸ ಪಡುತ್ತಿದ್ದರು. ಹಾಗಾಗಿ ಕಳೆದ ವರ್ಷ ತಾಲೂಕಿನ 21 ಶಾಲೆಗಳಿಗೆ ಲಭ್ಯವಿದ್ದ 218 ಸೀಟುಗೆ ಮುನ್ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆದರೆ 2019–20ನೇ ಶೈಕ್ಷಣಿಕ ಸಾಲಿಗೆ ಅರ್ಜಿ ಸಲ್ಲಿಕೆಗೆ ಗಡುವು ಮುಗಿದಿದ್ದು 7 ಶಾಲೆಯಿಂದ ಲಭ್ಯವಿದ್ದ ಶೇ.25 ರ ಸೀಟುಗಳಿಗೆ ಯಾವುದೇ ಅರ್ಜಿ ದಾಖಲಾಗಿಲ್ಲ. ಇದಕ್ಕೆ ಸರ್ಕಾರ ಆರ್ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವುದೇ ಬಲವಾದ ಕಾರಣ ಎನ್ನಲಾಗಿದೆ.
ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಪರಿಷ್ಕೃತ ನಿಯಮ ರೂಪಿಸಿದೆ. ಈ ನಿಯಮದ ಪ್ರಕಾರ ತಾಲ್ಲೂಕಿನಲ್ಲಿ ಈ ವರ್ಷ ಒಂದೂ ಅನುದಾನರಹಿತ ಶಾಲೆಯನ್ನು ಗುರುತಿಸಿಲ್ಲ. ಅಲ್ಲದೆ ಹುಳಿಯಾರು ಹೋಬಳಿಯಲ್ಲಿನ 7 ಅನುದಾನ ಸಹಿತ ಶಾಲೆಗಳನ್ನು ಬಿಟ್ಟರೆ ತಾಲೂಕಿನಲ್ಲಿ ಅನುದಾನ ಸಹಿತ ಶಾಲೆಗಳೂ ಇಲ್ಲ. ಹಾಗಾಗಿ ಹುಳಿಯಾರು ಹೋಬಳಿಯ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು.
ಆದರೆ ಪ್ರತಿಷ್ಠಿತ ಶಾಲೆಗಳಿಲ್ಲ ಎನ್ನುವ ಕಾರಣದಿಂದ ಪೋಷಕರು ನಿರಾಸಕ್ತಿ ತೋರಿದ್ದಾರೆ ಎಂಬುದು ಹಾಗಾಗಿ ಹಿಂದಿನ ವರ್ಷಗಳಲ್ಲಿ ಅರ್ಜಿ ಆಹ್ವಾನಿಸಿದ ಕೂಡಲೇ ತಾ ಮುಂದು ನಾ ಮುಂದು ಎಂದು ನೂಕು ನುಗ್ಗಲಿನಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದ್ದವು . ಹುಳಿಯಾರಿನ ವಿದ್ಯಾವಾರಿಧಿ, ವಾಸವಿ, ಜ್ಞಾನಜ್ಯೋತಿ ಹೀಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಆರ್ಟಿಇ ಅಡಿ ತಮ್ಮ ಮಕ್ಕಳನ್ನು ಸೇರಿಸಲು ಪರದಾಡುತ್ತಿದ್ದರು. ಅಧಿಕಾರಿಗಳಿಗೆ ಸೀಟು ಹಂಚಿಕೆ ಮಾಡುವುದೇ ಕಷ್ಟವಾಗುತ್ತಿತ್ತು. ಆದರೆ ಈ ವರ್ಷ ಪೋಷಕರು ಅರ್ಜಿ ಸಲ್ಲಿಸಲು ಮುಂದಾಗದಿರುವುದರಿಂದ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಆರ್ಟಿಇ ಕುರಿತು ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದುಳಿದ ವರ್ಗ ಹಾಗೂ ಬಡಮಕ್ಕಳ ಶಿಕ್ಷಣ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ. ವಾಸಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಅವಕಾಶ ನೀಡದಿರುವುದು ಬಡಮಕ್ಕಳ ಶಿಕ್ಷಣದ ಹಕ್ಕನ್ನು ಸರ್ಕಾರವೇ ಕಸಿದುಕೊಳ್ಳುತ್ತಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವ ಸಂವಿಧಾನದ ಆಶಯ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳಿತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/8HULIYAR5.gif)