ತುರುವೇಕೆರೆ
ಕೊರೊನಾ ವೈರಸ್ ಶಂಕಿತರ, ದ್ವಿತೀಯ ಸಂಪರ್ಕಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿ ಸಮರ್ಪಕ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.
ತಾಲ್ಲೂಕಿನ ದೆಬ್ಬೇಘಟ್ಟ ಹೋಬಳಿ ಅರೆಮಲ್ಲೇನಹಳ್ಳಿ ರಾಣಿ ಚೆನ್ನಮ್ಮ ಶಾಲೆಯಲ್ಲಿ 15 ಮಂದಿ ಹಾಗೂ ಗುಡ್ಡೇನಹಳ್ಳಿ ಮೊರಾರ್ಜಿ ಶಾಲೆಯಲ್ಲಿ 37 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಒಂದೊಂದು ಕೊಠಡಿಯಂತೆ ನೀಡಲಾಗಿದ್ದು, ಇವರಿಗೆ ಊಟದ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಮಾಡಲಾಗಿದೆ.
ಇವರ ಆರೋಪವೆಂದರೆ ಪ್ರತಿ ದಿನ ಪ್ಲಾಸ್ಟಿಕ್ ಚೀಲಗಳಲ್ಲಿ ಊಟದ ಪೊಟ್ಟಣಗಳನ್ನು ತಂದು ನೀಡಲಾಗುತ್ತಿದೆ. ಪ್ಲಾಸ್ಟಿಕ್ ಕವರ್ಗಳಲ್ಲಿ ಕೇವಲ ಮುದ್ದೆ, ಅನ್ನ, ಸಾರು ಮಾತ್ರ ನೀಡುತ್ತಿದ್ದು ಊಟದ ವೇಳೆಗೆ ತಣ್ಣಗಾಗಿರುತ್ತದೆ. ಊಟದ ಜೊತೆ ಮಜ್ಜಿಗೆ, ಮೊಸರು ನೀಡುತ್ತಿಲ್ಲ. ಇರುವ ಒಂದೇ ಟ್ಯಾಪ್ನಲ್ಲಿ ಕುಡಿಯುವ ನೀರನ್ನು 15 ಮಂದಿಯೂ ಉಪಯೋಗಿಸಬೇಕಾಗಿದೆ.
ಕೊಠಡಿಗಳಲ್ಲಿ ಸೊಳ್ಳೆಗಳ ಹಾವಳಿ ಜಾಸ್ತಿಯಿದ್ದು, ಸೊಳ್ಳೆಪರದೆ ಇಲ್ಲದ್ದರಿಂದ ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಅನಾರೋಗ್ಯ ಕಾಡಬಹುದೆಂಬ ಚಿಂತೆ ಕಾಡತೊಡಗಿದೆ. ಊಟ ನೀಡುವವರ ಬಳಿ ನಿವೇದಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತಾಲ್ಲೂಕು ಆಡಳಿತ ಇತ್ತ ಗಮನ ಹರಿಸಿ ಇನ್ನು ಮುಂದಾದರೂ ಅಗತ್ಯ ಸೌಕರ್ಯ ಒದಗಿಸಿಕೊಡಲಿ ಎಂಬುದು ಕ್ವಾರಂಟೈನ್ನಲ್ಲಿರುವವರ ಬೇಡಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








